ಮಂಡ್ಯ: ಸೈಬರ್ ಪೊಲೀಸರು (Cyber Crime Police ) ಸೇರಿದಂತೆ ಹಲವು ಬ್ಯಾಂಕ್ (Banks)ಗಳು ಗ್ರಾಹಕರಿಗೆ ಸೈಬರ್ ವಂಚನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿನಂತೆ ಇಂದಿಗೂ ಹಲವರು ಸೈಬರ್ ವಂಚಕರ (Cyber Criminals) ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೆ ವಂಚನೆ ಜಾಲಕ್ಕೆ ಸಿಲುಕಿ ಮಂಡ್ಯ (Mandya) ರೈತರೊಬ್ಬರು (Farmer) ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಬಗ್ಗೆ ಮಂಡ್ಯದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (Cyber Crime Police Station) ದೂರು ದಾಖಲಾಗಿದೆ.
ಏನಿದು ಪ್ರಕರಣ?
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ರೈತನಿಗೆ ಆನ್ಲೈನ್ ದೋಖಾ ಮಾಡಲಾಗಿದೆ. ಸಂಜೀವ್ ಗೌಡ ಎಂಬುವವರ ಪತ್ನಿ ಹೊಸ ವರ್ಷದಂದು ಮಿಶೋ ಆ್ಯಪ್ ಮೂಲಕ ಕೆಲ ವಸ್ತುಗಳನ್ನ ಖರೀದಿಸಿದ್ದರಂತೆ. ಕೆಲವೇ ದಿನಗಳಲ್ಲಿ ಸೈಬರ್ ಚೋರರು ಸಂಜೀವ್ ಗೌಡ ಮನೆಗೆ ಪೋಸ್ಟಲ್ ಮೂಲಕ ಒಂದು ಕೂಪನ್ ಕಳುಹಿಸಿದ್ದಾರೆ. ಕೂಪನ್ ಸ್ಕ್ರ್ಯಾಚ್ ಮಾಡಿ ನೋಡಿದಾಗ ಮಹೇಂದ್ರ XUV 700 ಗೆದ್ದಿರುವುದಾಗಿ ಹೇಳಿದ್ದಾರೆ. ಆಗ ಕಾರು ಬೇಕಾ ಅಥವಾ ಹಣ ಬೇಕಾ ಎಂದು ವಂಚಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ಕಾರ್ ಆಸೆ.. ₹7 ಲಕ್ಷ ಪಂಗನಾಮ!
ಇದನ್ನೇ ಸತ್ಯ ಎಂದು ನಂಬಿದ ರೈತ ಸಂಜೀವ ಗೌಡ, ಹಣ ಬೇಕೆಂದು ತಿಳಿಸಿದಾಗ 29 ಲಕ್ಷದ 60 ಸಾವಿರ ರೂಪಾಯಿ ನಕಲಿ ಚೆಕ್ನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ಹಣ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಕೆಲ ಚಾರ್ಜಸ್ ನೀಡಬೇಕೆಂದು ಪುಸಲಾಯಿಸಿದ್ದಾರೆ. ಇದನ್ನು ನಂಬಿದ ಸಂಜೀವ್ ಗೌಡ ಮನೆಯಲ್ಲಿದ್ದ ಚಿನ್ನಾಭರಣ ಗಿರವಿ ಇಟ್ಟು ಹಂತ ಹಂತವಾಗಿ 7 ಲಕ್ಷದ 23 ಸಾವಿರ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ.
ಪದೇ ಪದೇ ಹಣ ಪೀಕಿದ್ದರಿಂದ ಅನುಮಾನಗೊಂಡ ಸಂಜೀವ್ ಗೌಡ, ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಹಣವೂ ಇಲ್ಲದೇ, ಕಾರು ಸಿಗದೇ ಸಂಜೀವ್ ಗೌಡ ಪರಿತಪ್ಪಿಸು ಸ್ಥಿತಿ ಎದುರಾಗಿದೆ. ಸದ್ಯ ಸೈಬರ್ ಚೋರರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪ್ರಾಥಮಿಕ ಹಂತದ ತನಿಖೆ ವೇಳೆ ವಂಚಕರು ಕೋಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಜೈಲಿನಲ್ಲಿ ಲಂಚಾವತಾರ
ತುಮಕೂರು ಜಿಲ್ಲಾ ಕಾರಾಗೃಹದಲ್ಲಿ (Tumkur District Jail) ಲಂಚಾವತಾರ ತಾಂಡವವಾಡುತ್ತಿದೆ. ಕೈದಿಗಳನ್ನು (Prisoners) ನೋಡಲು ಜೈಲಿಗೆ ಬರುವ ಕುಟುಂಬಸ್ಥರಿಂದ ಜೈಲಿನ ಸಿಬ್ಬಂದಿ ಹಣ ಪೀಕುತ್ತಿರುವ ಆರೋಪ ಕೇಳಿಬಂದಿದೆ. ಒಬ್ಬ ಕೈದಿಯನ್ನು ನೋಡಲು ಜೈಲಿನ ಸಿಬ್ಬಂದಿ 1,150 ರೂಪಾಯಿ ಲಂಚ ಪಡೆದ ದೃಶ್ಯ ಮೊಬೈಲ್ನಲ್ಲಿ (Mobile Video) ಸೆರೆಯಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಕಾರಾಗೃಹದಲ್ಲಿನ (Prison) ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಹಲವರಿಗೆ ಕೈದಿಗಳು ದೂರು ನೀಡಿದ್ದಾರೆ.
ಕೈದಿಗಳು ದೂರು ನೀಡುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೈದಿಗಳ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿದ್ದಾರೆ. ಕಾರಾಗೃಹದಲ್ಲಿ ಇಷ್ಟೇಲ್ಲಾ ಅಕ್ರಮ ನಡೆಯುತ್ತಿದ್ದರು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ