ಬೆಂಗಳೂರು (ಮೇ. 20): ಕಷ್ಟಗಳಿಂದ ಕಾಪಾಡುವಂತೆ ಜನರು ಮೊರೆ ಹೋಗುತ್ತಿದ್ದ ದೇವಾಲಯಗಳು ಈಗ ಕೊರೋನಾ ಸಂಕಷ್ಟದಿಂದ ಬಂದ್ ಆಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಈಗಾಗಲೇ ದೇವಾಲಯಗಳಿಗೆ ಸಾರ್ವಜನಿಕ ಪ್ರವೇಶವನ್ನು ಬಂದ್ ಮಾಡಿಸಿದೆ. ಅರ್ಚಕರು, ಆಡಳಿತ ಮಂಡಳಿಗೆ ಸೀಮಿತವಾಗಿ ದೇವಾಲಯದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಜನರಿಲ್ಲದೇ, ದೇವಾಲಯಗಳ ಆದಾಯ ಕೂಡ ಖೋತಾ ಹೊಡೆದಿದೆ. ಇದರಿಂದ ದೇವಾಲಯದ ಆದಾಯ ನಂಬಿದ ಅರ್ಚಕರು ಹಾಗೂ ದೇವಾಲಯದ ಇತರೆ ಸಿಬ್ಬಂದಿಗಳು ಈಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಾಯ, ದಾಸೋಹ ವಿಲ್ಲದೇ ಮುಜರಾಯಿ ಇಲಾಖೆ ಅನೇಕ ದೇವಾಲಯಗಳು ಈಗ ಕಷ್ಟದ ಪರಿಸ್ಥಿತಿ ಎದುರಿಸುವಂತೆ ಆಗಿದೆ. ದೇವಾಲಯದ ಪೂಜೆ ಪುನಸ್ಕಾರಗಳನ್ನೇ ನಂಬಿ ಬದುಕುತ್ತಿದ್ದ ಅರ್ಚಕರಿಗೆ ಇದರಿಂದ ಭಾರೀ ನಷ್ಟ ಉಂಟಾಗಿದ್ದು, ಅವರ ಸಹಾಯಕ್ಕೆ ಈಗ ಸರ್ಕಾರ ಆಗಮಿಸಿದೆ.
ಲಾಕ್ಡೌನ್ ಹಿನ್ನಲೆ ಮುಚ್ಚಿರುವ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರಿಗೆ ಮೂರು ತಿಂಗಳ ಮುಂಗಡ ತಸ್ತೀಕ್ ಬಿಡುಗಡೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮೇ, ಜೂನ್ ಮತ್ತು ಜುಲೈ ಮೂರು ತಿಂಗಳ ತಸ್ತೀಕ್ (ತಿಂಗಳ ವೇತನ) ಬಿಡುಗಡೆ ಮಾಡಲಿದೆ. ಮೂರು ತಿಂಗಳ ಸುಮಾರು 33.45 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಸುಮಾರು 27 ಸಾವಿರ ದೇವಾಲಯಗಳ ಅರ್ಚಕರಿಗೆ ಮುಖಂಡವಾಗಿ ಈ ಹಣ ಬಿಡುಗಡೆಯಾಗಿದೆ.
ಇದೇ ವೇಳೆ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳಿಂದ ಸಿ ಗ್ರೇಡ್ ದೇವಸ್ಥಾನಗಳಿಗೆ ನೆರವು ನೀಡಲು ಮುಂದಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಮುಜುರಾಯಿ ಇಲಾಖೆ, ಕೋವಿಡ್ ಸಾಂಕ್ರಾಮಿಕ ಸೋಂಕು ಉಲ್ಬಣಗೊಂಡ ಹಿನ್ನಲೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ, ಇದರಿಂದ ಸಿ ಗುಂಪಿನ ದೇವಾಲಯಗಳ ಅರ್ಚಕರುಗಳಿಗೆ ಯಾವುದೇ ಆದಾಯವಿಲ್ಲದೇ ಅವರ ಜೀವನೋಪಾಯಕ್ಕೆ ತೊಂದರೆಯಾಗಿದೆ.
ಇದನ್ನು ಓದಿ: ಪ್ರೆಗ್ನೆಸಿ ಪರೀಕ್ಷೆಯಂತೆ ಇನ್ಮುಂದೆ ಮನೆಯಲ್ಲಿಯೇ ನಡೆಸಬಹುದು ಕೊರೋನಾ ಟೆಸ್ಟ್; ಮಾರುಕಟ್ಟೆಗೆ ಬರಲಿದೆ ಕೋವಿಸೆಲ್ಫ್ ಕಿಟ್
ಈ ಹಿನ್ನಲೆ ಇಲಾಖೆ ವ್ಯಾಪ್ತಿಗೆ ಒಳಪಡುವ ಸಿ ಗುಂಪಿನ ದೇವಾಲಯಗಳ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ಆಯಾಯ ಜಿಲ್ಲೆಗಳಲ್ಲಿನ ಆರ್ಧಿಕವಾಗಿ ಸಧೃಡವಾಗಿರುವ ಎ ಗುಂಪಿನ ದೇವಾಲಯಗಳಲ್ಲಿರುವ ದವಸ ಶಾನ್ಯಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಇಂದು ವೇಳೆ ದವಸ ಧಾನ್ಯದ ಕೊರತೆ ಇದ್ದಲ್ಲಿ ದೇವಾಯಲದ ನಿಧಿಯಿಂದ ವೆಚ್ಚವನ್ನು ಭರಿಸಿ ಅಂದಾಜು 1 ಸಾವಿರದಿಂದ 1.500 ಮೌಲ್ಯದ ಅಗತ್ಯ ಆಹಾರ ಪದಾರ್ಥಗಳಿರುವ ಆಹಾರ ಕಿಟ್ ಒದಗಿಸಲು ಸೂಚನೆ ನೀಡಲಾಗಿದೆ.
ಇದನ್ನು ಓದಿ: ಮಂಡ್ಯ ಬಳಿಕ ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ವಿಶೇಷ ಪೂಜೆ; ಕೊಯಿಮತ್ತೂರಿನಲ್ಲಿ ದೇವಾಲಯ ನಿರ್ಮಾಣ
ಈ ಮೂಲಕ ಉತ್ತಮ ಆದಾಯ ಹೊಂದಿರುವ ದೇವಾಲಯಗಳಿಂದ ಕಡಿಮೆ ಆದಾಯ ಹೊಂದಿರುವ ದೇವಾಲಯದ ಅರ್ಚಕರು, ಸಿಬ್ಬಂದಿಗಳಿಗೆ ನೆರವು ನೀಡಲು ಸರ್ಕಾರ ಮುಂದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಕೊರೋನಾ ಸೋಂಕಿನ ಹಿನ್ನಲೆ ಎಲ್ಲಾ ದೇವಾಲಯಗಳಿಗೂ ಸರ್ಕಾರ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿತ್ತು. ಇದರ ಪರಿಣಾಮವಾಗಿ ಕೋಟಿ ಕೋಟಿ ಆದಾಯ ತರುತ್ತಿದ್ದ ದೇವಾಲಯಗಳಲ್ಲಿ ಭಕ್ತರ ಪ್ರವೇಶವಿಲ್ಲದೇ ಆದಾಯ ಇಳಿಕೆ ಕಂಡಿತು. ಲಾಕ್ಡೌನ್ ತೆರವಾದರೂ ಕೆಲ ದೇವಾಲಯಗಳಿಗೆ ಭಕ್ತರ ಸಂಖ್ಯೆ ಕಡಿಮೆಯಾಗಿ ಆದಾಯ ಪ್ರಗತಿ ಕಂಡಿರಲಿಲ್ಲ. ಈ ನಡುವೆ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಕೊಂಚ ಆದಾಯ ಕಂಡಿತು. ಈಗ ಮತ್ತೊಮ್ಮೆ ರಾಜ್ಯದಲ್ಲಿ ಲಾಕ್ಡೌನ್ ಆಗಿದ್ದು, ದೇವಾಲಯದ ಆದಾಯಕ್ಕೆ ಮತ್ತೆ ಪೆಟ್ಟು ಬಿದ್ದುದ್ದು, ಇದು ಮುಜರಾಯಿ ಇಲಾಖೆ ಕಂಗೆಡುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ