ಜಗತ್ತಿನಾದ್ಯಂತ ಹಲವಾರು ರೀತಿಯಲ್ಲಿ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತದೆ. ಅದರಲ್ಲೂ ಕೆಲವೊಂದು ಘಟನೆಗಳಿಗೆ ಇಂದಿಗೂ ಸರಿಯಾದ ನ್ಯಾಯನೇ ದೊರೆತಿಲ್ಲ. ಅದೇ ರೀತಿ ಆಗ್ರಾದ ಜನಪ್ರಿಯ ಪತ್ರಿಕೆಯೊಂದರ ಮುಖ್ಯ ಸಂಪಾದಕರಾಗಿರುವ ವಿಜಯ್ ಶರ್ಮಾ (Vijay Sharma) ಅವರ ಪತ್ನಿ ನೀಲಂ ಶರ್ಮಾರನ್ನು 2014 ರ ಫೆಬ್ರವರಿ 20 ರಂದು ಅವರ ಸ್ವಂತ ಮನೆಯಲ್ಲೇ ಹತ್ಯೆ ಮಾಡಿದ್ದರು. ಅವರನ್ನು ಕೊಲೆ ಮಾಡಿದ ಬಳಿಕ ಅವರ ಮನೆಯನ್ನು ಸಹ ದರೋಡೆ (Robbery) ಮಾಡಲಾಗಿತ್ತು. ಆದರೆ ಇದುವರೆಗೂ ಅದರ ಬಗ್ಗೆ ವಿಜಯ್ ಶರ್ಮಾಗಾಗಲಿ, ಪೊಲೀಸರಿಗಾಗಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸ್ವಲ್ಪ ದಿನಗಳ ನಂತರ ಅವರ ಮನೆಯ ಸಾಕು ಗಿಳಿಯೊಂದು (Parrot Witness) ಹಠಾತ್ತನೇ ವಿಜಯ್ ಶರ್ಮಾ ಅವರ ಸೋದರಳಿಯನ ಹೆಸರನ್ನು ಕೂಗಲಾರಂಭಿಸಿತು.
ಇನ್ನು ವಿಜಯ್ ಶರ್ಮಾ ಅವರು ಅದನ್ನು ಕೇಳಿದ ನಂತರ ಅನುಮಾನಗೊಂಡು ತಕ್ಷಣ ಪೊಲೀಸರಿಗೆ ದೂರು ನೀಡಿದರು. ಪೊಲೀಸರ ವಿಚಾರಣೆಯ ನಂತರ ಸೋದರಳಿಯ ಆಶು, ತನ್ನ ಸ್ನೇಹಿತ ರೋನಿ ಮಾಸ್ಸಿ ಸಹಾಯದಿಂದ ನೀಲಂ ಅವರನ್ನು ಕೊಲೆ ಮಾಡಿರುವುದು ಬೆಳಕಿದೆ ಬಂದಿದೆ.
ಆರೋಪಿಗಳಿಗೆ ಕಠಿಣ ಶಿಕ್ಷೆ
ಹೌದು, ಈ ವರ್ಷಕ್ಕೆ ನೀಲಂ ಶರ್ಮಾ ಅವರ ಕೊಲೆ ನಡೆದು ಬರೋಬ್ಬರಿ 9 ವರ್ಷಗಳಾದವು. ಈ ಬಗ್ಗೆ ತನಿಖೆ ನಡೆಸಿದ ನಂತರ ನ್ಯಾಯಾಧೀಶ ಮೊಹಮ್ಮದ್ ರಶೀದ್ ಅವರು ನೀಲಂ ಶರ್ಮಾ ಅವರನ್ನು ಹತ್ಯೆಗೈದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ಆಶು ಅವರ ತಪ್ಪೊಪ್ಪಿಗೆ ಮತ್ತು ಸಾಕ್ಷಿಯ ಆಧಾರದ ಮೇಲೆ 72 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಗೆ ಪೋಷಕರ ವಿರೋಧ; ರಾಮದೇವರ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!
ಆಗಿದ್ದಾದರೂ ಏನು?
ವಿಜಯ್ ಶರ್ಮಾ ಅವರು 2014 ರ ಫೆಬ್ರವರಿ 20 ರಂದು ತಮ್ಮ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಅವರೊಂದಿಗೆ ಫಿರೋಜಾಬಾದ್ನಲ್ಲಿ ಮದುವೆಗೆ ಹೊರಟಿದ್ದರು. ಆದರೆ ಈ ಸಂದರ್ಭದಲ್ಲಿ ನೀಲಂ ಶರ್ಮಾ ಅವರು ಮನೆಯಲ್ಲೇ ಇದ್ದರಂತೆ. ಮದುವೆ ಮುಗಿಸಿ ತಡರಾತ್ರಿ ಮನೆಗೆ ವಾಪಸ್ಸಾದಾಗ ಪತ್ನಿ ಹಾಗೂ ಸಾಕು ನಾಯಿಯ ಹತ್ಯೆಯಾಗಿತ್ತು. ಶಾರ್ಪ್ ವಸ್ತುವಿನಿಂದ ನಾಯಿ ಹಾಗೂ ಶರ್ಮಾ ಅವರ ಹೆಂಡತಿಯನ್ನು ಕೊಲೆ ಮಾಡಲಾಗಿತ್ತು. ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು.
ಗಿಳಿಯ ಮೇಲೆಯೇ ಅನುಮಾನಿಸಿದ ಶರ್ಮಾ
ಇನ್ನು ದಿನಗಳು ಹೋದಂತೆ ವಿಜಯ್ ಶರ್ಮಾ ಅವರು ಮುದ್ದಿನಿಂದ ಸಾಕಿದ ಗಿಳಿಯೂ ಊಟ, ನೀರು ಬಿಡಲು ಆರಂಭಿಸಿತು. ಇದನ್ನೇ ನೋಡಿದ ಶರ್ಮಾ ಅವರು ಈ ಕೊಲೆಗೆ ಗಿಳಿಯೇ ಸಾಕ್ಷಿಯಾಗಿರಬಹುದು ಎಂದು ಅರಿತು, ಅನುಮಾನದಲ್ಲಿದ್ದ ಒಂದೊಂದೇ ಹೆಸರನ್ನು ಗಿಳಿಯ ಮುಂದೆ ಹೇಳಲು ಆರಂಭಿಸಿದರು. ಆದರೆ ಈ ಸಂದರ್ಭದಲ್ಲಿ ಆಶು ಹೆಸರನ್ನು ಹೇಳಿದ ತಕ್ಷಣ ಗಿಳಿಯೂ ಗಾಬರಿಗೊಂಡಿತು ಮತ್ತು ನಂತರ ಪದೇ ಪದೇ ಆಶು- ಆಶು ಎಂದು ಕೂಗಲು ಆರಂಭಿಸಿತು. ಬಳಿಕ ಪೊಲೀಸರ ಬಳಿಯೂ ಆಶು ಹೆಸರೆತ್ತಿದಾಗ ಇದೇ ರೀತಿಯ ಪ್ರತಿಕ್ರಿಯೆ ನೀಡಿದ ಗಿಳಿಯನ್ನು ನೋಡಿ ತಕ್ಷಣ ಆಶುವನ್ನು ಬಂಧಿಸಿದರು. ವಿಚಾರಣೆಯ ನಂತರ ಆಶುವೇ ಅಪರಾಧಿಯೆಂದು ಸಾಬೀತಾಯಿತು.
ನೀಲಂ ಕೊಲೆಯಾಗಿದ್ದು ಏಕೆ?
ನೀಲಂ ಶರ್ಮಾ ಅವರ ಪುತ್ರಿ ನಿವೇದಿತಾ ಶರ್ಮಾ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಆಶು ಮನೆಗೆ ಆಗಾಗ ಬರುತ್ತಿದ್ದರು ಮತ್ತು ಹಲವು ವರ್ಷಗಳ ಕಾಲ ಮನೆಯಲ್ಲಿ ಅವರ ಜೊತೆಗೆ ಇದ್ದರು ಎಂದು ತಿಳಿಸಿದ್ದಾರೆ. ಎಂಬಿಎ ಪದವಿ ಪಡೆಯಲು ಆಕೆಯ ತಂದೆ 80,000 ರೂಪಾಯಿ ಹಣವನ್ನು ನೀಡಿದ್ದರಂತೆ. ಇನ್ನು ಮನೆಯಲ್ಲಿ ಚಿನ್ನಾಭರಣ ಮತ್ತು ನಗದನ್ನೆಲ್ಲಾ ಎಲ್ಲೆಲ್ಲಿ ನಾವು ಇಡುತ್ತೇವೆ ಎಂದು ಆಶುಗೆ ಸರಿಯಾಗಿ ತಿಳಿದಿತ್ತು. ಇದಕ್ಕಾಗಿಯೇ ಅವರು ಸುಲಭದಲ್ಲಿ ದರೋಡೆ ಮಾಡಿದ್ದಾರೆ ಎಂದು ನಿವೇದಿತಾ ಹೇಳಿದ್ದಾರೆ. ಇನ್ನು ಆ ಸಂದರ್ಭಲ್ಲಿ ಆಶು ಸಾಕು ನಾಯಿಯನ್ನು ಚಾಕುವಿನಿಂದ ಒಂಬತ್ತು ಬಾರಿ ಮತ್ತು ನೀಲಂ ಅವರಿಗೆ 14 ಬಾರಿ ಇರಿದಿದ್ದಾನೆ. ಆತನ ಉದ್ದೇಶ ಕೊಲೆ ಮಾಡುವುದು ಮತ್ತು ಲೂಟಿ ಮಾಡುವುದೇ ಆಗಿತ್ತು ಎಂದಿದ್ದಾರೆ.
ಇನ್ನು ಈ ಘಟನೆಯ ಮುಖ್ಯ ಸಾಕ್ಷಿಯೇ ಗಿಳಿ. ಆದರೆ ಎಲ್ಲೂ ಉಲ್ಲೇಖಿಸಿಲ್ಲ. ಈ ಘಟನೆ ನಡೆದ 6 ತಿಂಗಳ ನಂತರ ಅಂದರೆ ನವೆಂಬರ್ 14, 2020 ರಂದು ಈ ಗಿಳಿ ಸಾವನ್ನಪ್ಪಿದೆ ಎಂದು ನಿವೇದಿತಾ ಹೇಳಿದ್ದಾರೆ. “ನನ್ನ ಪೋಷಕರು ಆಶುವನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು ಮತ್ತು ಇಡೀ ಕುಟುಂಬವು ಅವನನ್ನು ಶಿಕ್ಷಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ‘ ಎಂದೂ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ