ಬೆಂಗಳೂರು(ಏ.20): ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ರಾಜ್ಯ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತಾಡಿ ಅವರು, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪಾದರಾಯನಪುರ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರು ಯಾರೇ ಆಗಲೀ ಸರಿಯಾದ ಕ್ರಮ ಕೈಗೊಳ್ಳಲಿದ್ದೇವೆ. ಇದಕ್ಕೆ ಸ್ಥಳೀಯ ಶಾಸಕರ ಬೆಂಬಲ ಇದೆಯೋ, ಇಲ್ಲವೋ ಗೊತ್ತಿಲ್ಲ. 2005ರ ತುರ್ತು ಪರಿಸ್ಥಿತಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೇವೆ ಎಂದರು.
ಭಾನುವಾರ ರಾತ್ರಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಗಲಾಟೆ ನಡೆದಿದೆ. ಈ ಪ್ರಕರಣ ಸಂಬಂಧ ಐದು ಎಫ್ಐಆರ್ ದಾಖಲಾಗಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ಆರ್. ಅಶೋಕ್.
ಇನ್ನು, ಕೊರೋನಾ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವವರಿಗೆ ಕಾವೇರಿ ನೀರು ಉಚಿತವಾಗಿ ಪೂರೈಕೆ ಮಾಡಲಾಗುವುದು. ಸುಮಾರು ಒಂದು ವರ್ಷಗಳ ಕಾಲ ಎರಡೂವರೆ ಲಕ್ಷ ಜನರಿಗೆ ಉಚಿತವಾಗಿ ಕಾವೇರಿ ನೀರು ಪೂರೈಕೆ ಮಾಡಲಿದ್ದೇವೆ ಎಂದರು.
ಬಿಬಿಎಂಪಿ ಇತಿಹಾಸದಲ್ಲಿ ಮೊದಲ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಿದೆ. ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ದೊರೆತಿದೆ. 10 ಸಾವಿರಕ್ಕಿಂತ ಕಡಿಮೆ ನೀರನ್ನ ಬಳಸುವವರಿಗೆ ಒಂದು ವರ್ಷ ಉಚಿತ ನೀರು ಪೂರೈಕೆ ಮಾಡುತ್ತೇವೆ. ಇದರಿಂದ ಎರಡುವರೆ ಲಕ್ಷ ಕುಟುಂಬಕ್ಕೆ ಸದುಪಯೋಗವಾಗಲಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ, ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಬಜೆಟ್ನಲ್ಲಿ 49 ಕೋಟಿ ರೂ. ಮೀಸಲಿಟ್ಟ ಬಿಬಿಎಂಪಿ, ಗೋವುಗಳ ರಕ್ಷಣೆಗೂ ಪಣ
ಅನಂತ್ ಕುಮಾರ್ ಹೆಸರಲ್ಲಿ ಲ್ಯಾಪ್ಟಾಪ್ ನೀಡಲು 15 ಕೋಟಿ ಮೀಸಲಿಡಲಾಗಿದೆ. ಕೊರೋನಾ ವೈರಸ್ ತಡೆಗಟ್ಟಲು ಮೊದಲ ಬಾರಿ ಹಣ ಮೀಸಲು ಇಡಲಾಗಿದೆ. ಬೆಂಗಳೂರಿನ ಎಂಟು ಭಾಗಗಳಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು. ಮಡಿವಾಳರಿಗೆ ವಾಶಿಂಗ್ ಮೆಶಿನ್ ನೀಡಲಾಗ್ತಿದೆ ಎಂದರು.
ಪ್ರತಿ ಕೂಲಿಕಾರ್ಮಿಕರಿಗೆ ಒಂದು ಲಕ್ಷ ಕಿಟ್ ವಿತರಣೆ ಮಾಡಿದ್ದೀವಿ. ಇನ್ಫೋಸಿಸ್ ಸಂಸ್ಥೆಯೂ 25 ಸಾವಿರ ಕಿಟ್ ಕೊಟ್ಟಿದೆ. ಇದನ್ನು ಕಾರ್ಮಿಕ ಇಲಾಖೆಯಿಂದಲೇ ಕೊಡುತ್ತಿದ್ದೇವೆ. ಸರ್ಕಾರ ಇನ್ನೊಂದು ಕಂತಿನಲ್ಲಿ ರೇಷನ್ ಕಿಟ್ ಕೊಡಲಿದೆ. ಈಗಾಗಲೇ ಎರಡು ತಿಂಗಳ ಅಕ್ಕಿಯನ್ನ ಕೊಡಲಾಗಿದೆ. ಎಲ್ಲರಿಗೂ ಬ್ಯಾಂಕ್ ಮೂಲಕ ಪೆನ್ಶ್ಯನ್ ಕೊಡಲಾಗುತ್ತಿದೆ. ಪೋಸ್ಟ್ ಆಫೀಸಿನಿಂದು ಸ್ವಲ್ಪ ತಡವಾಗಿದೆ. ಯಾವ ಕಾರ್ಮಿಕನೂ ಹಸಿವಿನಿಂದ ನರಳಬಾರದು. ಇದು ನಮ್ಮ ಸರ್ಕಾರದ ಗುರಿ, ಇದಕ್ಕಾಗಿ ಎಷ್ಟೇ ಖರ್ಚಾದ್ರೂ ಸರಿ ಎಲ್ಲರಿಗೂ ಊಟ ಕೊಡ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ