ಕೊರೊನಾ ಮಾಹಾಮಾರಿಯ ಆರ್ಭಟ ಹಾಗೂ ಲಾಕ್ಡೌನ್ನಿಂದಾಗಿ ಅತಿ ಹೆಚ್ಚು ಪೆಟ್ಟು ತಿಂದಿರುವ, ಈಗಲೂ ಪೆಟ್ಟು ತಿನ್ನುತ್ತಿರುವ ಹಾಗೂ ಲಾಕ್ಡೌನ್ ಅನ್ಲಾಕ್ ಬಳಿಕವೂ ಹಲವು ದಿನಗಳ ಕಾಲ ಹೆಚ್ಚು ಸಮಸ್ಯೆ ಎದುರಿಸಲಿರುವ ಕ್ಷೇತ್ರ ಅಂದರೆ ಅದು ಚಿತ್ರರಂಗ. ಅದರಲ್ಲಂತೂ ಸ್ಯಾಂಡಲ್ವುಡ್ ಕಳೆದ ವರ್ಷದ ಕೊರೊನಾ ಮೊದಲ ಅಲೆಯ ಲಾಕ್ಡೌನ್ನಿಂದಲೇ ಇನ್ನೂ ಚೇತರಿಸಿಕೊಂಡಿರಲಿಲ್ಲ. ಈ ವರ್ಷ ಥಿಯೇಟರ್ಗಳು ನೂರು ಪ್ರತಿಶತಃ ಹೌಸ್ಫುಲ್ ಆಗಿ ಇನ್ನೇನು ಸ್ಯಾಂಡಲ್ವುಡ್ನಲ್ಲಿ ಸುವರ್ಣ ಕಾಲ ಆರಂಭವಾಯಿತು ಎನ್ನುತ್ತಿರುವಾಗಲೇ ಮತ್ತೆ ಎರಡನೇ ಅಲೆಯ ಆರ್ಭಟ ಪ್ರಾರಂಭವಾಗಿ ಇನ್ನಷ್ಟು ದೊಡ್ಡ ಪೆಟ್ಟು ನೀಡಿದೆ.
ಹೀಗಾಗಿಯೇ ಈ ಎರಡನೇ ಅಲೆಯ ಸಂದರ್ಭದಲ್ಲೂ ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಥಿಯೇಟರ್ಗಳು ಮತ್ತೆ ಬಂದ್ ಆಗಿವೆ, ಸಿನಿಮಾ ಚಿತ್ರೀಕರಣ, ಚಿತ್ರೀಕರಣೋತ್ತರ ಕೆಲಸಗಳು, ಪ್ರಚಾರ, ಸೇರಿದಂತೆ ಎಲ್ಲ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಲಾಕ್ಡೌನ್ ಅನ್ಲಾಕ್ ಆಗುತ್ತಾ ಎಂಬ ಪ್ರಶ್ನೆಯೂ ಎಲ್ಲರನ್ನೂ ಕಾಡುತ್ತಿದೆ. ಹೀಗೆ ಅನಿಶ್ಚಿತತೆಯ ಕಾರ್ಮೋಡ ಸ್ಯಾಂಡಲ್ವುಡ್ ಮೇಲೆ ಆವರಿಸಿದೆ. ಕೆಲಸವಿಲ್ಲದೇ ಕಾರ್ಮಿಕರು, ತಂತ್ರಜ್ಞರು ಮಾತ್ರವಲ್ಲ ಕಲಾವಿದರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್ಥಿಕ ಸಮಸ್ಯೆಯಲ್ಲಿ ನೂರಾರು ಮಂದಿ ಬಳಲಿ ಬೆಂಡಾಗಿದ್ದಾರೆ.
ಈ ಎಲ್ಲ ಸಮಸ್ಯೆಗಳಿಗೂ ಸರ್ಕಾರ ಚಿತ್ರರಂಗಕ್ಕೆ ಪ್ಯಾಕೇಜ್ ಘೋಷಿಸಿದರೆ ಪರಿಹಾರ ಸಿಗುತ್ತೆ ಅಂತ ಸ್ಯಾಂಡಲ್ವುಡ್ನ ಪ್ರಮುಖರು ರಾಜ್ಯ ಸರ್ಕಾರಕ್ಕೆ ಒಂದೆಡೆ ಮನವಿ ಮಾಡುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಸ್ಟಾರ್ ನಟ, ನಟಿಯರು ತಮ್ಮದೇ ತಂಡಗಳನ್ನು ಮಾಡಿಕೊಂಡು ಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರಿಗೆ ದಿನಸಿ ಕಿಟ್, ಮೆಡಿಕಲ್ ಕಿಟ್, ಆಹಾರ ಪೊಟ್ಟಣ, ಮಾಸ್ಕ್ ಅದೂ ಇದೂ ಅಂತ ವಿತರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮೋಸ್ಟ್ ಡಿಸೈರಬಲ್ ಮಹಿಳೆ
ಅತ್ತ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮುನ್ನವೇ ನ್ಯಾಷನಲ್ ಐಕಾನ್, ರಾಕಿಂಗ್ ಸ್ಟಾರ್ ಯಶ್ ತಾವೇ ಚಿತ್ರರಂಗಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ನಟ ಯಶ್ ಚಿತ್ರರಂಗದ ಬರೋಬ್ಬರಿ 3220ಕ್ಕೂ ಹೆಚ್ಚು ಮಂದಿ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿ ಧನಸಹಾಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಾರಾ ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರ ಜೊತೆ ಕುಳಿತು ಚರ್ಚಿಸಿದ್ದಾರೆ. ಎಲ್ಲ ಸದಸ್ಯರ ಅಧಿಕೃತ ಬ್ಯಾಂಕ್ ವಿವರ ತಮಗೆ ಸಿಕ್ಕ ತಕ್ಷಣ ಎಲ್ಲರ ಅಕೌಂಟ್ಗಳಿಗೇ ನೇರವಾಗಿ ಹಣ ಜಮೆ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್ಗಳಲ್ಲಿ ಬರೆದುಕೊಂಡಿರುವ ನಟ ಯಶ್, ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಹೌದು, ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಸುಮಾರು 3 ಸಾವಿರಕ್ಕೂ ಅಧಿಕ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ೫ ಸಾವಿರ ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ.
#togetherwestand #humanity pic.twitter.com/46FYT9pThz
— Yash (@TheNameIsYash) June 1, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ