news18india Updated:June 18, 2020, 7:18 PM IST
ಕೊರೋನಾ ವೈರಸ್ ಪ್ರಾತಿನಿಧಿಕ ಚಿತ್ರ
ಶ್ರೀನಗರ(ಜೂನ್ 18): ಯಾವುದೇ ಆಸ್ಪತ್ರೆ ಎಂದರೆ ಅಲ್ಲಿ ರೋಗಿಗಳ ಯಾತನೆ, ಅವರ ಸಂಬಂಧಿಕರ ಮಾನಸಿಕ ತುಮುಲ, ಆತಂಕ… ಹೀಗೆ ಒಂದು ರೀತಿಯ ನೀರವ ವಾತಾವರಣ ಇರುತ್ತದೆ. ಇನ್ನು, ಕೆಲವಾರು ತಿಂಗಳುಗಳ ಹಿಂದೆ ವಕ್ಕರಿಸಿರುವ ಕೊರೋನಾ ರೋಗದ ಆಸ್ಪತ್ರೆಯ ಸ್ಥಿತಿ ಕೇಳಬೇಕೆ…! ಆದರೆ, ಶ್ರೀನಗರದ ಸ್ಕಿಮ್ಸ್ (SKIMS) ವೈದ್ಯಕೀಯ ಶಿಕ್ಷಣ ಕಾಲೇಜಿನ ಆಸ್ಪತ್ರೆ ಜೀವಂತಿಕೆಯಿಂದ ನಳನಳಿಸುತ್ತಿದೆ. ಇದಕ್ಕೆಲ್ಲಾ ಕಾರಣವಾಗಿರುವವರು ಜಮ್ಮು-ಕಾಶ್ಮೀರ ಪೊಲೀಸ್ನ ಸೆಕ್ಯೂರಿಟಿ ವಿಬಾಗದಲ್ಲಿ ಚಾಲಕರಾಗಿರುವ ಮಂಜೂರ್ ಅಹ್ಮದ್. 20 ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ ಮನ್ಜೂರ್ ಅಹ್ಮದ್ ಅವರು ಆಸ್ಪತ್ರೆ ಕೋವಿಡ್ ವಾರ್ಡ್ಗಳ ವಿಭಾಗಕ್ಕೆ ಹೊಸ ಜೀವ ತುಂಬಿದ್ದಾರೆ.
“ನನ್ನನ್ನು ಇಲ್ಲಿ ದಾಖಲಿಸಿದಾಗ ಈ ಯುವಜನರು ಆತಂಕಿತರಾಗಿ ಬದುಕಿನ ಎಲ್ಲಾ ಆಸೆ ಕಮರಿ ಹೋದವರಂತೆ ಹಾಸಿಗೆಯಲ್ಲಿ ಮಲಗಿದ್ದರು. ನನಗೆ ಆಗ ಏನಾದರೂ ಬದಲಾವಣೆ ಮಾಡಬೇಕೆನಿಸಿತು. ನನಗೆ ಮಾರ್ಷಲ್ ಆರ್ಟ್ಸ್ ಗೊತ್ತಿದ್ದರಿಂದ ಅವರಿಗೆ ದೈಹಿಕ ಕಸರತ್ತು ಮಾಡಲು ಪ್ರೇರೇಪಿಸಿದೆ. ಆಗ ಬದಲಾವಣೆ ಪ್ರಾರಂಭವಾಯಿತು” ಎಂದು ಮಂಜೂರ್ ಅಹ್ಮದ್ ಹೇಳುತ್ತಾರೆ.
ವೈದ್ಯರೂ ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ಪುರುಷರು ಮತ್ತು ಮಹಿಳೆಯರು ಹೀಗೆ ಎಲ್ಲಾ ರೋಗಿಗಳಿಗೂ ಮಂಜೂರ್ ಅವರು ನಿಯಮಿತ ವ್ಯಾಯಾಮಗಳನ್ನ ಮಾಡಿಸತೊಡಗಿದರು. ರೋಗಿಗಳೂ ಕೂಡ ಉತ್ತಮವಾಗಿ ಸ್ಪಂದಿಸಿದರು.
ಇದನ್ನೂ ಓದಿ: CoronaVirus: ಶೀಘ್ರದಲ್ಲೇ ದೆಹಲಿಯಲ್ಲಿ ಆಂಟಿಜೆಂಟ್ ವಿಧಾನದ ಮೂಲಕ ಕೊರೋನಾ ಪರೀಕ್ಷೆ; ಅಮಿತ್ ಶಾ
ಬರೀ ವ್ಯಾಯಾಮವಷ್ಟೇ ಅಲ್ಲ, ಯಾವುದೇ ಸಣ್ಣಪುಟ್ಟ ಸಮಸ್ಯೆಯಾದರೂ ಸಹಾಯಕ್ಕೆ ಮನ್ಜೂರ್ ಅವರು ಮುಂದಾಗುತ್ತಿದ್ದರು. ಇವರು ಅಲ್ಲಿಗೆ ಹೋದ ಕೆಲವೇ ದಿನಗಳಲ್ಲಿ ಹಲವು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಕಳೆದ ವಾರವಷ್ಟೇ 15 ಮಂದಿ ಕೊರೋನಾ ಪರೀಕ್ಷೆಯಲ್ಲಿ ನೆಗಟಿವ್ ಬಂದು ಬಿಡುಗಡೆಯಾದರು. ಇವರೆಲ್ಲಾ ಚೇತರಿಸಿಕೊಂಡ ಖುಷಿಯಲ್ಲಿದ್ದರೂ ಆಸ್ಪತ್ರೆಯಲ್ಲಿ ಮಂಜೂರ್ ಅಹ್ಮದ್ ಜೊತೆ ಕಳೆದ ದಿನಗಳ ನೆನಪನ್ನು ಯಾವತ್ತೂ ಮರೆಯುವುದಿಲ್ಲ.
ಉತ್ತರ ಕಾಶ್ಮೀರದ ದಿನಸಿ ಅಂಗಡಿ ಮಾಲಿಕ ಪೀರ್ ಜಫ್ರಾವುಲ್ಲಾ ಅವರು ಮಂಜೂರ್ ಅವರನ್ನ ರಿಯಲ್ ಹೀರೋ ಎಂದು ಕರೆಯುತ್ತಾರೆ. “ನನಗೆ ಪಾಸಿಟಿವ್ ಬಂದಾಗ ನನಗೆ ನನ್ನ ಕುಟುಂಬವನ್ನು ಮತ್ತೆ ನೋಡಲು ಸಾಧ್ಯವಿಲ್ಲ ಅನಿಸಿತ್ತು. ನನಗೆ ಶಾಕ್ ಆಗಿತ್ತು. ಡಯಾಬಿಟಿಸ್ ಸಮಸ್ಯೆಯೂ ಇದ್ದರಿಂದ ನಾನು ಕೊರೋನಾ ರೋಗದಿಂದ ಸತ್ತೇಹೋಗುತ್ತೇನೋ ಅನಿಸಿತ್ತು. ಆ ಯೋಚನೆಯಲ್ಲಿ ಇದ್ದವನಿಗೆ ಮಂಜೂರ್ ಅವರು ದೇವರಂತೆ ಬಂದರು. ನಮ್ಮ ಮೈಯೊಳಗಿರುವ ವೈರಿಯ ಜೊತೆಯೇ ಬದುಕಿ ಹೇಗೆ ಎದುರಿಸಬೇಕೆಂದು ಅವರು ಕಲಿಸಿಕೊಟ್ಟರು” ಎಂದು ಜಫ್ರಾವುಲ್ಲಾ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ಜೀವನೋಪಾಯಕ್ಕೆ 50,000 ಕೋಟಿ; ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆ ಮಾಹಿತಿ ನೀಡಿದ ಸೀತಾರಾಮನ್ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ಹೀರೋ ಪಾತ್ರದಂತೆ ಮಂಜೂರ್ ಅವರು ಶ್ರೀನಗರದ ಸ್ಕಿಮ್ಸ್ ಆಸ್ಪತ್ರೆಯಲ್ಲಿ ಖ್ಯಾತರಾಗಿಹೋಗಿದ್ದರು. ರೋಗಿಗಳಿಗಷ್ಟೇ ಅಲ್ಲ ಆಸ್ಪತ್ರೆಯ ಆಡಳಿತದವರಿಗೂ ಮಂಜೂರ್ ನೆಚ್ಚಿನವರಾಗಿಬಿಟ್ಟಿದ್ದರು. “ಮಂಜೂರ್ ಅವರು ಒಬ್ಬ ಅದ್ಭುತ ಹೋರಾಟಗಾರ. ರೋಗಿಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬಿ ಕೊರೋನಾ ವೈರಸ್ ವಿರುದ್ಧ ಆಂತರಿಕವಾಗಿ ಹೋರಾಡಲು ಹುರಿದುಂಬಿಸಿದರು” ಎಂದು ಸ್ಕಿಮ್ಸ್ ಕಾಲೇಜಿನ ಡಾ. ರೆಯಾಜ್ ಉಂಟೂ ಹೇಳುತ್ತಾರೆ.
ಅಂದಹಾಗೆ, ಮಂಜೂರ್ ಅವರು ಕಳೆದ ಭಾನುವಾರದಂದು ಕೊರೋನಾ ಟೆಸ್ಟ್ನಲ್ಲಿ ನೆಗಟಿವ್ ರಿಸಲ್ಟ್ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರು ಆಸ್ಪತ್ರೆಯ ಕೋವಿಡ್ ಘಟಕದಲ್ಲಿ ಪ್ರೋಕ್ಷಿಸಿದ ಪಾಸಿಟಿವ್ ಎನರ್ಜಿಯು ಮುಂಬರುವ ರೋಗಿಗಳಿಗೂ ಪ್ರೇರಕವಾಗಬಹುದು ಎಂದು ಆಸ್ಪತ್ರೆಯ ವೈದ್ಯರು ಅಪೇಕ್ಷಿಸಿದ್ಧಾರೆ.
- ಮೀರ್ ಶಬೀರ್ ಅಹ್ಮದ್, CNN-News18
First published:
June 18, 2020, 7:18 PM IST