ಸಿದ್ಧರಾಮಯ್ಯ ಸಲಹೆ ಕೊಡಬಹುದೇ ಹೊರತು ಆದೇಶ ಮಾಡುವಂತಿಲ್ಲ ; ಸಚಿವ ಆರ್.ಅಶೋಕ್ ಕಿಡಿ
ನಾವು ಯಾವಾಗ ಕೇಳಬೇಕು ಎಂದು ಗೊತ್ತಿದೆ. ಅವರು ಹೇಳಿದಾಗ ಕೇಳಬೇಕು ಅಂತೇನೂ ಇಲ್ಲ. ಕಾಂಗ್ರೆಸ್ ಈಗಾಗಲೇ ಮೂಲೆಗುಂಪು ಆಗಿದೆ. ಈ ಸಂದರ್ಭದಲ್ಲಿ ಹೇಗಾದರೂ ಬೆಳಕಿಗೆ ಬರೋಣ ಎಂದು ಪ್ರಯತ್ನ ಪಡುತ್ತಿದ್ದಾರೆ
ಬೆಂಗಳೂರು(ಜುಲೈ.24): ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಅನ್ನೋದು ನೆನಪಿರಲಿ. ಅವರು ಹೀಗೇ ಮಾಡಬೇಕು ಎಂದು ಆದೇಶ ಮಾಡುವಂತಿಲ್ಲ. ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು ಅಷ್ಟೇ. ನಾವು ಈಗಾಗಲೇ ಅವರಿಗೆ ಸುದ್ದಿಗೋಷ್ಟಿ ಮಾಡಿ ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಪ್ರತಿ ಉತ್ತರವೇ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರು ಹೆಚ್ಚು ಬೆಲೆಗೆ ವೆಂಟಿಲೇಟರ್ ಖರೀದಿ ಮಾಡಿದಾಗ ನೀವ್ಯಾಕೆ ಪ್ರಶ್ನಿಸಲಿಲ್ಲ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಯಾವಾಗ ಕೇಳಬೇಕು ಎಂದು ಗೊತ್ತಿದೆ. ಅವರು ಹೇಳಿದಾಗ ಕೇಳಬೇಕು ಅಂತೇನೂ ಇಲ್ಲ. ಕಾಂಗ್ರೆಸ್ ಈಗಾಗಲೇ ಮೂಲೆಗುಂಪು ಆಗಿದೆ. ಈ ಸಂದರ್ಭದಲ್ಲಿ ಹೇಗಾದರೂ ಬೆಳಕಿಗೆ ಬರೋಣ ಎಂದು ಪ್ರಯತ್ನ ಪಡುತ್ತಿದ್ದಾರೆ ಎಂದರು.
ಇವರಿಗೆ ಕೊರೋನಾ ವಾರಿಯರ್ಸ್ ಬಗ್ಗೆ ಗೌರವ ಇಲ್ಲ. ಕೊರೋನಾ ವಿರುದ್ದ ಹೋರಾಟ ಮಾಡುತ್ತಿರುವ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಒಬ್ಬೇ ಒಬ್ಬ ಕೊರೋನಾ ರೋಗಿಯ ಮನೆಗೆ ಇವರು ಹೋಗಿಲ್ಲ. ಇವರು ಹೇಳಿದ್ದಕ್ಕೆಲ್ಲಾ ತನಿಖೆ ಮಾಡಿಸಲು ಆಗಲ್ಲ. ತನಿಖೆಗೆ ಆಗ್ರಹ ಮಾಡುವುದೇ ಇವರಿಗೊಂದು ಚಟ ಆಗಿದೆ. ಯಾವುದನ್ನು ತನಿಖೆ ಮಾಡಿಸಬೇಕು, ಯಾವುದು ಮಾಡಿಸಬಾರದು ಎಂಬುದು ನಮಗೂ ಗೊತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಂಚ ಪಾಂಡವರು ಎಂಬ ವಿಚಾರದಲ್ಲಿ ಅವರು ಕೌರವರಾಗಲು ಕೂಡಾ ಯೋಗ್ಯರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಪಂಚ ಪಾಂಡವರು ಐವರು ಬಂದಿದ್ದೇವೆ. ಅವರು ಸುದ್ದಿಗೋಷ್ಠಿಗೆ ಇಬ್ಬರೇ ಇಬ್ಬರು ಬಂದಿದ್ದಾರೆ. ಕೌರವರು ಅಷ್ಟು ಜನ ಇದ್ದರೂ ಯಾವಗಲೂ ಇಬ್ಬರೇ ಬರುತ್ತಾರೆ. ಅವರು ಇಬ್ಬರು ಯಾರು ಅಂತಾ ಎಲ್ಲರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯಗೆ ಸಚಿವರು ತಿರುಗೇಟು ನೀಡಿದರು.
ದಕ್ಷಿಣ ವಲಯದಲ್ಲಿ ಚಿಕ್ಕಪೇಟೆ, ಕಲಾಸಿಪಾಳ್ಯಗಳಿಂದ ಹೆಚ್ಚು ಸೋಂಕು ಕಂಡು ಬರುತ್ತಿದೆ. ಚಿಕ್ಕಪೇಟೆಯಿಂದ ಹೆಚ್ಚು ಸಾವು ದಾಖಲಾಗಿದೆ. ಈ ಎರಡೂ ಮಾರುಕಟ್ಟೆ ಗಳನ್ನು ತೆರೆಯಲು ಅವಕಾಶ ಕೊಡಲ್ಲ. ಕಂಟೈನ್ಮೆಂಟ್ ವಲಯಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಪ್ರತೀ ಮನೆಗೂ ಬಿಬಿಎಂಪಿಗೆ ಕೊರೋನಾ ಕಿಟ್ ವಿತರಣೆ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದರು.
ದಕ್ಷಿಣ ವಲಯದಲ್ಲಿ ಖಾಸಗಿ ಆಸ್ಪತ್ರೆಗಳು ಪೂರ್ತಿ ಬೆಡ್ ಗಳನ್ನು ಕೊರೋನಾ ರೋಗಿಗಳಿಗೇ ಕೊಟ್ಟರೆ, ಆ ಆಸ್ಪತ್ರೆಗಳಿಗೆ ವಾರ್ಷಿಕ ತೆರಿಗೆ ವಿನಾಯ್ತಿ ಕೊಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇನೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ