ದೆಹಲಿ (ಮೇ.01); ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಸ್ಥಳೀಯ ಚುನಾವಣೆ ನಡೆದಿತ್ತು. ಆದರೆ, ಈ ಚುನಾವಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದಾಗ 700 ಶಿಕ್ಷಕರು ಕೊರೋನಾ ಸೋಂಕಿಗೆ ತುತ್ಥಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಶಿಕ್ಷಕರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ. ಮತ ಎಣಿಕೆಯನ್ನು ಮುಂದೂಡಿ ಎಂದು ಒತ್ತಾಯಿಸಿ ಶಿಕ್ಷಕರ ಮಂಡಳಿಯೊಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದರಂತೆ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಹ, "ಮೂರು ವಾರಗಳ ಕಾಲ ಮತ ಎಣಿಕೆಯನ್ನು ಮುಂದೂಡಿದರೆ ಸ್ವರ್ಗವೇನು ಉದುರಿ ಬೀಳುವುದಿಲ್ಲ" ಎಂದು ಹೇಳುವ ಮೂಲಲ ಮತ ಎಣಿಕೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಆದರೆ, ಇದೀಗ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ತಾವು ಕೋವಿಡ್ ವಿರುದ್ಧ ಮುಂಜಾಗ್ರತೆ ವಹಿಸುವುದಾಗಿ ಚುನಾವಣಾ ಆಯೋಗ ಆಶ್ವಾಸನೆ ನೀಡಿದ್ದು, ಇದಕ್ಕೆ ಸಮ್ಮತಿಸಿರುವ ಸುಪ್ರೀಂ ಕೋರ್ಟ್ ಭಾನುವಾರ ಮತ ಎಣಿಕೆಗೆ ಇಂದು ಅನುಮತಿ ನೀಡಿದೆ.
ಈ ವೇಳೆ ಎಲ್ಲಾ ಎಣಿಕೆ ಕೇಂದ್ರಗಳಲ್ಲಿ ಹಿರಿಯ ಅಧಿಕಾರಿಗಳು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಬೇಕೆಂದು ನ್ಯಾಯಾಲಯ ಒತ್ತಾಯಿಸಿದೆ. ಅರ್ಜಿಯನ್ನು ಆಲಿಸುವಾಗ, ಎಣಿಕೆಯನ್ನು ವಿಳಂಬ ಮಾಡಬಹುದೇ ಎಂದು ಸುಪ್ರೀಂ ಕೋರ್ಟ್ ಮತದಾನ ಆಯೋಗವನ್ನು ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಯೋಗ ನಾಳೆ ಎಣಿಕೆ ನಿಗದಿಪಡಿಸಲಾಗಿದೆ ಎಂದು ಉತ್ತರಿಸಿತ್ತು.
"ಕೋವಿಡ್ ಪರಿಸ್ಥಿತಿಯ ಹೊರತಾಗಿಯೂ, ನೀವು ಮತ ಎಣಿಕೆಗೆ ಹೋಗಬೇಕೇ? ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಿ ಎರಡು ವಾರಗಳ ನಂತರ ನೀವು ಮತ ಎಣಿಕೆ ನಡೆಸಬಹುದಲ್ಲವೇ"ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಆದಾಗ್ಯೂ, ರಾಜ್ಯ ಚುನಾವಣಾ ಆಯೋಗವು "ನಾವು ಎಲ್ಲಾ ರೀತಿಯ ಮುಂಜಾಗ್ರತೆಯೊಂದಿಗೆ ಮತ ಎಣಿಕೆಗೆ ಹೋಗಲು ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ಪ್ರತಿಕ್ರಿಯಿಸಿತ್ತು.
ನ್ಯಾಯಾಲಯದ ವಿಚಾರಣೆಯ ಆರಂಭದಲ್ಲೇ ಮತ ಎಣಿಕೆ ಪ್ರಕ್ರಿಯೆಗೆ ಕೊರೋನಾ ಮಾರ್ಗಸೂಚಿಯನ್ನು ಅನುಸರಿಸುವುದಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್ಗೆ ಭರವಸೆ ನೀಡಿತ್ತು.
"ಮತ ಎಣಿಕೆ ಕೇಂದ್ರಗಳ ಪ್ರವೇಶದ್ವಾರದಲ್ಲಿ ಆಕ್ಸಿಮೀಟರ್ ಪರೀಕ್ಷೆಗಳನ್ನು ಮಾಡಲಾಗುವುದು. ಎಣಿಕೆ ಕೇಂದ್ರ ಮತ್ತು ಹೊರಗಡೆ ಯಾವುದೇ ಜನಸಂದಣಿಯನ್ನು ಅನುಮತಿಸಲಾಗುವುದಿಲ್ಲ. ಪ್ರತಿ ಪಾಳಿಯ ನಂತರ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಗುವುದು. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲಾಗುವುದು ಮತ್ತು ಉಷ್ಣ ತಪಾಸಣೆ ಮಾಡಲಾಗುವುದು" ಎಂದು ಆಯೋಗವು ತಿಳಿಸಿದೆ.
ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ಕೂಡಾ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಹೇಳಿದೆ.
ಹೊಸ ಪ್ರದೇಶ COVID-19 ಪ್ರಕರಣಗಳಲ್ಲಿ ಉತ್ತರ ಪ್ರದೇಶ ಭಾರಿ ಏರಿಕೆಯಾಗಿದೆ. ಈ ನಡುವೆಯೂ ಸ್ಥಳೀಯ ಚುನಾವಣೆ ನಡೆದಿವೆ. ಉತ್ತರಪ್ರದೇಶದಲ್ಲಿ ನಾಲ್ಕು ಹಂತದ ಪಂಚಾಯತ್ ಚುನಾವಣೆಯ ಮತದಾನ ಏಪ್ರಿಲ್ 29 ಕ್ಕೆ ಕೊನೆಗೊಂಡಿತು.
ಏಪ್ರಿಲ್ 15 ರಂದು ಮೊದಲ ಹಂತ ಮತ್ತು ಏಪ್ರಿಲ್ 19 ರಂದು ಎರಡನೇ ಸುತ್ತಿನಲ್ಲಿ ಶೇಕಡಾ 71 ರಷ್ಟು ಮತದಾನವಾಗಿದೆ. ಏಪ್ರಿಲ್ 26 ರಂದು ನಡೆದ ಮೂರನೇ ಹಂತದಲ್ಲಿ ಶೇಕಡಾ 73.5 ರಷ್ಟು ನೋಂದಾಯಿತ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಇಂದಿನ ಕೊರೋನಾ ಸ್ಥಿತಿ:
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ