ನವದೆಹಲಿ (ಏ. 29): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಗೋಚರಿಸುತ್ತಿವೆ. ಈ ನಡುವೆ 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರಿಗೂ ಕರೋನಾ ಲಸಿಕೆ ಹಾಕುವ ಮೂರನೇ ಹಂತದ ಆರಂಭಕ್ಕೆ (ಮೇ 1ರಿಂದ) ಕ್ಷಣಗಣನೆ ಶುರುವಾಗಿದೆ. ಆದರೆ ಪ್ರತಿ ದಿನ ಸುಮಾರು 25 ಸಾವಿರ ಜನರು ಸೋಂಕು ಪೀಡಿತರಾಗುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಲಸಿಕೆಗಳು ಮುಗಿದು ಹೋಗಿವೆ ಎಂದು ಸ್ವತಃ ಅಲ್ಲಿನ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಆಶ್ಚರ್ಯ ಆದರೂ ಸತ್ಯ. 'ದೆಹಲಿಯಲ್ಲಿ ಕೊರೋನಾ ಲಸಿಕೆ ಇಲ್ಲ' ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಈಗಾಗಲೇ ರಾಜಸ್ಥಾನ, ಛತ್ತೀಸ್ಘಡ, ಪಂಜಾಬ್ ಮತ್ತು ಜಾರ್ಖಂಡ್ ಸರ್ಕಾರಗಳು ತಮ್ಮ ಬಳಿ ಅಗತ್ಯಕ್ಕೆ ತಕ್ಕಷ್ಟು ಕೊರೋನಾ ಲಸಿಕೆಗಳು ಇಲ್ಲ. ಆದುದರಿಂದ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದವು. ಈಗ ಆ ಸಾಲಿಗೆ ದೆಹಲಿ ಸೇರ್ಪಡೆ ಆಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 'ಕೊಎಓನಾ ಲಸಿಕೆ ಇಲ್ಲ' ಎಂದು ಕೈ ಚೆಲ್ಲಿರುವುದು ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕಿರುವ ಹಿನ್ನಲೆಯಲ್ಲಿ ಲಸಿಕೆಗಳ ಅಗತ್ಯ, ಪೂರೈಕೆ, ವಿತರಣೆ, ನಿರ್ವಹಣೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್, 'ಅಗತ್ಯ ಇರುವಷ್ಟು ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಬಳಿಕವಷ್ಟೆ ತಾವು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯ' ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: West Bengal Elections 2021: ಹಲವು ಹಿಂಸಾಚಾರದ ಘಟನೆಗಳ ನಡುವೆಯೂ ಬಂಗಾಳದಲ್ಲಿ 1 ಗಂಟೆಯ ವೇಳೆಗೆ ಶೇ.56.19 ಮತದಾನ
'ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಬಳಿಕವಷ್ಟೆ ತಾವು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯ' ಎಂದು ಹೇಳುವ ಮೂಲಕ ಅರವಿಂದ ಕೇಜ್ರಿವಾಲ್ ಆಮ್ಲಜನಕದ ವಿಷಯದಲ್ಲಿ ಮಾಡಿದಂತೆ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸುವ ಪ್ರಯತ್ನ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ