ಕೊಚ್ಚಿನ್ (ಮೇ 18): ಕೋವಿಡ್ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿರುವ ರಾಜ್ಯ ಕೇರಳ. ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಕೊರೋನಾ ಸೋಂಕು ಕಂಡು ಬಂದಾಕ್ಷಣ ಬಿಗಿ ಕಟ್ಟೆಚ್ಚರಕ್ಕೆ ಅಲ್ಲಿನ ಸರ್ಕಾರ ಮುಂದಾಗಿತ್ತು. ಇದಾದ ಬಳಿಕವೂ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಕೇರಳ ಸರ್ಕಾರ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದರ ಸಂಪೂರ್ಣ ಕ್ರೆಡಿಟ್ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಾಜಾ ಅವರಿಗೆ ಸಿಕ್ಕಿತ್ತು. ಕೋವಿಡ್ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹೊಸ ಸರ್ಕಾರದ ನೂತನ ಸಂಪುಟ ಸೇರುವಲ್ಲಿ ವಿಫಲರಾಗಿದ್ದಾರೆ. ಎಲ್ಡಿಎಫ್ನ ಹೊಸ ಸರ್ಕಾರದಲ್ಲಿ ಸಿಪಿಎಂ ಮತ್ತು ಸಿಪಿಐನ ಹೊಸ ಮುಖಗಳಿಗೆ ಸ್ಥಾನ ನೀಡಲಾಗಿದ್ದು, ಸರ್ಕಾರದಲ್ಲಿ ಸಿಎಂ ಪಿಣರಾಯಿ ವಿಜಯನ್ ಮಾತ್ರ ಹಳೆಯ ಮುಖವಾಗಿರಲಿದೆ.
ನಿವೃತ್ತ ಶಿಕ್ಷಕಿಯಾಗಿರು ಶೈಲಜಾ ಅವರು ಸೋಂಕಿನ ಆರಂಭಿಕ ಹಂತದಲ್ಲಿ ಬಿಡುವಿಲ್ಲದ ಕೆಲ ಮಾಡಿ ಜನಪ್ರಿಯರಾಗಿದ್ದರು. ಈ ಹಿಂದೆ ನಿಫಾ ವೈರಸ್ ನಿಯಂತ್ರಿಸುವಲ್ಲಿ ಕೂಡ ಇವರ ಕಾರ್ಯ ಮಹತ್ವದ್ದಾಗಿದೆ. 2018 ಮತ್ತು 19ರಲ್ಲಿ ಕೇರಳದಲ್ಲಿ ಕಂಡು ಬಂದ ನಿಫಾ ಕೂಡ ಇದೇ ರೀತಿ ಸಾಂಕ್ರಾಮಿಕ ರೋಗವಾಗಿದ್ದು, ಜೀವಕ್ಕೆ ಕುತ್ತು ತರುತ್ತಿತ್ತು. ಇದರ ನಿವಾರಣೆಗೂ ಇದ್ದ ಮಾರ್ಗ ಎಂದರೆ, ಸೋಂಕಿತರ ಪತ್ತೆ ಹಚ್ಚುವುದು, ಪ್ರತ್ಯೇಕಿಸುವುದಾಗಿತ್ತು. ಇಂತಹ ಕ್ರಮವನ್ನು ತ್ವರಿತವಾಗಿ ಕೈಗೊಂಡು ಸೋಂಕನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಒಳಗಾಗಿದ್ದರು ಶೈಲಜಾ.
ಕೊರೋನಾ ಸೋಂಕಿನಲ್ಲೂ ಸೋಂಕಿತರ ಪತ್ತೆ, ಪ್ರತ್ಯೇಕಿಸುವುದರ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತಂದಿದ್ದರು. ಕೋವಿಡ್ ಬಿಕ್ಕಟ್ಟಿನ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಶೈಲಜಾ ಅವರನ್ನು ಸಂಪುಟದಿಂದ ದೂರ ಇಟ್ಟಿರುವ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಡಿಎಫ್ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಶೈಲಜಾ ಪಾತ್ರ ದೊಡ್ಡದಾಗಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಸಂಪುಟದಿಂದ ದೂರ ಇಟ್ಟಿರುವ ಕ್ರಮ ಸರಿಯಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐಎಂ ಪಕ್ಷ, ಹೊಸ ಸರ್ಕಾರದಲ್ಲಿ ಹೊಸ ತಂಡವನ್ನು ಹೊಂದುವುದು ತಮ್ಮ ಪಕ್ಷ ನೀತಿಯಾಗಿದೆ. ಇದರಲ್ಲಿ ವಿಜಯನ್ ಅವರಿಗೆ ಮಾತ್ರ ನಿಯಮ ಸಡಿಲ ಗೊಳಿಸಿದೆ ಎಂದು ತಿಳಿಸಿದೆ.
ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವಿಭಾಗದಲ್ಲೂ ಎಲ್ಡಿಎಫ್ ಅಪಾರ ಬೆಂಬಲವನ್ನು ಪಡೆದಿತ್ತು. ಎಲ್ಲಾ ವಿಭಾಗಗಳಿಗೂ ಪ್ರಾತಿನಿಧ್ಯ ನೀಡುವಂತೆ ಸರ್ಕಾರವನ್ನು ರಚಿಸಲು ನಾವು ಬಯಸುತ್ತೇವೆ ಎಂದು ಪಕ್ಷದ ಕಾರ್ಯದರ್ಶಿ ವಿಜಯ ರಾಘವನ್ ತಿಳಿಸಿದ್ದಾರೆ.
ಎಲ್ಡಿಎಫ್ನಲ್ಲಿ ಅತಿದೊಡ್ಡ ಸಮ್ಮಿಶ್ರ ಪಕ್ಷ ಸಿಪಿಐ(ಎಂ) ಆಗಿದೆ. ಸಿಪಿಐ (ಎಂ)ನ 12 ಸದಸ್ಯರು ಸಂಪುಟ ಸೇರಲಿದ್ದಾರೆ. ಇದರ ಜೊತೆಗೆ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಸಿಪಿಐನ 4 ಮಂದುಮ ಕೇರಳ ಕಾಂಗ್ರೆಸ್ (ಎಂ), ಜನತಾದಳ (ಎಸ್) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ತಲಾ ಒಬ್ಬ ಸದಸ್ಯರು ಸಂಪುಟ ಸೇರಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ