ನವ ದೆಹಲಿ: ಕೊರೋನಾ ಮೂರನೇ ಅಲೆಯನ್ನು ದೇಶದಲ್ಲಿ ಪ್ರವೇಶಿಸದಂತೆ ತಡೆಯುವಲ್ಲಿ ಎಲ್ಲಾ ಸಚಿವರುಗಳು ಇತರರಿಗೆ ಮಾದರಿಯಾಗುವಂತೆ ಕೆಲಸ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರುಗಳಿಗೆ ಕಿವಿಮಾತು ಹೇಳಿದ್ದಾರೆ. ಬುಧವಾರ ರಾತ್ರಿ 8 ಗಂಟೆವರೆಗೂ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವರುಗಳು ಹಾಗೂ ರಾಜ್ಯ ಖಾತೆ ಸಚಿವರುಗಳ ಬಳಿ ಮಾತನಾಡಿರುವ ಪ್ರಧಾನಿ ಮೋದಿ, "ಕೊರೋನಾ ಎರಡನೇ ಅಲೆಯಿಂದ ಇಡೀ ದೇಶ ತತ್ತರಿಸಿದೆ. ಹೀಗಾಗಿ ಮೂರನೇ ಅಲೆ ದೇಶವನ್ನು ಪ್ರವೇಶಿಸದಂತೆ ತಡೆಯಬೇಕಿದೆ. ದೇಶದ ಜನರಿಗೆ ಲಸಿಕೆ ನೀಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ, ಕೋವಿಡ್ ಮಾರ್ಗಸೂಚಿಯನ್ನು ತಪ್ಪದೆ ಎಲ್ಲರೂ ಪಾಲಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕು" ಎಂದು ಮೋದಿ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸುಮಾರು 40 ನಿಮಿಷಗಳ ಕಾಲ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆಯೇ ಮಾತನಾಡಿರುವ ಪ್ರಧಾನಿ ಮೋದಿ, "ಮೂರನೇ ಅಲೆ ಇಲ್ಲದ ವಾತಾವರಣವನ್ನು ಸೃಷ್ಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಕೋವಿಡ್ ಎರಡನೇ ಅಲೆ ಇನ್ನೂ ಮುಗಿದಿಲ್ಲವಾದ್ದರಿಂದ ಪ್ರೋಟೋಕಾಲ್ ಅನ್ನು ಗಂಭೀರವಾಗಿ ಅನುಸರಿಸಬೇಕು. ಸ್ವತಃ ಸಚಿವರುಗಳು ಸಾರ್ವಜನಿಕವಾಗಿ ಹೊರಗೆ ಹೋಗುವಾಗಲೂ ಸಹ ಮಾಸ್ಕ್ ಹಾಕಿದ್ದೀರಾ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಕೋವಿಡ್ನ ಮೊದಲ ಮತ್ತು ಎರಡನೇಯ ಅಲೆಯನ್ನು ಜಯಿಸುವುದು ಭಾರತಕ್ಕೆ ಭಾರಿ ಸವಾಲಾಗಿದೆ. ಆದ್ದರಿಂದ ಜನ ಈಗಲೂ ಕೋವಿಡ್ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಮುಖವಾಡ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಬಲವಾಗಿ ಅನುಷ್ಠಾನಕ್ಕೆ ತರಬೇಕು. ವ್ಯಾಕ್ಸಿನೇಷನ್ ಡ್ರೈವ್ ತ್ವರಿತಗತಿಯಲ್ಲಿ ನಡೆಯುತ್ತಿದೆ ಆದರೆ ಈ ವರ್ಷದ ಅಂತ್ಯದ ವೇಳೆಗೆ ಭಾರತವು ತನ್ನ ಸಂಪೂರ್ಣ ವಯಸ್ಕ ಜನಸಂಖ್ಯೆಗೂ ಚುಚ್ಚುಮದ್ದು ನೀಡಬೇಕಿದೆ. ಮುಂದಿನ ದಿನಗಳು ಅಥವಾ ಕೆಲ ವಾರಗಳಲ್ಲಿ ಲಸಿಕೆ ನೀಡುವ ವೇಗ ಮತ್ತಷ್ಟು ಹೆಚ್ಚಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇನ್ನೂ ಲಸಿಕೆ ಅಭಿಯಾನದಲ್ಲಿ ವಿಜ್ಞಾನಿಗಳ ಪಾತ್ರವನ್ನು ಮೆಚ್ಚಿರುವ ಮೋದಿ, "ದೇಶದಲ್ಲಿ ಕೊರೋನಾ ಸೋಂಕನ್ನು ಹತೋಟಿಗೆ ತರುವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವವಾದದ್ದು. ಸೋಂಕನ್ನು ತಡೆಗಟ್ಟಲು ಲಸಿಕೆ ನಿರ್ಣಾಯಕವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ವಿಜ್ಞಾನಿಗಳು ಅತ್ಯುತ್ತಮ ವಿಶ್ವದರ್ಜೆಯ ಲಸಿಕೆಯನ್ನು ಸಂಶೋಧನೆ ಮಾಡಿದ್ದಾರೆ. ಈ ಲಸಿಕೆಗೆ ವಿದೇಶದಲ್ಲೂ ಸಾಕಷ್ಟು ಬೇಡಿಕೆ ಇರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ" ಎಂದಿದ್ದಾರೆ.
ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ಮಾರ್ಗಸೂಚಿ ಸಿದ್ಧಮಾಡಲು ಸುಪ್ರೀಂಕೋರ್ಟ್ ಆದೇಶ
ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸುವುದರ ಹೊರತಾಗಿ, ಕಳೆದ ಏಳು ವರ್ಷಗಳಲ್ಲಿ ತಮ್ಮ ಸರ್ಕಾರವು ಘೋಷಿಸಿರುವ ಯೋಜನೆಗಳು ಮತ್ತು ಮಾಡಿದ ಪ್ರಗತಿಯನ್ನು ಸಹ ಅವರು ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಪರಿಶೀಲಿಸಿದರು. ಸಭೆಯಲ್ಲಿ ರಸ್ತೆ, ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳ ಪ್ರಸ್ತುತಿಯನ್ನು ತಿಳಿಹೇಳಿದರು. ಅಲ್ಲದೆ, ಕಳೆದ ಏಳು ವರ್ಷಗಳಲ್ಲಿ ಘೋಷಿಸಲಾದ ಎಲ್ಲಾ ಯೋಜನೆಗಳಿಗೆ ಸಚಿವರು ಸೇರಿದಂತೆ ಮಿಷನ್ ಮೋಡ್ನಲ್ಲಿ ಸರ್ಕಾರ ಕೆಲಸ ಮಾಡಬೇಕಾಗಿದೆ.
ಇದನ್ನೂ ಓದಿ: ಕಷ್ಟದಲ್ಲಿರುವವರಿಗಾಗಿ ನದಿಯಲ್ಲಿ18 ಕಿ.ಮೀ ದೋಣಿ ನಡೆಸುವ ಗಟ್ಟಿಗಿತ್ತಿಗೆ ನಮ್ಮದೊಂದು ಸಲಾಂ
"ಕೇವಲ ಯೋಜನೆಗಳನ್ನು ಘೋಷಿಸುವುದರೊಂದಿಗೆ ಸಚಿವರ ಜವಾಬ್ದಾರಿಗಳು ಕೊನೆಗೊಳ್ಳುವುದಿಲ್ಲ. ನಿಮ್ಮ ಅಧಿಕಾರಾವಧಿಯಲ್ಲಿ ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಂಡಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಕೆಲಸ" ಎಂದು ಪ್ರಧಾನಿ ಮೋದಿ ಎಲ್ಲಾ ಸಚಿವರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ