ಲಕ್ನೋ: 21 ವರ್ಷದ ಮಗಳ ಬ್ಯಾಗ್ನಲ್ಲಿ ಗರ್ಭಧಾರಣೆ ಪರೀಕ್ಷೆಯ ಕಿಟ್ಗಳು (Pregnancy Test Kits) ಪತ್ತೆಯಾಗಿದ್ದು, ಪೋಷಕರು (Parents) ಮಗಳಿಗೆ ಯಾವುದೋ ಯುವಕನೊಂದಿಗೆ ಸಂಬಂಧ ಇರಬೇಕೆಂಬ ಅನುಮಾನದಿಂದ ಕೊಲೆ ಮಾಡಿರುವ ಘಟನೆ ಲಕ್ನೋದಲ್ಲಿ (Lucknow) ನಡೆದಿದೆ. ಅನುಮಾನದ ಮೇರೆಗೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಪೋಷಕರು ತಮ್ಮ ಇಬ್ಬರು ಸಂಬಂಧಿಕರ ಸಹಾಯ ಪಡೆದು ಮೃತ ದೇಹವನ್ನು ಗುರುತಿಸಲು ಸಾಧ್ಯವಾಗಬಾರದೆಂದು ಆಸಿಡ್ (Acid) ಸುರಿದು ವಿಕಾರಗೊಳಿಸಿ, ಕಾಲುವೆಯೊಂದರ ಬಳಿ ಎಸೆದು ಬಂದಿದ್ದಾರೆ. ತನಿಖೆಯಿಂದ ಆರೋಪ ಸಾಬೀತಾಗಿದ್ದು, ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ (Arrest) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಪತ್ತೆ ದೂರು
ಲಕ್ನೋ ತೆನ್ ಶಾ ಅಲಮಾಬಾದ್ ಗ್ರಾಮದ ನಿವಾಸಿಯಾಗಿರುವ ನರೇಶ್ ಎಂಬುವವರು ಫೆಬ್ರವರಿ 3ರಂದು ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಹುಡುಕಾಟ ನಡೆಸಿದಾಗ ಮಂಗಳವಾರ ಗ್ರಾಮದ ಹೊರವಲಯದ ಕಾಲುವೆಯೊಂದರ ಬಳಿ ವಿಕಾರವಾಗಿದ್ದ ಮೃತದೇಹ ಪತ್ತೆಯಾಗಿದೆ. ನಂತರ ನರೇಶ್ ಹಾಗೂ ಪತ್ನಿ ಶೋಭಾದೇವಿ ವಿಚಾರಣೆಗೆ ಒಳಪಡಿಸಿದ್ದು, ಅವರಿಬ್ಬರೇ ತಮ್ಮ ಮಗಳನ್ನು ಫೆಬ್ರವರಿ 3 ರಂದು ತಮ್ಮ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತಚ್ ಮಾಹಿತಿ ನೀಡಿದ್ದಾರೆ.
ಗುರುತು ಪತ್ತೆಯಾಗಬಾರದೆಂದು ಆ್ಯಸಿಡ್ ಸುರಿದ ಪೋಷಕರು
ಮಗಳನ್ನು ಅಕ್ರಮ ಸಂಬಂಧದ ಅನುಮಾನದ ಮೇರೆಗೆ ಕೊಲೆ ಮಾಡಿರುವ ಪೋಷಕರು, ಗುರುತು ಪತ್ತೆಯಾಗಬಾರದು ಎಂದು ಶವದ ಮೇಲೆ ಮನೆಯಲ್ಲಿದ್ದ ಬ್ಯಾಟರಿಯಲ್ಲಿದ್ದ ಆಸಿಡ್ ಸುರಿದಿದ್ದಾರೆ. ನರೇಶ್ ಈ ಅಪರಾಧ ಕೃತ್ಯಕ್ಕೆ ತನ್ನ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಎಂಬುವವರ ಸಹಾಯ ಪಡೆದುಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಮೊಬೈಲ್ನಲ್ಲಿ ಮಾತನಾಡುತ್ತಿದ್ದಕ್ಕೆ ಅನುಮಾನ
ಆರೋಪಿ ನರೇಶ್ ಮಗಳು ಮೊಬೈಲ್ನಲ್ಲಿ ಅನೇಕ ಹುಡುಗರೊಂದಿಗೆ ಮಾತನಾಡುತ್ತಿದ್ದಳು. ಅಲ್ಲದೆ, ಆಕೆಯ ಬ್ಯಾಗ್ನಲ್ಲಿ ಕೆಲವು ಗರ್ಭಧಾರಣೆ ಪರೀಕ್ಷೆಯ ಕಿಟ್ಗಳೂ ಪತ್ತೆಯಾಗಿದ್ದವು. ಇದರಿಂದ ತಮ್ಮ ಮಗಳು ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾರೆ ಅದೇ ಕೋಪದಲ್ಲಿ ಆಕೆಯನ್ನು ಕೊಂದಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಲಿವಿಂಗ್ ರಿಲೇಷನ್ನಲ್ಲಿದ್ದ ಮಹಿಳೆಯ ಮಗಳ ಮೇಲೆ ಅತ್ಯಾಚಾರ
ಮಹಿಳೆ ಜೊತೆಗೆ ಲಿವ್ ಇನ್ ಟುಗೆದರ್ನಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಗರ್ಭಿಣಿ ಮಾಡಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ. ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕೇದಾರ್ ಸಿಂಗ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ರಾಜಸ್ತಾನದ ಬರಾನ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ.
ಮಹಿಳೆ ಸತ್ತ ಮೇಲೆ ಬಾಲಕಿ ಮೇಲೆ ಕಿರುಕುಳ
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಬಾಲಕಿಯ ತಾಯಿ ಜೊತೆ ಕಾಮುಕ ಕೇದಾರ್ ಸಿಂಗ್ ಕಳೆದ ಅನೇಕ ವರ್ಷಗಳಿಂದ ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ. ಆದರೆ ಬಾಲಕಿಯ ತಾಯಿ ಕಳೆದ ಹನ್ನೊಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಆರೋಪಿಯು ಆಕೆಯ ಮಗಳ ನಿರಂತರ ಲೈಂಗಿಕ ದೌರ್ಜನ್ಯ ನೀಡಲು ಶುರುಮಾಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಆಕೆ 23 ವಾರಗಳ ಗರ್ಭಿಣಿ ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಇತ್ತೀಚೆಗೆ ಬಾಲಕಿಯ ಚಿಕ್ಕಪ್ಪ ಆಕೆಯನ್ನು ಭೇಟಿ ಮಾಡಲು ಬಂದಿದ್ದ, ಹೀಗೆ ಮಾತನಾಡುತ್ತಿರುವಾಗ ಆಕೆ ತನ್ನ ಎಲ್ಲಾ ಕಷ್ಟವನ್ನು ಚಿಕ್ಕಪ್ಪನ ಬಳಿ ಹೇಳಿಕೊಂಡಿದ್ದಾಳೆ. ಆಗ ಆಕೆಯ ಚಿಕ್ಕಪ್ಪ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ದೂರು ನೀಡಿದ್ದಾನೆ. ಆಗ ಬಾಲಕಿ ಪೊಲೀಸರ ಬಳಿ ವಿವರವಾಗಿ ಹೇಳಿದಾಗ ಪೊಲೀಸರು ಕಾಮುಕ ಕೇದಾರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿ ಆತನ ಬಂಧನಕ್ಕೆ ಬಲೆ ಬೀಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ