news18-kannada Updated:May 17, 2020, 3:12 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಮೇ.17): ರಾಜ್ಯಾದ್ಯಂತ ಬಸ್ ಸಂಚಾರ ಆರಂಭಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಕಲ ಸಿದ್ದತೆ ಮಾಡಿಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಈಗಾಗಲೇ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ.
ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೋಗಲು ಮಾರ್ಕಿಂಗ್ ಮಾಡಿರುವ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ ಕೌಂಟರ್ ನಿಂದ ಬಸ್ ಸ್ಟಾಪ್ ವರೆಗೆ ಪ್ರಯಾಣಿಕರು ಸಾಮಾಜಿಕ ಅಂತರದಲ್ಲೆ ಸಾಗಬೇಕಿದೆ. ಪ್ರತಿಯೊಬ್ಬ ಪ್ರಯಾಣಿಕರು ಕನಿಷ್ಟ 5 ಅಡಿ ಅಂತರವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.
ಇಂದು ಲಾಕ್ ಡೌನ್ 3.0 ಮುಕ್ತಾಯಗೊಳ್ಳಲಿದ್ದು, ನಾಳೆಯಿಂದ ಲಾಕ್ ಡೌನ್ 4.0 ಕೆಲವು ಹೊಸ ಷರತ್ತುಗಳೊಂದಿಗೆ ಜಾರಿಯಾಗಲಿದೆ. ಅದರಲ್ಲಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಗಳಿದ್ದು ಅದಕ್ಕಾಗಿ ಕೆಎಸ್ಆರ್ಟಿಸಿ ಅಧಿಕಾರಿಗಳು ಪೂರ್ವ ಸಿದ್ದತೆಗಳನ್ನ ಕೈಗೊಂಡಿದ್ದಾರೆ. ಈಗಾಗಲೇ ಕೆಎಸ್ಆರ್ಟಿಸಿ
ಚಾಲಕ ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಮಾರ್ಕಿಂಗ್ ಮಾಡುತ್ತಿರುವ ಸಿಬ್ಬಂದಿಗಳು
ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಿ ಹೆಲ್ತ್ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಹಾಗೂ ಬಸ್ ಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು, ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು, ಸ್ಯಾನಿಟೈಸರ್ ಹಾಗೂ ಮುಖ್ಯವಾಗಿ ಬಸ್ ನಲ್ಲಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡುವ ಬಗ್ಗೆ ತರಬೇತಿ ನೀಡಿ ಸನ್ನದ್ದಗೊಳಿಸಲಾಗಿದೆ.
ಪ್ರತಿನಿತ್ಯ ಸಾವಿರಾರು ಜನರು ಕೆಎಸ್ಆರ್ಟಿಸಿ ಬಸ್ ನಲ್ಲಿ ರಾಜ್ಯಾದ್ಯಂತ ಪ್ರಯಾಣ ಮಾಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುಲು ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ :
ಸೀಲ್ ಡೌನ್ ಏರಿಯಾದಲ್ಲಿ ಕಟ್ಟಿಂಗ್ನದ್ದೇ ಸಮಸ್ಯೆ ; ಆಗ ಹುಡುಗರು ಏನು ಮಾಡಿದ್ರು ಗೊತ್ತಾ?ರಾಜ್ಯದಲ್ಲಿ ಬಸ್ ಸಂಚಾರ ಆರಂಭಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಕೆಎಸ್ಆರ್ಟಿಸಿ ಬಸ್ ಗಳು ರಸ್ತೆಗೆ ಇಳಿಯಲು ಸಿದ್ದವಾಗಿವೆ. ಆದರಿಂದ ಇಂದಿನಿಂದಲೇ ಪೂರ್ವ ತಯಾರಿ ಕೈಗೊಂಡಿರುವ ಅಧಿಕಾರಿಗಳು ಸರ್ಕಾರದ ಆಧಿಕೃತ ಆದೇಶ ಹೊರ ಬೀಳುತ್ತಿದ್ದಂತೆ ಬಸ್ ಗಳನ್ನ ರಸ್ತೆಗೆ ಇಳಿಸಲು ಮುಂದಾಗಿದ್ದಾರೆ.
First published:
May 17, 2020, 2:22 PM IST