ಬೆಂಗಳೂರು (ಮಾರ್ಚ್ 03); ರಾಜ್ಯದ ಓರ್ವ ಟೆಕ್ಕಿಯಲ್ಲಿ ಕೊರೊನಾ ಸೋಂಕು ಇರುವ ಕುರಿತ ವರದಿ ಸಾಬೀತಾಗುತ್ತಿದ್ದಂತೆ ಆರೋಗ್ಯ ಸಚಿವ ಶ್ರಿರಾಮುಲು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಅಲ್ಲದೆ, ಕೊರೊನಾ ಪತ್ತೆಗಾಗಿ 2 ವಿಶೇಷ ಲ್ಯಾಬ್ ಹಾಗೂ ಎಲ್ಲಾ ಸರ್ಕಾರಿ ಮತ್ತು 1690 ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆಗಿನ ಭೇಟಿಯ ನಂತರ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿರುವ ಆರೋಗ್ಯ ಸಚಿವ ಬಿ ಶ್ರೀ ರಾಮುಲು, ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಕುರಿತು ಮುಂಜಾಗ್ರತಾ ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಶ್ರೀರಾಮುಲು, "ದೇಶದಾದ್ಯಂತ ಈ ವರೆಗೆ ತೆಲಂಗಾಣ ದೆಹಲಿ ಮತ್ತು ಕೇರಳದಲ್ಲಿ 6 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಓರ್ವ ಕೊರೊನಾ ಪೀಡಿತ ಟೆಕ್ಕಿ ಬೆಂಗಳೂರಿಗೆ ಬಂದು ಹೋದ ಕುರಿತು ಮಾಹಿತಿ ಇದೆ. ಹೀಗಾಗಿ ಈ ಮಾರಣಾಂತಿಕ ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯಲು ಯುದ್ದೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಾವು 24 ಗಂಟೆ ಕೆಲಸ ಮಾಡಲು ಸಿದ್ದವಿದ್ದೇವೆ. ಕೊರೊನಾ ಪತ್ತೆಗಾಗಿ 2 ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಅಲ್ಲದೆ, ಚಿಕಿತ್ಸೆಗೆಂದು ಎಲ್ಲಾ ಸರ್ಕಾರಿ ಮತ್ತು 1690 ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ಕೊರೊನಾ ಪೀಡಿತರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲೂ ಸಹ ಸೂಚಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಕೊರೊನಾ ಕುರಿತು ಹೆದರುವ ಅಗತ್ಯವಿಲ್ಲ. ಅನಗತ್ಯ ವದಂತಿ ಮತ್ತು ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ, ಮಾಧ್ಯಮಗಳು ಜನರಲ್ಲಿ ಈ ಕುರಿತು ಅರಿವು ಮೂಡಿಸಿ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೂ ಕಾಲಿಟ್ಟ ಕೊರೊನ ವೈರಸ್?; ಮಗಳ ಮದುವೆ ಬದಿಗಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ತುರ್ತು ಸಭೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ