ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟದಿಂದ ಭಾರೀ ದುರಂತವೊಂದು ನಡೆದಿದೆ. ಇಡೀ ಮಹಾನಗರದ ಜನ ವೀಕೆಂಡ್ ಮೂಡ್ನಲ್ಲಿದ್ದಾಗ 13 ವರ್ಷದ ಬಾಲಕನೊಬ್ಬ ದಯನೀಯವಾಗಿ ಪ್ರಾಣ ಬಿಟ್ಟಿದ್ದಾನೆ. ಹೌದು, ಸಿಲಿಂಡರ್ ಸ್ಫೋಟದಿಂದ (cylinder explosion) 13 ವರ್ಷದ ಬಾಲಕನೊಬ್ಬ (13 year old boy) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ (Hospital) ಸೇರಿದ್ದ. ಇದೀಗ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಅಂದಹಾಗೆ ಆ ಬಾಲಕ ಸಿಲಿಂಡರ್ ರಿಫೀಲ್ಲಿಂಗ್ ಅಂಗಡಿಯ (cylinder refilling shop) ಬಳಿ ನಿಂತುಕೊಂಡಿದ್ದ. ಆದರೆ ಆಗ ಅಂಗಡಿ ಕೆಲಸಗಾರರ ಅಜಾಗರೂಕತೆಯಿಂದ ಸಂಭವಿಸಿದ ಸ್ಫೋಟದಲ್ಲಿ, ಈ ಅಮಾಯಕ ಬಾಲಕ ಪ್ರಾಣ ಬಿಟ್ಟಿದ್ದಾನೆ.
ಸಿಲಿಂಡರ್ ಸ್ಫೋಟದಿಂದ 13 ವರ್ಷದ ಬಾಲಕ ಸಾವು
ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. 13 ವರ್ಷದ ಬಾಲಕ ಮಹೇಶ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಸಿಲಿಂಡರ್ ರಿಫಿಲ್ಲಿಂಗ್ ವೇಳೆ ಭೀಕರ ಸ್ಫೋಟ
ಅಂದಹಾಗೆ ಈ ಸ್ಫೋಟ ನಡೆದಿದ್ದು ಸಿಲಿಂಡರ್ ರಿಫಿಲ್ಲಿಂಗ್ ಅಂಗಡಿಯಲ್ಲಿ. ಬಾಲಕ ಮನೆ ಬಳಿಯೇ ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀ ಫಿಲ್ಲಿಂಗ್ ಮಾಡುವ ಗೋಡೌನ್ ಇತ್ತು. ಇಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಬಾಲಕ ಅಂಗಡಿ ಪಕ್ಕದಲ್ಲೇ ನಿಂತಿದ್ದ ಎನ್ನಲಾಗಿದೆ. ಈ ವೇಳೆ ಗ್ಯಾಸ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಂಗಡಿ ಪಕ್ಕದಲ್ಲಿ ನಿಂತಿದ್ದ ಬಾಲಕ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ: Praveen Nettaru ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಬೆಂಗಳೂರಿನಲ್ಲಿ ಸೆರೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಸಾವು
ಇಂದು ಬೆಳಗ್ಗೆ 10 ಗಂಟೆಗೆ ಸಿಲಿಂಡರ್ ಸ್ಫೋಟಗೊಂಡಿದೆ. ಇಂದು ಶಾಲೆಗೆ ರಜೆ ಇರೋದ್ರಿಂದ ಬಾಲಕ ಅಂಗಡಿ ಬಳಿಯೇ ನಿಂತಿದ್ದ. ಆದರೆ ಸಿಲಿಂಡರ್ ಸ್ಫೋಟದಿಂದ ಬಾಲಕ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮಹೇಶ್ ಸಾವನ್ನಪ್ಪಿದ್ದಾನೆ.
ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತ ಬಾಲಕ ಮಹೇಶ್ ಚೋಳನಾಯಕನಹಳ್ಳಿಯಲ್ಲಿ ಇರುವ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಈತನ ತಂದೆ ತಾಯಿ ಕಳೆದ ಎಂಟು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತ, ಮಕ್ಕಳನ್ನು ಓದಿಸುತ್ತಾ ಇದ್ದರು. ಇದೀಗ ಬಾಲಕನ ಸಾವಿನಿಂದ ಬಡ ಕುಟುಂಬ ಕಂಗಾಲಾಗಿದೆ. ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರಿಡುತ್ತಿದ್ದಾರೆ.
ಸಿಲಿಂಡರ್ ಸ್ಫೋಟದ ಬಳಿಕ ಸಿಬ್ಬಂದಿ ಎಸ್ಕೇಪ್
ಅಂದಹಾಗೆ ಇದಕ್ಕೆಲ್ಲ ಕಾರಣವಾಗಿದ್ದು ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಗೋಡೌನ್ ಸಿಬ್ಬಂದಿ ಲಿಯಾಕತ್. ಈತನೇ ಸಿಲಿಂಡರ್ ರಿಫಿಲ್ ಮಾಡುತ್ತಿದ್ದು, ಅಜಾಗರೂಕತೆಯಿಂದ ಗ್ಯಾಸ್ ಸ್ಫೋಟಗೊಂಡಿದೆ. ಇನ್ನು ಘಟನೆಯ ಬೆನ್ನಲ್ಲೆ ಲಿಯಾಕತ್ ಸ್ಥಳದಿಂದ ಎಸ್ಕೇಪ್ ಅಗಿದ್ದಾನೆ. ಇದೀಗ ಲಿಯಾಕತ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಯುವಕನ ಕೊಲೆ
ಮತ್ತೊಂದು ಪ್ರಕರಣದಲ್ಲಿ ಹಾಡಹಗಲೆ ಯುವಕನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, 27 ವರ್ಷದ ಮಹೇಶ್ ಕೊಲೆಯಾದ ಯುವಕ. ಗಿರೀಶ್ ಎಂಬಾತ ಮಹೇಶ್ನನ್ನು ಕೊಲೆ ಮಾಡಿದ್ದಾನೆ ಅಂತ ಹೇಳಲಾಗಿದೆ. ಮಹೇಶ್ ಆಟೋದಲ್ಲಿ ಕುಳಿತ್ತಿದ್ದಾಗ ಗಿರೀಶ್ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡು ಮಹೇಶ್ ಸಾವನ್ನಪ್ಪಿದ್ದು, ಹುಲ್ಲಹಳ್ಳಿ ಪೊಲೀಸರು ಆರೋಪಿ ಗಿರೀಶ್ನನ್ನು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ