ಒಡಿಶಾ: 900 ರೂಪಾಯಿ ಹಾಗೂ ಕೆಲವು ಚಪ್ಪಲಿಗಳನ್ನು ಕದ್ದಿದ್ದಾಳೆಂದು ಆರೋಪಿಸಿ ಬುಡಕಟ್ಟು ಸಮುದಾಯದ (Tribal Community) ಅಪ್ರಾಪ್ತ ಬಾಲಕಿಯನ್ನು ಕಂಬಕ್ಕೆ ಕಟ್ಟಿ, ಶೂಗಳ ಹಾರ ಹಾಕಿ ಥಳಿಸಿರುವ ಅಮಾನವೀಯ (Inhuman) ಘಟನೆ ಒಡಿಶಾದ (Odisha) ನಬರಂಗ್ಪುರ ಜಿಲ್ಲೆಯಲ್ಲಿ (Nabarangpur district) ನಡೆದಿದೆ. ಬಾಲಕಿ ಹೂವುಗಳನ್ನು ಕೊಯ್ಯಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಕೆಲವು ಹುಡುಗರ ಗುಂಪು ಅವಳನ್ನು ಗ್ರಾಮದ ಮಧ್ಯಭಾಗಕ್ಕೆ ಎಳೆದೊಯದ್ದು, ಕಂಬಕ್ಕೆ ಕಟ್ಟಿ ಥಳಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ (Arrest) ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
₹ 900 ಹಾಗೂ ಚಪ್ಪಲಿ ಕದ್ದ ಆರೋಪ
ಕುಂಡೇಯಿ ಪೊಲೀಸ್ ಠಾಣಾ ವ್ಯಾಪ್ತಿಯ ತರಂಗಪುರಿ ಗ್ರಾಮದ ಬಾಲಕಿ ಶುಕ್ರವಾರ ಮಧ್ಯಾಹ್ನ ಮಹುವಾ ಹೂವುಗಳನ್ನು ಸಂಗ್ರಹಿಸಲು ಸಮೀಪದ ಕಾಡಿಗೆ ತೆರಳಿದ್ದ ವೇಳೆ ಗ್ರಾಮದ ಕೆಲವು ಯುವಕರು ಆಕೆಯನ್ನು ಕಾಡಿನಿಂದ ಗ್ರಾಮದ ಮಧ್ಯಭಾಗಕ್ಕೆ ಎಳೆದು ಕೊಂಡು ಹೋಗಿದ್ದಾರೆ. ಗ್ರಾಮದ ಮನೆಯೊಂದರಲ್ಲಿ 900 ರೂಪಾಯಿಗಳುನ್ನು ಹಾಗೂ ಕೆಲವು ಚಪ್ಪಲಿಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಯುವಕರು ಬಾಲಕಿಯನ್ನು ಕಂಬಕ್ಕೆ ಕಟ್ಟಿ, ಥಳಿಸಿ, ಬಳಸಿದ ಶೂಗಳಿಂದ ಹಾರ ಮಾಡಿ ಆಕೆಯ ಕೊರಳಿಗೆ ಹಾಕಿದ್ದಾರೆ. ಇಷ್ಟೇ ಅಲ್ಲದೆ ಅವಳನ್ನು ಅಸಹ್ಯ ಭಾಷೆಯಲ್ಲಿ ನಿಂದಿಸಿ ಅವಮಾನಿಸಿದ್ದಾರೆ ಎಂದು ಕುಂಡೇಯಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್ ಸೇಥಿ ಮಾಹಿತಿ ನೀಡಿದ್ದಾರೆ.
ಬಾಲಕಿಯನ್ನು ಥಳಿಸಿ , ಶೂಗಳ ಹಾರ ಹಾಕಿ ಅವಮಾನಿಸಿರುವುದಲ್ಲದೆ, ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದುವೆಯಾಲು ಒಪ್ಪದ ಹುಡುಗಿ ಮೇಲೆ ಹಲ್ಲೆ
ತನ್ನನ್ನು ವಿವಾಹವಾಗಲು ಒಪ್ಪದ 16 ವರ್ಷದ ಯುವತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಜುಟ್ಟು ಹಿಡಿದು ಎಳೆದೊಯ್ದ ಅಮಾವೀಯ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಛತ್ತೀಸ್ಗಢದ ಗುಧಿಯಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ 16 ವರ್ಷದ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ಆದರೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಆಕೆ ಮೇಲೆ ಹಲ್ಲೆ ನಡೆಸಿ ಬಳಿಕ ಆಕೆಯ ಜುಟ್ಟು ಹಿಡಿದು ರಸ್ತೆಯ ತುಂಬೆಲ್ಲಾ ಎಳೆದಾಡಿದ್ದಾನೆ.
ಬಾಲಕಿಯ ತಾಯಿಗೂ ಮದುವೆ ಇಷ್ಟವಿರಲಿಲ್ಲ
ಬಾಲಕಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಹಿಡಿದೆಳೆದುಕೊಂಡು ಹಿಂಸಿಸಿದ ವ್ಯಕ್ತಿಯನ್ನು ಓಂಕಾರ್ ತಿವಾರಿ ಅಲಿಯಾಸ್ ಮನೋಜ್ (47) ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯು ಬಾಲಕಿಯನ್ನು ಮದುವೆಯಾಗುವಂತೆ ಈ ಹಿಂದಿನಿಂದಲೂ ಹಿಂಸೆ ನೀಡುತ್ತಿದ್ದನಂತೆ. ಆದರೆ ಆಕೆಗೆ ಈತನ ಜೊತೆ ಮದುವೆ ಆಗಲು ಇಷ್ಟವಿರಲಿಲ್ಲ. ಅಲ್ಲದೇ ಆಕೆಯ ತಾಯಿಗೂ ಇಷ್ಟವಿರಲಿಲ್ಲ. ಹೀಗಾಗಿ ಆಕೆಗೆ ಬೆದರಿಸಿ ಇಂತಹ ಕೃತ್ಯ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಂಭೀರ ಸ್ಥಿತಿಯಲ್ಲಿ ಬಾಲಕಿ
ಆರೋಪಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಬಾಲಕಿಯನ್ನು ಕೂಡಲೇ ಅಲ್ಲಿದ್ದವರು ಯಾರೋ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ಕೂಡ ಆಕೆಯ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಿಲ್ಲ, ಆಕೆಯನ್ನು ಅಬ್ಸರ್ವೇಶನ್ನಲ್ಲಿ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ