ಉತ್ತರ ಪ್ರದೇಶ: ಕಿರುತೆರೆಯಲ್ಲೇ ಅತೀ ಹೆಚ್ಚು ಜನಪ್ರಿಯ ಶೋ, ಅತೀ ಹೆಚ್ಚು ಟಿಆರ್ಪಿ ಪಡೆಯುವ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋನದ್ದು (Reality Show). ಹಿಂದಿ, ಕನ್ನಡ, ತಮಿಳು, ತೆಲುಗು, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಶೋ ನಡೆದಿದ್ದು, ಎಲ್ಲಾ ಭಾಷೆಯ ವೀಕ್ಷಕರನ್ನೂ ಸೆಳೆದಿದೆ. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಚಿತ್ರರಂಗ, ಕಿರುತೆರೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಡಿಮ್ಯಾಂಡ್ ಪಡೆದುಕೊಳ್ಳುತ್ತಾರೆ. ಹೀಗೆ ಬಿಗ್ ಬಾಸ್ ಶೋಗೆ ಬಂದಿದ್ದ ಸ್ಪರ್ಧಿಯೊಬ್ಬ (Bigg Boss Contestant) ಜನಪ್ರಿಯತೆ ಪಡೆದುಕೊಳ್ಳುವ ಬದಲು, ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದವನ ಬೆನ್ನು ಬಿದ್ದ ಪೊಲೀಸರು (Police), ಬರೋಬ್ಬರಿ 500 ಕಿಲೋ ಮೀಟರ್ ಚೇಸ್ ಮಾಡಿ, ಕೊನೆಗೂ ಆತನಿಗೆ ಕೋಳ ತೊಡಿಸಿದ್ದಾರೆ.
ಪೊಲೀಸರ ಬಲೆಗೆ ಬಿದ್ದ ಬಿಗ್ ಬಾಸ್ ಸ್ಪರ್ಧಿ
ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ನ ಸ್ಪರ್ಧಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಚೋರ್ ಬಂಟಿ ಅಲಿಯಾಸ್ ದೇವೇಂದ್ರ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಯಾರು ಈ ಚೋರ್ ಬಂಟಿ?
ಚೋರ್ ಬಂಟಿ ಮೂಲ ಹೆಸರು ದೇವೇಂದ್ರ ಸಿಂಗ್. ಈತ 2019ರಲ್ಲಿ ಪ್ರಸಾರವಾದ ಹಿಂದಿಯ ಬಿಗ್ ಬಾಸ್ 4ನೇ ಸರಣಿಯ ಸ್ಪರ್ಧಿಯಾಗಿದ್ದ. ಪ್ರಾರಂಭದಲ್ಲೇ ತೀವ್ರ ಕುತೂಹಲ ಮೂಡಿಸಿ, ವೀಕ್ಷಕರನ್ನು ಸೆಳೆದಿದ್ದ ಚೋರ್ ಬಂಟಿ, ತಾನು ಸಂಪೂರ್ಣ ಬದಲಾಗಿದ್ದು, ಹೊಸ ಜೀವನ ಪಡೆಯಲು ಬಿಗ್ ಬಾಸ್ಗೆ ಬಂದಿದ್ದಾಗಿ ಹೇಳಿದ್ದ. ಆದರೆ ಬಿಗ್ ಬಾಸ್ ನಿರೂಪಕ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೊತೆ ಕಿರಿಕ್ ಮಾಡಿಕೊಂಡು, ಶೋನಿಂದ ಕೆಲವೇ ದಿನಗಳಲ್ಲಿ ಹೊರಕ್ಕೆ ಬಿದ್ದಿದ್ದ.
ಇದನ್ನೂ ಓದಿ: Atiq Ahmed: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್
9ನೇ ತರಗತಿಯಿಂದಲೂ ಕಳ್ಳತನ!
ಬಂಟಿ ಓದಿದ್ದು ಬರೀ 9ನೇ ತರಗತಿವರೆಗೆ ಮಾತ್ರ. ಬಳಿಕ ಶಾಲೆ ಅರ್ಧಕ್ಕೆ ಬಿಟ್ಟು ಕಳ್ಳತನಕ್ಕೆ ಇಳಿದಿದ್ದ. 14ನೇ ವಯಸ್ಸಿನಲ್ಲಿಯೇ ಕಳ್ಳತನಕ್ಕೆ ಇಳಿದಿದ್ದ ಆತನ ವಿರುದ್ಧ ದಿಲ್ಲಿಯೊಂದರಲ್ಲಿಯೇ 250ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. ದೆಹಲಿಯಲ್ಲಿ ಕಳುವು ಮಾಡಿ ಮೊದಲ ಬಾರಿಗೆ ಬಂಧಿತನಾದ. ಆದರೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ವಿಶೇಷ ಅಂದ್ರೆ ಈ ಚೋರ್ ಬಂಟಿ ತಡರಾತ್ರಿ 2 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಸಮಯದಲ್ಲೇ ಕಳ್ಳತನ ಮಾಡುತ್ತಿದ್ದ.
700ಕ್ಕೂ ಹೆಚ್ಚು ಕಳ್ಳತನ ಕೇಸ್ನಲ್ಲಿ ಭಾಗಿ!
ಕಳ್ಳತನ ಪ್ರಕರಣವೊಂದರಲ್ಲಿ ಈ ಚೋರ್ ಬಂಟಿ ಕೇರಳದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಬಂಟಿ ಚೋರ್ 3 ವರ್ಷಗಳ ಜೈಲು ಶಿಕ್ಷೆ ಬಳಿಕ 2010ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಕಳೆದ 30 ವರ್ಷಗಳಲ್ಲಿ ಆತ 700ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿದ್ದಾನೆ.
ಬೆಂಗಳೂರು ಸೇರಿ ಹಲವೆಡೆ ಕಳ್ಳತನ
ಚೋರ್ ಬಂಟಿ ನೂರಾರು ಮನೆಗಳಲ್ಲಿ ಕಳ್ಳತನ ಮಾಡಿದ್ದನಂತೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳ ಮನೆಗಳಲ್ಲಿ ಈತ ತನ್ನ ಕೈ ಚಳಕ ತೋರಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: Army Jawan Arrested: 4 ಯೋಧರ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಓರ್ವ ಸೈನಿಕನ ಬಂಧನ!
‘ಬಾಲಿವುಡ್ನ ಓಯ್ ಲಕ್ಕಿ ಲಕ್ಕಿ ಓಯ್’ಗೆ ಇವನದ್ದೇ ಕಥೆ!
2008ರಲ್ಲಿ 'ಓಯ್ ಲಕ್ಕಿ ಲಕ್ಕಿ ಓಯ್' ಎಂಬ ಹೆಸರಿನ ಸಿನಿಮಾ ರಿಲೀಸ್ ಆಗಿತ್ತು. ಅಭಯ್ ಡಿಯೋಲ್, ನೀತು ಚಂದ್ರ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಚೋರ್ ಬಂಟಿ ಜೀವನದ ಕಥೆ ಆಧರಿಸಿದ ಸಿನಿಮಾವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ