ಬೆಂಗಳೂರು: ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಪ್ರಕರಣ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಎಡೆ ಮಾಡಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿಗರ ವಿರುದ್ಧ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದರು. ಬಿಜೆಪಿ ನಾಯಕರೇ ಬೆಡ್ ಬ್ಲಾಕಿಂಗ್ ದಂಧೆಯ ಕಿಂಗ್ಪಿನ್ಗಳು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಿಸಿದರು. ಮೊನ್ನೆ ವಾರ್ ರೂಂನಲ್ಲಿ ದಂಧೆ ಬಯಲಿಗೆಳೆದೆವು ಎಂದ ಬಿಜೆಪಿ ಮುಖಂಡರದ್ದು ಕಪಟ ನಾಟಕ ಮಂಡಳಿ. ಸಂಸದ ತೇಜಸ್ವಿ ಸೂರ್ಯ ಕಪಟ ನಾಟಕ ಸೂತ್ರದಾರಿ ಎಂದು ದಿನೇಶ್ ಗುಂಡೂವಾರ್ ವಾಗ್ದಾಳಿ ನಡೆಸಿದರು.
ಬಿಜೆಪಿ ಸಂಸದ, ಶಾಸಕರು ನಾಟಕ ಮಾಡೋದು, ಪುಡಿರೌಡಿಗಳ ರೀತಿ ಅವರ ಬೆಂಬಲಿಗರು ವಿಡಿಯೋ ಮಾಡಿದ್ದಾರೆ. ವಾರ್ ರೂಂನಲ್ಲಿ ಇರೋರನ್ನು ಖಾಲಿ ಮಾಡಿಸಿ, ತಮ್ಮ ಬೆಂಬಲಿಗರನ್ನ ಅಲ್ಲಿ ತಂದು ಕೂರಿಸಬೇಕು ಎಂದು ಮಾಡಿದ ನಾಟಕವಷ್ಟೇ ಇದು. ಕೊರೋನಾ ಸಂಕಷ್ಟ ಸಮಯದಲ್ಲಿ ಈ ನಾಟಕ ಆಡಲು ಸ್ಕ್ರಿಪ್ಟ್ ಮಾಡೋದಕ್ಕೆ ಸಮಯ ಹೇಗೆ ದೊರೆಯಿತು ಎಂದು ಗುಂಡೂರಾವ್ ವ್ಯಂಗ್ಯವಾಡಿದರು. ಇದು ಪ್ರಚಾರದ ಸಮಯವಲ್ಲ. ಕಪಟ ನಾಟಕಕಾರ ತೇಜಸ್ವಿ ಸೂರ್ಯ ಮತ್ತೆ ಅಲ್ಲಿಗೆ ಹೋಗಿ ವಿಡಿಯೋ ಮಾಡಬೇಡಿ ಎಂದು ಕೇಳಿಕೊಂಡು ಕ್ಷಮಾಪಣೆ ಕೇಳಿದ್ದಾರೆ. ತೇಜಸ್ವಿ ಸೂರ್ಯ ಸಂಸದರಾಗುವುದಕ್ಕೆ ನಾಲಯಕ್ ಎಂದು ಜರಿದರು.
ಇವರೆಲ್ಲರನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಬಿಜೆಪಿಯ ರೌಡಿ ಶಾಸಕರು ಹಾಗೂ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ. ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ. ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು. ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ಬಿಜೆಪಿ ನಾಯಕರು ಮಾಡಿದ ಕೆಲಸ ಪ್ರತಿಯೊಬ್ಬ ರಾಜಕಾರಣಿಗೂ ಅವಮಾನ ಎಂದು ಅಸಮಾಧಾನ ಹೊರ ಹಾಕಿದರು.
ಇನ್ನು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ಮಾತನಾಡಿ ಬಿಜೆಪಿ ಅವರು ಹಾಸಿಗೆ ಹೈಜಾಕ್ ಮಾಡಲು ಅಧಿಕಾರಿಗಳು ಬಿಡಲಿಲ್ಲ. ಯಾರಿಗೆ ಅವಶ್ಯಕತೆ ಇಲ್ವೋ ಅಂಥವರಿಗೆ ಬಿಜೆಪಿಯವರು ಐಸಿಯು ಬೆಡ್ ಕೊಟ್ಟಿದ್ದಾರೆ. ಇವರ ಒತ್ತಡಕ್ಕೆ ಮಣಿಯದ ಅಧಿಕಾರಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದೇ ಒತ್ತಡ ಬೆಂಗಳೂರು ದಕ್ಷಿಣದಲ್ಲೂ ನಡೆದಿದೆ. ಇಲ್ಲಿದ್ದ ಅಧಿಕಾರಿ ತುಳಸಿ ಸಹ ನೀವು ವಾರ್ ರೂಂಗೆ ಬರಬಾರದು, ಕೊಠಡಿಯಲ್ಲಿ ಬಂದು ಮಾತನಾಡಿ ಎಂದು ಸಂಸದರಿಗೂ ಹೇಳಿದ್ದಾರೆ. 17 ಜನರನ್ನ ಕಿತ್ತಾಕಿ ಇವರಿಗೆ ಬೇಕಾದವರನ್ನ ಸೇರಿಸುವುದು ಇವರ ಉದ್ದೇಶವಾಗಿತ್ತು. ಬಿಜೆಪಿ ಗೂಂಡಾಗಳನ್ನ ಸೇರಿಸುವ ಉದ್ದೇಶ ಇವರದ್ದಾಗಿತ್ತು. ಜನರನ್ನ ದಿಕ್ಕು ತಪ್ಪಿಸಲು ಒಂದು ಸಮುದಾಯದ ವಿರುದ್ಧ ಆರೋಪ ಮಾಡಿದ್ದಾರೆ. ಇದು ಬಿಜೆಪಿ ಬೆಡ್ ಸ್ಕ್ಯಾಮ್ ಎಂದು ಆರೋಪಿಸಿದರು.
ಅವಶ್ಯಕತೆ ಇರೋರಿಗೆ ಬೆಡ್ ಸಿಕ್ತಿಲ್ಲ. ಬಿಜೆಪಿ ಶಿಫಾರಸಿನಂತೆ ಬೆಡ್ ಹಂಚಿಕೆ ಆಗುತ್ತಿದೆ. ನಾನು ಸಹ ಅಧಿಕಾರಿಗಳಿಗೆ ಕರೆ ಮಾಡಿ ಮನೆ ಬಳಿ ಬಂದಿದ್ದಾರೆ ಎಂದು ಒಂದೋ ಎರಡೋ ಬೆಡ್ ಕೊಡಿಸಿದ್ದೇನೆ. ಆದರೆ ಬಿಜೆಪಿ ಅವರು ಶೇಕಡಾ 75 ರಷ್ಟು ಬೆಡ್ಗಳನ್ನು ತಾವು ಹೇಳಿದವರಿಗೆ ಕೊಡಬೇಕು. 25 ಬೆಡ್ ಮಾತ್ರ ಸಾರ್ವಜನಿಕರಿಗೆ ಕೊಡಬೇಕು ಎಂದು ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಇದಕ್ಕೆ ಅವಕಾಶ ಕೊಡಬಾರದು. ಬಿಜೆಪಿ ಗೂಂಡಾಗಳು ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ರು ಕೇಸ್ ಬುಕ್ ಆಗಿಲ್ಲ, ಎಫ್ಐಆರ್ ದಾಖಲಾಗಿಲ್ಲ. ಇದು ನಾಲಯಕ್ ಸರ್ಕಾರ ಎಂದು ಕೃಷ್ಣ ಭೈರೇಗೌಡ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ