ಬೆಂಗಳೂರು: ಗಂಡ, ಹೆಂಡತಿ (Wife and Husband) ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಈ ದಂಪತಿ (Couple) ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ದುರಂತ ಅಂತ್ಯ ಕಂಡಿದೆ. ಹೌದು, ಈ ಪೋಟೋದಲ್ಲಿ (Photo) ಕಾಣಿಸುತ್ತಿರುವ ದಂಪತಿ ಹೆಸರು ಸಂತೋಷ್ ಮತ್ತು ಭಾನು. ಮೂಲತಃ ಮಂಡ್ಯ (Mandya) ಮೂಲದ ಇವರು ಬೆಂಗಳೂರು (Bengaluru) ದಕ್ಷಿಣ ತಾಲ್ಲೂಕಿನ ಮೈಲಸಂದ್ರ (Mylasandra) ಬಳಿಯ ವಡ್ಡರಪಾಳ್ಯದಲ್ಲಿ ವಾಸವಾಗಿದ್ದರು. ಪತಿ, ಪತ್ನಿ, ಮಗಳನ್ನು ಹೊಂದಿದ್ದ ಪುಟ್ಟ ಕುಟುಂಬಕ್ಕೆ ಅಡ್ಡಿಯಾಗಿದ್ದು ಅಕ್ರಮ ಸಂಬಂಧ (Illegal Relationship). ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತಿ ಸಂತೋಷ ಸಾವನ್ನಪ್ಪಿದ್ದು, ಪತ್ನಿ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಇಬ್ಬರೂ ಪರಸ್ಪರ ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು 8 ವರ್ಷಗಳ ಹಿಂದೆ ವಿವಾಹ ಆಗಿದ್ದರು. ಏಳು ವರ್ಷದ ಹೆಣ್ಣು ಮಗು ಕೂಡ ಇದೆ. ಪೇಪರ್ ಏಜನ್ಸಿ ನಡೆಸುತ್ತಿದ್ದ ಸಂತೋಷ್, ಹಗಲಿರುಳು ದುಡಿದು ಸೈಟ್ ಖರೀದಿಸಿ ನಾಲ್ಕಂತಸ್ತಿನ ಮನೆ ಕೂಡ ನಿರ್ಮಿಸಿದ್ದ, ಆದರೆ ಪರ ಸ್ತ್ರೀ ಮೋಹಕ್ಕೆ ಬಿದ್ದಿದ್ದರಿಂದ ಮನೆಯಲ್ಲಿ ಕಲಹ ಶುರುವಾಗಿತ್ತು ಎನ್ನಲಾಗಿತ್ತು.
ಮಗಳ ಭವಿಷ್ಯ ಹಾಳಾಗದಿರಲಿ ಅನ್ನೋ ಕಾರಣಕ್ಕೆ ಭಾನು ತಾಯಿ ಮನೆಗೆ ಕಳುಹಿಸಿದ್ದರಂತೆ. ಇದನ್ನೇ ಬಂಡವಾಳ ಮಾಡಿಕೊಂಡ ಸಂತೋಷ್, ಭಾನು ಕೆಲಸಕ್ಕೆ ಹೋದ ಬಳಿಕ ಮಹಿಳೆಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಎನ್ನಲಾಗಿದೆ.
ಲವ್ ಕಮ್ ಮ್ಯಾರೇಜ್ ಸ್ಟೋರಿ ಸುಖ ಸಂಸಾರದಲ್ಲಿ ಸಾಗಬೇಕಿತ್ತು. ಆದರೆ ಅಕ್ರಮ ಸಂಬಂಧ ಅನ್ನುವ ಬೇಲಿಗೆ ಸಿಲುಕಿ ಭಸ್ಮವಾಗಿದೆ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್ ಸಾವನ್ನಪ್ಪಿದ್ರೆ, ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. (ವರದಿ: ಆದೂರು ಚಂದ್ರು, ನ್ಯೂಸ್ 18 ಕನ್ನಡ, ಆನೇಕಲ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ