ಮುಂಬೈ: ದೆಹಲಿಯಲ್ಲಿ ಆಫ್ತಾಬ್ ಪೂನಾವಾಲಾ (Aaftab Poonawala) ಎಂಬ ಆರೋಪಿ ಲಿವ್ ಇನ್ ರಿಲೇಶಿನ್ಶಿಪ್ನಲ್ಲಿದ್ದ ( Live in Relationship) ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ( Shraddha Walkar) ಎಂಬಾಕೆಯನ್ನು ಹತ್ಯೆ ಮಾಡಿದ ದೇಹವನ್ನು ಪೀಸ್ ಪೀಸ್ ಮಾಡಿ ನಗರದ ಹಲವು ಕಡೆ ಬೀಸಾಡಿದ್ದ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ರೀತಿಯ ಪ್ರಕರಣ ಮಹಾರಾಷ್ಟ್ರದ (Maharashtra) ಪಾಲ್ಘರ್ನಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತನ್ನ ಸಂಗಾತಿಯನ್ನು ಕೊಲೆ ಮಾಡಿ ದೇಹವನ್ನು ಹಾಸಿಗೆಯೊಳಗೆ ತುಂಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆರೋಪಿ ಮಧ್ಯಪ್ರದೇಶದ (Madhya Pradesh) ನಗ್ಡಾದಲ್ಲಿ ರೈಲಿನಲ್ಲಿ ತಪ್ಪಿಸಿಕೊಳ್ಳುವ ಯತ್ನಿಸಿದಾಗ ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿ ಹಿಡಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆ ಮಾಡಿ ಹಾಸಿಗೆಯಲ್ಲಿಟ್ಟಿದ್ದ ಆರೋಪಿ
ನರ್ಸ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮೇಘಾ ಎಂಬುವವರು ತುಳಿಂಜ್ ಪ್ರದೇಶದ ತಮ್ಮ ಬಾಡಿಗೆ ಮನೆಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದರು. ಮನೆಯ ಒಳಗಿನಿಂದ ದುರ್ವಾಸನೆ ಬಂದಿದ್ದರಿಂದ ನೆರೆಹೊರೆಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೇಘಾರನ್ನು ಹತ್ಯೆ ಮಾಡಿದ್ದ ಆರೋಪಿ ಆಕೆ ಮೃತದೇಹವನ್ನು ಹಾಸಿಗೆಯೊಂದರಲ್ಲಿ ತುಂಬಿದ್ದ. ಬಹುಶಃ ಆಕೆಯನ್ನು ಕಳೆದ ವಾರದಲ್ಲಿ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಹಿರಿಯ ಇನ್ಸ್ಪೆಕ್ಟರ್ ಶೈಲೇಂದ್ರ ನಗರ್ಕರ್ ಹೇಳಿದ್ದಾರೆ.
ಇದನ್ನೂ ಓದಿ: Viral News: ಜೈಲಿನಲ್ಲೇ ಇದ್ದ ಕೈದಿಗೆ ಬರೋಬ್ಬರಿ 20 ವರ್ಷ ಹುಡುಕಾಟ ನಡೆಸಿದ ಮುಂಬೈ ಪೊಲೀಸರು!
ನಿರಂತರ ಜಗಳ
ಆರೋಪಿ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ, ಆತ ಮೇಘಾ ಅವರೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದ. ಅಂತಹದ್ದೆ ಒಂದು ಜಗಳದ ಸಮಯದಲ್ಲಿ ಆರೋಪಿ ಮೇಘಾರನ್ನು ಕೊಂದಿದ್ದಾನೆ. ಅಲ್ಲದೆ ಕೊಲೆ ಮಾಡಿರುವ ವಿಚಾರವನ್ನು ಆತ ತನ್ನ ಸಹೋದರಿಗೆ ಕರೆ ಮಾಡಿ ತಿಳಿಸಿದ್ದಾನೆ. ಜೊತೆಗೆ ಸ್ಥಳದಿಂದ ಪರಾರಿಯಾಗಿರುವ ಮೊದಲು ಫ್ಲಾಟ್ನಲ್ಲಿರುವ ಪೀಠೋಪಕರಣಗಳನ್ನು ಮಾರಾಟ ಮಾಡಿ ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಸನ್ 302ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಮತ್ತೊಂದು ಘಟನೆ
ಮೇಲಿನ ಪ್ರಕರಣದಲ್ಲಿ ಕೊಲೆ ಮಾಡಿ ಹಾಸಿಗೆಯಲ್ಲಿ ಶವವನ್ನು ತುಂಬಿಟ್ಟರೆ, ದೆಹಲಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಯುವತಿಯೊಬ್ಬಳನ್ನು ಹತ್ಯೆ ಮಾಡಿರುವ ಆಕೆಯ ಪ್ರಿಯತಮ, ಶವವನ್ನು ಫ್ರಿಡ್ಜ್ನಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡ ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾವೊಂದರಲ್ಲಿ ಯುವತಿಯ ಶವ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ಗೆಹ್ಲೋಟ್ ಎಂಬಾತನನ್ನು ಬಂಧಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ , ಯುವತಿ ಮತ್ತು ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿ ಮದುವೆ ವಿಚಾರ ಹೇಳಿದಾಗ ಆತ ನಿರಾಕರಿಸಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ನಡೆದಿವೆ. ಯುವತಿಯಿಂದ ಒತ್ತಡ ಹೆಚ್ಚಾಗುತ್ತಿದ್ಧಂತೆ ಪ್ರಿಯಕರ ಆಕೆಯನ್ನು ಕೊಲೆ ಮಾಡಿರಬಹುದು ಎನ್ನಲಾಗುತ್ತಿದೆ.
ಮೃತದೇಹವನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಆರೋಪಿ
ಪ್ರಿಯತಮೆಯನ್ನು ಹತ್ಯೆ ಮಾಡಿರುವ ಆರೋಪಿ , ಆಕೆಯ ಮೃತದೇಹವನ್ನು ಗ್ರಾಮದ ಢಾಬಾದ ಫ್ರಿಡ್ಜ್ನಲ್ಲಿ ಬಚ್ಚಿಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾಹಿಲ್ ಗೆಹ್ಲೋಟ್ ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೇರೆ ಮದುವೆಗೆ ಸಿದ್ಧತೆ
ಪರಸ್ಪರ ಪ್ರೀತಿಸಿದ್ದರು, ಸಾಹಿಲ್ ಬೇರೊಬ್ಬಳ ಜೊತೆಗೆ ವಿವಾಹ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದ. ಈ ವಿಷಯ ತಿಳಿದ ಆತನ ಪ್ರಿಯತಮೆ ತನ್ನನ್ನೇ ಮದುವೆಯಾಗುವಂತೆ ಹಠ ಹಿಡಿದಿದ್ದು ಸಾಹಿಲ್ಗೆ ಚಿಂತೆಗೀಡು ಮಾಡಿದೆ. ಆಕೆ ತನ್ನ ಮದುವೆಗೆ ಅಡ್ಡಿ ಪಡಿಸಬಹುದೆಂಬ ಭಯದಿಂದ ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಗ್ರಾಮದಿಂದ ದೂರದಲ್ಲಿರುವ ಢಾಬಾವೊಂದರ ಫ್ರಿಡ್ಜ್ನಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ