ನವದೆಹಲಿ(ಏ.04): ಇದೇ ಭಾನುವಾರ ಏಪ್ರಿಲ್ 5ನೇ ತಾರೀಕು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮೇಣದ ಬತ್ತಿ ಮತ್ತು ಹಣತೆ ಉರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಆದರೀಗ, ಪ್ರಧಾನಿ ಕರೆಯಂತೆ ಒಮ್ಮೆಲೇ ದೇಶಾದ್ಯಂತ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳು ಹಾಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಾಗಿ ತುಸು ಯಡವಟ್ಟಾದರೂ ಇಡೀ ದೇಶದ 10-16 ಗಂಟೆಗಳ ಕಾಲ ಕತ್ತಲಲ್ಲೇ ಕಳೆಯಬೇಕಾಗುತ್ತದೆ.
ಅತ್ತ ಒಂದೇ ಬಾರಿಗೆ ದೀಪಗಳನ್ನು ಆಫ್ ಮಾಡುವುದರಿಂದ ವಿದ್ಯುತ್ನಲ್ಲೇನಾದರೂ ವ್ಯತ್ಯಾಸ ಉಂಟಾಗಬಹುದು. ಏಕೆಂದರೇ, ಒಮ್ಮಲೇ ಇಡೀ ದೇಶ ಕರೆಂಟ್ ತೆಗೆದರೆ ವಿದ್ಯುತ್ ಪೂರೈಸುವ ಪವರ್ ಗ್ರಿಡ್ನ ಟ್ರಿಪ್ ಆಗುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಈಗ ದೇಶದ ವಿದ್ಯುತ್ ಸರಬರಾಜು ಸಂಸ್ಥೆಗಳ ಹೆದರಿಕೆ ಶುರುವಾಗಿದೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ವಿದ್ಯುತ್ ಪೂರೈಕೆ ಮಾಡುವ ಪವರ್ ಗ್ರಿಡ್ಗಳ ರಕ್ಷಣೆಗೆ ಮುಂದಾಗಿವೆ.
ಇತ್ತ, ಕೇಂದ್ರ ವಿದ್ಯುತ್ ಸಚಿವಾಲಯದ ವಕ್ತಾರರೊಬ್ಬರು, ಇಡೀ ದೇಶ ಒಂದೇ ಸಲ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳ ಕಾರ್ಯವೂ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗದಂತೆ ಕೇಂದ್ರ ಸರ್ಕಾರ ಮತ್ತು ವಿದ್ಯುತ್ ಸರಬರಾಜು ಸಂಸ್ಥೆಗಳು ಎಚ್ಚರಿಕೆವಹಿಸಿವೆ ಎಂದು ಹೇಳಿದ್ದಾರೆ.
ಈ ಬೆನ್ನಲ್ಲೇ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಅಸೋಸಿಯೇಟ್ ಡೈರೆಕ್ಟರ್ ಎಂ.ಕೆ ಮಾಥುರ್ ಮಾತ್ರ ದೇಶದ ಜನತೆಯಲ್ಲಿ ಕರೆಂಟ್ ತೆಗೆದ ಸಂದರ್ಭದಲ್ಲಿ 15 ನಿಮಿಷಗಳ ಕಾಲ ಫ್ಯಾನ್ ಆನ್ ಮಾಡುವಂತೆ ಸಂದೇಶ ರವಾನಿಸಿದ್ದಾರೆ.
ಇನ್ನು, ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪವರ್ ಕಾರ್ಪೊರೇಷನ್ ಲಿಮಿಟೆಡ್ಗಳು ತಮ್ಮ ಸಿಬ್ಬಂದಿಗೆ ಅಲರ್ಟ್ ಆಗಿರುವಂತೆ ಸೂಚಿಸಿವೆ. ರಾತ್ರಿ 9 ಗಂಟೆಗೆ ಒಮ್ಮೆಲೆ ಎಲ್ಲರೂ ಪವರ್ ಆಫ್ ಮಾಡಿದರೆ, ವಿದ್ಯುತ್ ಪೂರೈಕೆ ಸ್ತಬ್ಧಗೊಳ್ಳಲಿದೆ. ಇದರಿಂದಾಗಿ ಪವರ್ ಗ್ರಿಡ್ನಲ್ಲಿ ಹೈವೋಲ್ಟೇಜ್ ಸೃಷ್ಟಿಯಾಗಿ ಟ್ರಿಪ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅಲರ್ಟ್ ಆಗಿರಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ‘ಜನಕ್ಕೆ ಬೇಕಾದ ದಿನನಿತ್ಯ ವಸ್ತುಗಳು ಸ್ಟಾಕ್ ಇದೆ; ಯಾರು ಭಯಪಡುವ ಅಗತ್ಯವಿಲ್ಲ‘ - ಸಿಎಂ ಯಡಿಯೂರಪ್ಪ
ಪ್ರಧಾನಿ ನರೇಂದ್ರ ಮೋದಿಯವರೇ ದಯವಿಟ್ಟು ಕರೆಂಟ್ ಆಫ್ ಮಾಡುವುದಕ್ಕೆ ಸೂಚಿಸಬೇಡಿ. ಒಂದು ವೇಳೆ ಪವರ್ ಗ್ರಿಡ್ ಟ್ರಿಪ್ ಆದರೆ, ಮತ್ತೆ ಅದನ್ನು ರಿಸ್ಟೋರ್ ಮಾಡಲು 16 ಗಂಟೆ ಬೇಕಾಗುತ್ತದೆ. ಹಾಗಾಗಿ ಕೇವಲ ದೀಪ ಹಚ್ಚಲು ತಿಳಿಸಿ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವತ್ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ಬಿಕ್ಕಟ್ಟನ್ನು "ತಪ್ಪಾಗಿ ನಿರ್ವಹಿಸುವುದು" ಮತ್ತು ಜನರನ್ನು ಹೀಗೆ ಹುಚ್ಚು ಟಾಸ್ಕ್ ನೀಡಿ ದಾರಿ ತಪ್ಪಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಕೇಂದ್ರ ಪ್ರತಿಪಕ್ಷಗಳು ಟೀಕಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ