ಕೋಲ್ಕತ್ತಾ (ಮೇ 09); ದೇಶದಲ್ಲಿ ಮಿತಿ ಮೀರುತ್ತಿರುವ ಕೊರೋನಾ ವೈರಸ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಮ್ಲಜನಕ ಪೂರೈಕೆ ಸಂಭಾವ್ಯ ಬಿಕ್ಕಟ್ಟನ್ನು ಕಾಣುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಆಮ್ಲಜನಕ ಪೂರೈಕೆ ಮತ್ತು ಕೋವಿಡ್ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ಔಷಧಿ ಮತ್ತು ಸಲಕರಣೆಗಳ ಆಮದಿನ ಮೇಲೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು, ಬಂಗಾಳ ಮತ್ತು ಭಾರತದಾದ್ಯಂತ ಕೊರೋನಾ ವೈರಸ್-ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಔಷಧಿಗಳು ಮತ್ತು ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಮಮತಾ ಬ್ಯಾನರ್ಜಿ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆಮ್ಲಜನಕ ಸಾಂದ್ರಕಗಳು ಮತ್ತು ಸಿಲಿಂಡರ್ಗಳಿಂದ ಕ್ರಯೋಜೆನಿಕ್ ಶೇಖರಣಾ ಟ್ಯಾಂಕ್ಗಳು ಮತ್ತು ಕೋವಿಡ್ ಔಷಧಿಗಳವರೆಗೆ, ಸಂಸ್ಥೆಗಳು, ವ್ಯಕ್ತಿಗಳು ಮತ್ತು ಪರೋಪಕಾರಿ ಏಜೆನ್ಸಿಗಳು ನೆರವು ನೀಡಿವೆ ಮತ್ತು ಈಗಲೂ ನೀಡಲು ಮುಂದೆ ಬರುತ್ತಿವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಖಾಸಗಿ ನೆರವು ಪ್ರೋತ್ಸಾಹಿಸಲು” ಅಂತಹ ವಸ್ತುಗಳನ್ನು ಜಿಎಸ್ಟಿ ಮತ್ತು ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
"ಈ ವಸ್ತುಗಳಿಗೆ ಡ್ಯೂಟಿ ಟ್ಯಾಕ್ಸ್/ ಎಸ್ಜಿಎಸ್ಟಿ / ಸಿಜಿಎಸ್ಟಿ / ಐಜಿಎಸ್ಟಿಯಿಂದ ವಿನಾಯಿತಿ ನೀಡಬೇಕು ಎಂದು ಅನೇಕ ದಾನಿಗಳು ಮತ್ತು ಏಜೆನ್ಸಿಗಳು ರಾಜ್ಯ ಸರ್ಕಾರವನ್ನು ಸಂಪರ್ಕಿಸಿವೆ. ಈ ವಸ್ತುಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವಾದ್ದರಿಂದ ತೆರಿಗೆ, ಸುಂಕ ರದ್ದು ಮಾಡಲು ನಾನು ವಿನಂತಿಸುತ್ತೇನೆ" ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಕಷ್ಟು ನೆರವಿನ ಸಂಸ್ಥೆಗಳು, ಜನಪರ ಸಂಘಟನೆಗಳು, ಎನ್ಜಿಒಗಳು ಸರಬರಾಜು ನಿರ್ಬಂಧಗಳನ್ನು ತೆಗೆದುಹಾಕಲು ಸಹಾಯ ಮಾಡುವಂತೆ, ಜಿಎಸ್ಟಿ/ ಕಸ್ಟಮ್ಸ್ ಸುಂಕ ಮತ್ತು ಇತರ ತೆರಿಗೆಗಳಿಂದ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಕೇಂದ್ರ ಸರ್ಕಾರ ಈ ಬಿಕ್ಕಟ್ಟಿನ ಸಮಯದಲ್ಲಿ ಅದನ್ನು ಮಾಡಿದರೆ ಎಲ್ಲ ರಾಜ್ಯಗಳಿಗೂ ಅನುಕೂಲ ಆಗಲಿದೆ’ ಎಂದು ಮಮತಾ ಪತ್ರದಲ್ಲಿ ವಿವರಿಸಿದ್ದಾರೆ.
"ಈ ರೀತಿಯ ದೇಣಿಗೆಗಳು ವೈದ್ಯಕೀಯ ಸಂಪನ್ಮೂಲಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ದೊಡ್ಡ ಅಂತರವನ್ನು ಪೂರೈಸುವಲ್ಲಿ ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಹೆಚ್ಚು ಪೂರಕವಾಗುತ್ತವೆ" ಎಂದು ಬ್ಯಾನರ್ಜಿ ಒತ್ತಿ ಹೇಳಿದ್ದಾರೆ.
ಇದು ಪಶ್ಚಿಮ ಬಂಗಾಳದ ಕೋವಿಡ್ ಬಿಕ್ಕಟ್ಟಿನ ಕುರಿತು ಮಮತಾ ಬ್ಯಾನರ್ಜಿ ಪಿಎಂ ಮೋದಿಗೆ ಬರೆದ ಮೂರನೇ ಪತ್ರವಾಗಿದೆ. ಬುಧವಾರ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಆಮ್ಲಜನಕ ಪೂರೈಕೆ ಬಿಕ್ಕಟ್ಟನ್ನು ಎತ್ತಿ ಶುಕ್ರವಾರ ಪತ್ರ ಬರೆದಿದ್ದರು.
ಇದನ್ನೂ ಓದಿ: Karnataka Covid Death: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47,930 ಕೊರೊನಾ ಕೇಸ್, 490 ಜನ ಸಾವು!
ಆಮ್ಲಜನಕ ಬೇಡಿಕೆ ಈಗಾಗಲೇ ದಿನಕ್ಕೆ 470 ಮೆಟ್ರಿಕ್ ಟನ್ಗಳಿಗೆ ಏರಿದೆ ಮತ್ತು ಏಳರಿಂದ ಎಂಟು ದಿನಗಳಲ್ಲಿ ಇದು 550 ಮೆ.ಟನ್.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ