news18-kannada Updated:July 14, 2020, 2:39 PM IST
ಆರೋಪಿ ಬಿಷಪ್ ಫ್ರಾಂಕೋ ಮುಲ್ಲಕ್ಕಲ್.
ನವದೆಹಲಿ(ಜು.14): ಸಾಲುಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್ನ ಮಾಜಿ ಬಿಷಪ್ ಫ್ರಾಂಕೊ ಮುಲಾಕ್ಕಲ್ಗೂ ಕೊರೋನಾ ಬಿಸಿ ತಟ್ಟಿದೆ. ಇವರಿಗೂ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
"ಇತ್ತೀಚೆಗೆ ಬಿಷಪ್ ಫ್ರಾಂಕೋ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಇವರನ್ನು ಕೋವಿಡ್-19 ಟೆಸ್ಟ್ಗೆ ಒಳಪಡಿಸಲಾಗಿತ್ತು. ಈಗ ಇವರ ಕೊರೋನಾ ರಿಪೋರ್ಟ್ ಬಂದಿದ್ದು, ಸೋಂಕು ಇರುವುದು ಧೃಡಪಟ್ಟಿದೆ" ಎಂದು ಮುಲಾಕ್ಕಳ್ ಪಿಆರ್ಓ ಫಾದರ್ ಪೀಟರ್ ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ನಿನ್ನೆ ಕೊಟ್ಟಾಯಂ ಸ್ಥಳೀಯ ನ್ಯಾಯಲಯ ಫ್ರಾಂಕೋಗೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು. ಪ್ರಕರಣ ಸಂಬಂಧ ಈ ಆದೇಶ ಹೊರಡಿಸುವ ಮುನ್ನ ಕೋರ್ಟ್ ಬಿಷಪ್ ಪರ ವಕೀಲರ ವಾದ-ಪ್ರತಿವಾದ ಆಲಿಸಿತ್ತು.
ಕೊರೋನಾ ತೀವ್ರಗೊಂಡ ಕಾರಣದಿಂದ ಪಂಜಾಬ್ನಲ್ಲೇ ಫ್ರಾಂಕೋ ಮುಲಾಕ್ಕಲ್ ಸಿಲುಕಿಕೊಂಡಿದ್ದಾರೆ. ಹೀಗಾಗಿ ಇವರು ಕೋರ್ಟ್ಗೆ ಬರಲು ಆಗುತ್ತಿಲ್ಲ ಎಂದು ಮುಲಾಕ್ಕಲ್ ಪರ ವಕೀಲ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಮುಲಾಕ್ಕಲ್ ಇರುವ ಜಲಂಧರ್ ಪ್ರದೇಶ ಕಂಟೈನ್ಮೆಂಟ್ ಜೋನ್ ಅಲ್ಲ ಎಂದು ಪ್ರತಿವಾದಿ ವಾದಿಸಿದ್ದರು.
ಕೊನೆಗೂ ವಾದ-ಪ್ರತಿವಾದ ಆಲಿಸಿದ ನ್ಯಾಯಲಯ ಬಿಷಪ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಜುಲೈ 1ರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ, ಇದುವರೆಗೂ ಒಮ್ಮೆಯೂ ಮುಲಾಕ್ಕಲ್ ಕೋರ್ಟ್ಗೆ ಹಾಜರಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕೋರ್ಟ್ ಹೀಗೆ ತೀರ್ಪು ನೀಡಿತ್ತು.
ಅತ್ಯಾಚಾರದ ಆರೋಪದ ಮೇಲೆ ಫ್ರಾಂಕೋ ಕಳೆದ ವರ್ಷ ಸೆಪ್ಟೆಂಬರ್ 21ರಂದು ಬಂಧನಕ್ಕೆ ಒಳಗಾಗಿದ್ದರು. ಬಳಿಕ 2019 ಅಕ್ಟೋಬರ್ 16ರಂದು ಜಾಮೀನು ಪಡೆದಿದ್ದರು.
ಫ್ರಾಂಕೋ ವಿರುದ್ಧ ಕೇರಳ ಪೊಲೀಸರು 1400 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2020 ಜನವರಿ 6ರಿಂದ ವಿಚಾರಣೆ ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈರೋಮಲಾಬಾರ್ ಕ್ಯಾಥೋಲಿಕ್ ಚರ್ಚ್ನ ಪ್ರಮುಖ ಮೂವರು ಬಿಷಪ್ಗಳು, 11 ಪಾದ್ರಿಗಳು ಹಾಗೂ ಹಲವು ಸನ್ಯಾಸಿನಿಯರು ಸೇರಿದಂತೆ ಒಟ್ಟು 83 ಸಾಕ್ಷಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಫ್ರಾಂಕೊ ಅವರನ್ನು ಬಿಷಪ್ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.
ಇದನ್ನೂ ಓದಿ: Bishop Franco Mulakkal: ಅತ್ಯಾಚಾರ ಪ್ರಕರಣ: ಕೇರಳ ಬಿಷಪ್ ಮುಲಾಕ್ಕಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ಕೋರ್ಟ್
ಇದಾದ ಬೆನ್ನಲೇ ಫ್ರಾಂಕೊ ಮುಲಾಕ್ಕಲ್ ವಿರುದ್ಧ ಮತ್ತೋರ್ವ ಕೇರಳದ ಸನ್ಯಾಸಿನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2014 ಮತ್ತು 2016 ರ ನಡುವೆ ಸನ್ಯಾಸಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮುಲಾಕ್ಕಲ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಂದು ಆರೋಪ ಮಾಡಿರುವ ಸನ್ಯಾಸಿನಿ 14 ನೇ ಸಾಕ್ಷಿಯಾಗಿದ್ದರು.
Published by:
Ganesh Nachikethu
First published:
July 14, 2020, 2:37 PM IST