ದೊಡ್ಡಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು (Political Parties) ಬಿರುಸಿನ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಮತದಾರರನ್ನು (Voters) ತಮ್ಮ ಪಕ್ಷದತ್ತ ಸೆಳೆದುಕೊಳ್ಳಲು ಟಿಕೆಟ್ ನಿರೀಕ್ಷೆ ಮಾಡಿರುವ ಅಭ್ಯರ್ಥಿಗಳು, ಪಕ್ಷದ ಮುಖಂಡರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಹಬ್ಬಗಳು, ಆಚರಣೆಗಳು, ಹುಟ್ಟಿದ ಹಬ್ಬದ ಆಚರಣೆಗಳನ್ನು ನೆಪವಾಗಿ ಇಟ್ಟುಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂತಹದ್ದೆ ಒಂದು ಕಾರ್ಯಕ್ರಮವನ್ನು ಇಂದು ಬೆಂಗಳೂರು ಗ್ರಾಮೀಣ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ದೊಡ್ಡಬೆಳವಂಗಲ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಬಿಜೆಪಿಯ ಯುವ ಮುಖಂಡರೊಬ್ಬರು ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಿಯನ್ನು (Cricket Tournament ) ಆಯೋಜಿಸಿದ್ದರು. ಈ ವೇಳೆ ಕ್ಷುಲಕ ಕಾರಣಕ್ಕೆ ಆರಂಭವಾದ ಜಗಳ ಇಬ್ಬರು ಯುವಕ ಕೊಲೆಯಲ್ಲಿ ಅಂತ್ಯವಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಏನಿದು ಘಟನೆ?
ಇಂದು ದೊಡ್ಡಬೆಳವಂಗಲ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಬಿಜೆಪಿ ಮುಖಂಡನಿಂದ ಆಯೋಜನೆ ಮಾಡಿದ್ದ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಕೆಲ ಯುವಕರು ಕಾರೊಂದನ್ನು ತಂದು ನಿಲ್ಲಿಸಿದ್ದರು. ಇದರಿಂದ ಕ್ರಿಕೆಟ್ ಪಂದ್ಯದ ವೇಳೆ ಆಡಲು ಕಾರು ಅಡ್ಡವಾಗುತ್ತದೆ ಎಂದು ಟೂರ್ನಿಯ ಆಯೋಜನೆಯಲ್ಲಿ ತೊಡಗಿದ್ದ ಕೆಲ ಯುವಕರು ಕಾರನ್ನು ಸ್ಥಳದಿಂದ ತೆಗೆಯಲು ಹೇಳಿದ್ದರಂತೆ.
ಆದರೆ ಇದಕ್ಕೆ ಕಾರಿನಲ್ಲಿದ್ದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರೊಂದಿಗೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದ್ದು, ಕೆಲ ಯುವಕರು ಕಾರಿನ ಗ್ಲಾಸ್ಗೆ ಹಾನಿ ಮಾಡಿದ್ದರಂತೆ. ಈ ಘಟನೆ ಬಳಿಕ ಸ್ಥಳದಿಂದ ಕಾರನ್ನು ತೆಗೆದುಕೊಂಡು ಹೋಗಿದ್ದ ಯುವಕರು ಮತ್ತೆ ಗ್ರಾಮದ ಬಸ್ ನಿಲ್ದಾಣದ ಬಳಿ ಬಂದು ಜಗಳ ಮಾಡಿದ್ದ ಯುವಕರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Aero India 2023: ಹೆಚ್ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!
ಈ ಸಂಘರ್ಷದಲ್ಲಿ ಎರಡು ಗುಂಪಿನ ಯುವಕರಿಗೆ ಚಾಕು ಇರಿತ ಆಗಿದ್ದು, ನಾಲ್ವರು ಯುವಕರಿಗೆ ಗಾಯವಾಗಿತ್ತು ಎನ್ನಲಾಗಿದೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಭರತ್ (24) ಮತ್ತು ಪ್ರತೀಕ್ (19) ಎಂಬ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವ ಇಬ್ಬರು ಯುವಕರಿಗೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆ ರವಾನೆ ಮಾಡಲಾಗಿದೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಯುವಕರು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಮೃತ ಯುವಕರು ಬಿಜೆಪಿ ಪಕ್ಷದ ಕಾರ್ಯಕರ್ತರು ಎನ್ನಲಾಗಿದ್ದು, ಗಲಾಟೆ ಮಾಡಿ ಕೊಲೆ ಮಾಡುವ ಉದ್ದೇಶದಿಂದಲೇ ಎದುರಾಳಿ ಪಕ್ಷದ ಯುವಕರು ಕೃತ್ಯ ಎಸಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದೇ ಉದ್ದೇಶದಿಂದ ಕಾರಿನಲ್ಲಿ ಮಾರಕಾಸ್ತ್ರಗಳನ್ನು ತಂದಿದ್ದರಂತೆ.
ಸದ್ಯ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಅಸಲಿಗೆ ರಾಜಕೀಯ ಕಾರಣದಿಂದ ಕೊಲೆಗಳನ್ನು ಮಾಡಿದ್ದಾರಾ ಅಥವಾ ಯುವಕರ ನಡುವೆ ಹಳೆ ವೈಷಮ್ಯ ಏನಾದ್ರು ಇತ್ತ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ. ಚುನಾವಣೆಯ ವೇಳೆ ನಡೆದಿರುವ ಈ ಕೊಲೆಗಳು ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಸ್ಥಳದಲ್ಲಿ ಬೂದಿ ಮುಚ್ಚಿದ ವಾತಾವರಣ ನಿರ್ಮಾಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ