ರಾಯ್ಪುರ್ (ಏಪ್ರಿಲ್ 18); ಭಾರತದಲ್ಲಿ ಕೊರೋನಾ ಎರಡನೇ ಅಲೆ ಇದೀಗ ಕೈಮೀರುವ ಹಂತದಲ್ಲಿದೆ. ದೇಶದಾದ್ಯಂತ ಪ್ರತಿದಿನ ಅಂದಾಜ 2 ಲಕ್ಷಕ್ಕೂ ಅಧಿಕ ಜನ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆಯಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಗುಜರಾತ್-ಮುಂಬೈ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಕೊರೋನಾದಿಂದ ತತ್ತರಿಸಿದ್ದು, ಸೋಂಕು ತಡೆಗೆ ನೈಟ್ ಕರ್ಫ್ಯೂ ಮೊರೆ ಹೋಗಿವೆ. ಮತ್ತೊಮ್ಮೆ ಲಾಕ್ಡೌನ್ ಕೂಗು ಕೇಳಿಬರುತ್ತಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಕೊರೋನಾ ತಡೆಗೂ ಸೂಕ್ತ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್, "ವಿಶ್ವದಲ್ಲಿ ಈಗಾಗಲೇ ಎರಡನೇ ಅಲೆಗೆ ತುತ್ತಾದ ದೇಶಗಳಿಂದ ಪಾಠ ಕಲಿಯುವ ಮೂಲಕ ಭಾರತವು ಕೊರೋನಾ ವೈರಸ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು. ಆದರೆ, ಕಳೆದ ಒಂದು ವರ್ಷ ಸಮಯಾವಕಾಶ ಇದ್ದರೂ ಭಾರತ ಮಾತ್ರ ಈ ಮಹಾಮಾರಿಯನ್ನು ಎದುರಿಸಲು ಸಿದ್ದತೆ ನಡೆಸಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೋನಾ ಎರಡನೇ ಅಲೆ ಕುರಿತು ಮಾತನಾಡಿರುವ ಭೂಪೇಶ್ ಬಾಗೆಲ್, "ಕೊರೋನಾ ಎರಡನೆಯ ಅಲೆ ಹೆಚ್ಚು ಭೀಕರವಾಗಿದೆ. ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ವೃದ್ಧರಲ್ಲದೆ, ವೈರಸ್ ಸೋಂಕಿತ ಯುವಕರು ಸಹ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ಅಪ್ಪಳಿಸಿದ್ದ ಇತರ ದೇಶಗಳಿಂದ ನಾವು ಪಾಠ ಕಲಿಯಬೇಕಾಗಿತ್ತು. ದೆಹಲಿಯಲ್ಲಿ ಕುಳಿತುಕೊಳ್ಳುವ ಜನರು ಇದನ್ನು ನೋಡಿ ಜನರಿಗೆ ನಿರ್ದೇಶನ ನೀಡಬೇಕು" ಎಂದು ಕಿವಿಮಾತು ಹೇಳಿದ್ದಾರೆ.
ಇದೇ ಸಂದರ್ಭಗಳಲ್ಲಿ ವಿದೇಶದಲ್ಲಿ ತಯಾರಾದ ಲಸಿಕೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವ ಅಗತ್ಯತೆ ಇದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,501 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಲಕ್ಷಾಂತರ ಪ್ರಮಾಣದಲ್ಲಿ ಕೊರೊನಾ ವಿರೋಧಿ ಲಸಿಕೆಗಳನ್ನು ಇತರ ದೇಶಗಳಿಗೆ ಉಡುಗೊರೆಯಾಗಿ ನೀಡಿರುವುದನ್ನು ಟೀಕಿಸಿರುವ ಸಿಎಂ, "ನೀವು ರೆಮ್ಡೆಸಿವಿರ್ ಲಸಿಕೆಯನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದ್ದೀರಿ. ಆದರೆ, ಭಾರತದಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಲಸಿಕೆ ಹಾಕುವ ಅಗತ್ಯವಿದೆ" ಎಂದು ಹೇಳಿದ್ದಾರೆ.
"ಭಾರತದ ಲಸಿಕೆ ಆರಂಭವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು. ಆದರೂ ದೇಶದಲ್ಲಿ ಕೊರೊನಾ ಇಷ್ಟೊಂದು ಹರಡಿದೆ. ಅತಿ ಹೆಚ್ಚು ಹಾನಿಗೊಳಗಾಗಿರುವ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ವ್ಯಾಕ್ಸಿನೇಷನ್ ಕೊರತೆ ಎದುರಿಸುತ್ತಿವೆ. ಲಸಿಕೆ ಬೇಕು ಎಂದು ಕೇಂದ್ರಕ್ಕೆ ಮನವಿ ಮಾಡುತ್ತಿವೆ" ಎಂದಿದ್ದಾರೆ.
ಸಾಂಕ್ರಾಮಿಕ ರೋಗ ಇಷ್ಟು ಹಬ್ಬಿರುವ ಮಧ್ಯೆಯು ಚುನಾವಣಾ ರ್ಯಾಲಿಗಳು ಮತ್ತು ಹರಿದ್ವಾರದಲ್ಲಿ ಕುಂಭಮೇಳದಲ್ಲಿ ಕೊರೋನಾ ಮಾರ್ಗಸೂಚಿಗಳ ಉಲ್ಲಂಘನೆಯನ್ನೂ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕಟುವಾಗಿ ಟೀಕಿಸಿದ್ದಾರೆ.
ಇನ್ನು "ಕೊರೋನಾ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎಲ್ಲಾ ಸಾರ್ವಜನಿಕ ರ್ಯಾಲಿಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಛತ್ತೀಸ್ಗಢ ಸಿಎಂ ಶ್ಲಾಘಿಸಿದ್ದಾರೆ. “ರಾಜಕಾರಣಿಗಳು ನಮಗೆ ಆದರ್ಶಪ್ರಾಯರಾಗಿರಬೇಕು. ಕೊರೊನಾ ಕಾರಣಕ್ಕೆ ರ್ಯಾಲಿಗಳನ್ನು ಮಾಡುವುದಿಲ್ಲ ಎಂದು ಯಾವ ನಾಯಕರು ಹೇಳಿಲ್ಲ. ಪ್ರಧಾನಿ ಮೋದಿ ಅವರೇ ಅನೇಕ ರ್ಯಾಲಿಗಳನ್ನು ಮಾಡುತ್ತಿದ್ದಾರೆ" ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ