ಮಂಡ್ಯ: ಆ ಕುಟುಂಬಕ್ಕೆ ಕಿತ್ತು ತಿನ್ನುವ ಬಡತನ. ಆ ಮನೆಯ ಯಜಮಾನ ಆಟೋ ಓಡಿಸಿ (Auto Driver) ಸಂಪಾದಿಸುತ್ತಿದ್ದ ಅಲ್ಪ ಹಣದಿಂದಲೇ ಐದು ಮಂದಿ ಜೀವನ ನಡೆಸುತ್ತಿದ್ದರು. ಸರ್ಕಾರದಿಂದ ನೀಡುತ್ತಿದ್ದ ಉಚಿತ ಪಡಿತರವೇ ಎರಡು ಹೊತ್ತಿನ ಊಟಕ್ಕೆ ಆಧಾರವಾಗಿತ್ತು. ಈ ನಡುವೆ ಅಧಿಕಾರಿಯ ನಿರ್ಲಕ್ಷ್ಯದಿಂದ ಆ ಕುಟುಂಬದ ಅನ್ನವನ್ನೇ ಕಸಿದಿದೆ. ಒಂದು ಸೊನ್ನೆಯಿಂದಾದ ತಪ್ಪಿಗೆ ಪಡಿತರ ಕಾರ್ಡ್ ರದ್ದಾಗಿದೆ. (BPL Card Canceled) ಹೌದು, ಅಧಿಕಾರಿಗಳು ಮಾಡಿದ ನಿರ್ಲಕ್ಷದಿಂದಾಗಿ ಬಡ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಪರಿಣಾಮ ತುತ್ತು ಅನ್ನಕ್ಕೂ ಕುಟುಂಬದ ಸದಸ್ಯರು ಪರಿತಪಿಸುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂ ನಲ್ಲಿ (Ganjam Srirangapattana Taluk) ನಡೆದಿದೆ.
ಒಂದು ಸೊನ್ನೆಯಿಂದ ಬಿಪಿಎಲ್ ಕಾರ್ಡ್ ರದ್ದು..!
ಹೌದು... ಅಧಿಕಾರಿಗಳ ಎಡವಟ್ಟಿನಿಂದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಲೋಕೇಶ್ ಕುಟುಂಬ (Auto Driver Lokesh) ಹೈರಾಣಾಗಿದೆ. ಮನೆ ಮಾಲೀಕ ಲೋಕೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಪ್ರತಿ ನಿತ್ಯ ಆಟೋ ಓಡಿಸಿ 200- 300 ರೂಪಾಯಿ ಸಂಪಾದಿಸುತ್ತಾರೆ. ಅದೇ ಹಣದಲ್ಲಿ ಕುಟುಂಬದ 5 ಮಂದಿ ಬದುಕು ನಡೆಸುತ್ತಿದ್ದಾರೆ. ಲೋಕೇಶ್ ಚಿಕ್ಕ ಮಗ ಕುಮಾರ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆತನ ವಿದ್ಯಾರ್ಥಿ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ಪಡೆದುಕೊಂಡಿದ್ದರು. ಆ ಪ್ರಮಾಣ ಪತ್ರದಲ್ಲಿ ವಾರ್ಷಿಕ ಆದಾಯವನ್ನು 20 ಸಾವಿರ ಎಂದು ನಮೂದಿಸುವ ಬದಲು 2 ಲಕ್ಷ ಎಂದು ಅಧಿಕಾರಿಗಳು ನಮೂದಿಸಿದ್ದರು. ಈ ಒಂದು ಎಡವಿಟ್ಟಿನಿಂದ ಒಂದು ಸೊನ್ನೆ ಹೆಚ್ಚಾಗಿ ನಮೂದಿಸಿದ ಹಿನ್ನೆಲೆಯಲ್ಲಿ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದೆ.
ಇನ್ನು ಇತ್ತೀಚೆಗೆ ಲೋಕೇಶ್ ಪತ್ನಿ ಪೂರ್ಣಿಮಾ ಅನಾರೋಗ್ಯ ಪೀಡಿತರಾಗಿದ್ದರು. ಹಿಗಾಗಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಹೋದಾಗ ಆಯುಷ್ಮಾನ್ ಯೋಜನೆಯೂ ಸಿಗುವುದಿಲ ಎಂದು ಗೊತ್ತಾಗುತ್ತಿದ್ದಂತೆ ಕಂಗಾಲಾದ ಲೋಕೇಶ್, ಸಾಲ ಮಾಡಿ ಹೆಂಡತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ತಹಸೀಲ್ದಾರ್ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಾಗ ಕಟುಂಬದ ವಾರ್ಷಿಕ ಆದಾಯ 20 ಸಾವಿರ ಎಂದು ನಮೂದಿಸಿ ಮತ್ತೊಂದು ಆದಾಯ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆದರೆ ಈಗ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಬಿಪಿಎಲ್ ಕಾರ್ಡ್ ನೀಡದೆ ಸತಾಯಿಸುತ್ತಿದ್ದಾರಂತೆ. ಈ ಬಗ್ಗೆ ಲೋಕೇಶ್ ಹಲವು ಬಾರಿ ತಾಲೂಕು ಕಚೇರಿ ಅಲೆದರು ಕೂಡ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ಲೋಕೇಶ್ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿ ಮಾಡಿದ ಒಂದೇ ಒಂದು ಸೊನ್ನೆ ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ, ಸತಾಯಿಸದೇ ಬಿಪಿಎಲ್ ಕಾರ್ಡ್ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದೆ. ಎಷ್ಟೋ ಶ್ರೀಮಂತರಿಗೆ ಇಂದಿಗೂ ಬಿಪಿಎಲ್ ಕಾರ್ಡ್ ಕರುಣಿಸುತ್ತಿರುವ ಅಧಿಕಾರಿ ವರ್ಗಗಳು ಇಂತಹ ಬಡವರ ಕಣ್ಣೀರಿಗೆ ಕರಗದೆ ಇರೋದು ದುರಂತವೆ ಸರಿ.
ಇದನ್ನು ಓದಿ: Weird Fever: ಕುಶಾಲನಗರ ಸುತ್ತಮುತ್ತ ಮಕ್ಕಳಿಗೆ ವಿಚಿತ್ರ ಜ್ವರ; ಆತಂಕದಲ್ಲಿ ಪೋಷಕರು
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ವರದಿ - ಸುನೀಲ್ ಗೌಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ