ಚೆನ್ನೈ (ಜೂನ್ 11): ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಅದರ ಸುತ್ತಲ ಉಪನಗರಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಚೆನ್ನೈ ಮಹಾನಗರವನ್ನು ಇನ್ನೂ ಸ್ವಲ್ಪ ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡುವ ಕುರಿತು ಸರ್ಕಾರ ಏಕೆ ಚಿಂತಿಸಬಾರದು? ಎಂದು ಮದ್ರಾಸ್ ಹೈಕೋರ್ಟ್ ಇಂದು ಪ್ರಶ್ನೆ ಮಾಡಿದೆ.
“ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿಯೂ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಪರಿಣಾಮ ಮಹಾನಗರ ಮತ್ತು ಅದರ ಹೊರ ವಲಯದಲ್ಲಿ ಪ್ರಸ್ತುತ ಪರಿಸ್ಥಿತಿ ಆತಂಕಕಾರಿಯಾಗಿದೆ" ಎಂದು ನ್ಯಾಯಮೂರ್ತಿಗಳಾದ ವಿನೀತ್ ಕೊಥಾರಿ ಮತ್ತು ಆರ್. ಸುರೇಶ್ ಕುಮಾರ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಕುರಿತು ಮಾತನಾಡಿರುವ ದ್ವಿಸದಸ್ಯ ಪೀಠ, “ನ್ಯಾಯಾಲಯ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೊಂಡಿಲ್ಲ, ಸ್ವಯಂ ಪ್ರೇರಿತವಾಗಿಯೂ ವಿಚಾರಣೆಗೆ ಮುಂದಾಗಿಲ್ಲ. ಬದಲಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಾವೂ ಸಹ ಈ ನಗರದ ಪ್ರಜೆಗಳಾಗಿ ಲಾಕ್ ಡೌನ್ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದೇವೆ.
ಹೀಗಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸಂಪೂರ್ಣ ಲಾಕ್ಡೌನ್ ಅಥವಾ ಕರ್ಫ್ಯೂ ವಿಧಿಸುವ ಕುರಿತು ಸರ್ಕಾರ ಪ್ರಸ್ತುತ ಯಾವುದಾದರೂ ಯೋಜನೆ ರೂಪಿಸಿದೆಯೇ? ಈ ಕುರಿತು ನ್ಯಾಯಾಲಯ ತಿಳಿದುಕೊಳ್ಳಲು ಬಯಸುತ್ತಿದೆ” ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ : Big Breaking; ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಆರೋಪಿ ಅಮೂಲ್ಯಾ ಲಿಯೋನಾಗೆ ಜಾಮೀನು!
ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಮಾತ್ರ ಈವರೆಗೆ 26,000 ಕೊರೋನಾ ಪ್ರಕರಣಗಳು ಕಂಡುಬಂದಿದ್ದು, ಸುಮಾರು 326 ಜನ ಮೃತಪಟ್ಟಿದ್ದಾರೆ. ಪರಿಣಾಮ ಈ ಅಂಕಿಸಂಖ್ಯೆ ನ್ಯಾಯಾಲಯವನ್ನು ಚಿಂತೆಗೀಡು ಮಾಡಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ