ನವದೆಹಲಿ (ಮೇ 6): ದೇಶದಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್ -19 ಸಂಬಂಧಿತ ಪರಿಸ್ಥಿತಿಯ ಬಗ್ಗೆ ಗುರುವಾರ ಸಮಗ್ರ ಪರಾಮರ್ಶೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಸ್ಫೋಟದ ಬಗ್ಗೆ ವಿವರ ಪಡೆದುಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ಲಕ್ಷಕ್ಕಿಂತ ಹೆಚ್ಚಿನ ಸಕ್ರಿಯ ಪ್ರಕರಣಗಳಿರುವ 12 ರಾಜ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರೋಗದ ಹೆಚ್ಚಿನ ಹೊರೆ ಇರುವ ಜಿಲ್ಲೆಗಳ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ತಿಳಿಸಲಾಯಿತು.
ರಾಜ್ಯಗಳು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕುರಿತಂತೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಮುಖ ಸೂಚಕಗಳ ಬಗ್ಗೆ ರಾಜ್ಯಗಳಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ತ್ವರಿತ ಮತ್ತು ಸಮಗ್ರ ಕಂಟೈನ್ಮೆಂಟ್ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಚರ್ಚಿಸಲಾಯಿತು. ಸೋಂಕು ದೃಢಪಟ್ಟ ಪ್ರಕರಣ ಶೇಕಡಾ 10 ಅಥವಾ ಅದಕ್ಕಿಂತ ಹೆಚ್ಚಿರುವ ಮತ್ತು ಐಸಿಯು ಅಥವಾ ಆಕ್ಸಿಜನ್ ಸಹಿತ ಹಾಸಿಗೆಯ ಸಾಮರ್ಥ್ಯದ ಶೇಕಡಾ 60ರಷ್ಟು ಭರ್ತಿ ಆಗಿರುವ ಕಾಳಜಿಯ ಜಿಲ್ಲೆಗಳನ್ನು ಗುರುತಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದರು.
ಇದನ್ನು ಓದಿ: ಮೂರನೇ ಅಲೆ ಎದುರಿಸಲು ಸಿದ್ಧರಾಗಿ, ದೇಶವ್ಯಾಪಿ ಆಕ್ಸಿಜನ್ ಸಂಗ್ರಹ ಅತ್ಯಗತ್ಯ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಪ್ರಧಾನ ಮಂತ್ರಿಯವರು ಔಷಧಗಳ ಲಭ್ಯತೆಯ ಪರಾಮರ್ಶೆಯನ್ನೂ ನಡೆಸಿದರು. ರೆಮ್ ಡಿಸಿವರ್ ಸೇರಿದಂತೆ ಔಷಧ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುತ್ತಿರುವ ಬಗ್ಗೆಯೂ ಅವರಿಗೆ ವಿವರಿಸಲಾಯಿತು. ಪ್ರಧಾನಮಂತ್ರಿಯವರು ಲಸಿಕೆ ನೀಡಿಕೆಯ ಪ್ರಗತಿ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಸೂಚಿಗಳ ಕುರಿತಂತೆಯೂ ಪರಾಮರ್ಶೆ ನಡೆಸಿದರು. 17.7 ಕೋಟಿ ಲಸಿಕೆಗಳನ್ನು ರಾಜ್ಯಗಳಿಗೆ ಪೂರೈಸಲಾಗಿದೆ ಎಂಬ ಮಾಹಿತಿಯನ್ನು ಅವರಿಗೆ ನೀಡಲಾಯಿತು. ಲಸಿಕೆಯ ವ್ಯರ್ಥ ಕುರಿತು ರಾಜ್ಯವಾರು ಮಾಹಿತಿಯನ್ನು ಪ್ರಧಾನಮಂತ್ರಿ ಪರಿಶೀಲಿಸಿದರು. 45 ವರ್ಷ ಮೇಲ್ಪಟ್ಟ ಅರ್ಹ ಜನಸಂಖ್ಯೆಯ ಸುಮಾರು ಶೇ.31 ರಷ್ಟು ಜನರಿಗೆ ಕನಿಷ್ಠ 1 ಡೋಸ್ ನೀಡಲಾಗಿದೆ ಎಂಬ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು. ಸೂಕ್ಷ್ಮ ಪರಿಸ್ಥಿತಿಯ ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ವೇಗ ತಗ್ಗಬಾರದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ