• ಹೋಂ
  • »
  • ನ್ಯೂಸ್
  • »
  • Corona
  • »
  • Karnataka Lockdown: ಕರ್ನಾಟಕದಲ್ಲಿ ಲಾಕ್​ಡೌನ್ ತೆರವಿಗೆ ಸಜ್ಜಾದ ಸರ್ಕಾರ; ಅನ್​ಲಾಕ್​ ಬಗ್ಗೆ ಇಂದೇ ನಿರ್ಧಾರ

Karnataka Lockdown: ಕರ್ನಾಟಕದಲ್ಲಿ ಲಾಕ್​ಡೌನ್ ತೆರವಿಗೆ ಸಜ್ಜಾದ ಸರ್ಕಾರ; ಅನ್​ಲಾಕ್​ ಬಗ್ಗೆ ಇಂದೇ ನಿರ್ಧಾರ

ಸಿಎಂ  ಬಿಎಸ್ ಯಡಿಯೂರಪ್ಪ

ಸಿಎಂ ಬಿಎಸ್ ಯಡಿಯೂರಪ್ಪ

Karnataka Unlock Updates | ಕರ್ನಾಟಕದಲ್ಲಿ ಲಾಕ್​ಡೌನ್ ತೆರವುಗೊಳಿಸುವ ಬಗ್ಗೆ ಇಂದು ಕೊರೋನಾ ಟಾಸ್ಕ್​ಫೋರ್ಸ್​ ಸಭೆ ನಡೆಯಲಿದ್ದು, ಅನ್​ಲಾಕ್​ ಬಗ್ಗೆ ಇಂದೇ ನಿರ್ಧಾರವಾಗಲಿದೆ.

  • Share this:

ಬೆಂಗಳೂರು (ಜೂನ್ 7): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವುದರಿಂದ ಹಂತಹಂತವಾಗಿ ಲಾಕ್​ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ, ಕರ್ನಾಟಕದಲ್ಲೂ ಕೆಲವು ನಿಯಮಗಳನ್ನು ಅಳವಡಿಸಿ, ಅನ್​ಲಾಕ್​ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ನಿರ್ಧರಿಸಲು ಇಂದು ಕೊರೋನಾ ಟಾಸ್ಕ್​ಫೋರ್ಸ್​ ಸಭೆ ನಡೆಯಲಿದ್ದು, ಬಳಿಕ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ.


ಕರ್ನಾಟಕದಲ್ಲಿ ಜೂನ್ 14ರವರೆಗೂ ಲಾಕ್​ಡೌನ್ ಜಾರಿಯಲ್ಲಿದ್ದು, ಕಳೆದೊಂದು ವಾರದಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿತ್ತು. ಇಂದಿನಿಂದ ಆ ನಿಯಮಗಳನ್ನು ತೆರವುಗೊಳಿಸಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಅನ್​ಲಾಕ್ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ ಇಂದಿನಿಂದ ಸಬ್​ ರಿಜಿಸ್ಟ್ರಾರ್​ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಬಸ್​ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಕೈಗಾರಿಕೆ ಮೇಲಿನ ನಿಯಮವನ್ನು ಸಡಿಲಿಸಲಾಗಿದೆ. ಇದೇ ರೀತಿ ಹಂತ ಹಂತವಾಗಿ ಅನ್​ಲಾಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.


ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವುದರಿಂದ ಇಂದಿನಿಂದ ಅನ್​ಲಾಕ್​ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುತ್ತಿದೆ. ಒಂದೇ ಸಮಯದಲ್ಲಿ ಎಲ್ಲ ಲಾಕ್​ಡೌನ್ ನಿಯಮಗಳನ್ನೂ ಸಡಿಲಗೊಳಿಸಿದರೆ ಮತ್ತೆ ಕೊರೋನಾ ಕೇಸುಗಳು ತಾರಕಕ್ಕೇರುವ ಅಪಾಯ ಇರುವುದರಿಂದ ಹಂತ ಹಂತವಾಗಿ ಅನ್​ಲಾಕ್ ಮಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ.


ಇದನ್ನೂ ಓದಿ: Karnataka Unlock Rules: ಕರ್ನಾಟಕದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭ, ಸಬ್ ರಿಜಿಸ್ಟ್ರಾರ್ ಆಫೀಸ್ ಓಪನ್; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ


ಇಂದು ಮಧ್ಯಾಹ್ನ 2.30ಕ್ಕೆ ವಿಧಾನಸೌಧದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್​ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಟಾಸ್ಕ್ ಫೋರ್ಸ್ ಅಧ್ಯಕ್ಷ ಡಿಸಿಎಂ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್ ಲಾಕ್ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಕೊರೋನಾ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣದಿಂದ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು.


ಒಂದುವೇಳೆ ಕರ್ನಾಟಕದಲ್ಲಿ ಅನ್​ಲಾಕ್​ ನಿಯಮ ಜಾರಿಗೊಳಿಸಿದರೆ ಯಾವುದಕ್ಕೆ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಇಂದಿನಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಚರ್ಚೆ ನಂತರ ಸಭೆಯ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು, ಅಧಿಕಾರಿಗಳ ಸಲಹೆಗಳನ್ನು ಪರಿಗಣಿಸಿ ಅಂತಿಮವಾಗಿ ಸಿಎಂ ಯಡಿಯೂರಪ್ಪ ಅನ್​ಲಾಕ್​ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.


ಇಂದಿನಿಂದ ಕೈಗಾರಿಕೆಗಳಿಗೆ ಲಾಕ್​ಡೌನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಸಬ್​ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಈ ಮೂಲಕ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಕರ್ನಾಟಕದಲ್ಲಿ ಮತ್ತೆ ಚುರುಕು ಪಡೆದಿವೆ. ರಾಜ್ಯದಲ್ಲಿ ಅನ್ ಲಾಕ್ ಜಾರಿ ಬಗ್ಗೆ ಇಂದು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಲಿದ್ದಾರೆ. ಹಂತ ಹಂತವಾಗಿ ಅನ್ ಲಾಕ್​ಗೆ ಮುಂದಾದ ಕರ್ನಾಟಕ ಸರ್ಕಾರ ಆರ್ಥಿಕ ಚಟುವಟಿಕೆಗಳತ್ತ ಚಿತ್ತ ನೆಟ್ಟಿದೆ. ಹೀಗಾಗಿ, ಇಂದಿನಿಂದ ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಆಗಲಿದೆ. ಕೋವಿಡ್ ನಿಯಮಾನುಸಾರ ಕಾರ್ಯ ಚಟುವಟಿಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.


ಇದನ್ನೂ ಓದಿ: Petrol Price in Karnataka: ಕರ್ನಾಟಕದ ಚಿಕ್ಕಮಗಳೂರು, ಶಿರಸಿ, ಬಳ್ಳಾರಿಯಲ್ಲಿ 100 ರೂ. ದಾಟಿದ ಪೆಟ್ರೋಲ್ ಬೆಲೆ!


ಶಿವಮೊಗ್ಗ, ಮೈಸೂರು, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಕಠಿಣ ಲಾಕ್​ಡೌನ್ ನಿಯಮಗಳನ್ನು ಕೊಂಚ ಸಡಿಲಗೊಳಿಸಲಾಗಿದೆ. ಜೂನ್ 14ರವರೆಗೆ ಸಂಜೆಯವರೆಗೂ ಹೋಟೆಲ್, ರೆಸ್ಟೋರೆಂಟ್​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಪಾರ್ಸಲ್​ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬಾರ್​ಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್​ಗಳು, ಧಾರ್ಮಿಕ ಕೇಂದ್ರಗಳು, ಶಾಲಾ-ಕಾಲೇಜುಗಳು, ಜಾತ್ರೆಗಳು, ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ.


ಕರ್ನಾಟಕದಲ್ಲಿ ನಿನ್ನೆ ಮತ್ತೆ ಕೊರೋನಾ ಕೇಸುಗಳು ಇಳಿಕೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ನಿನ್ನೆ ಕೊರೋನಾ ಪಾಸಿಟಿವಿಟಿ ರೇಟ್ ಶೇ. 7.71 ದಾಖಲಾಗಿದೆ. ಕರ್ನಾಟಕದಲ್ಲಿ ನಿನ್ನೆ 12,209 ಕೊರೊನಾ ಕೇಸ್ ಪತ್ತೆಯಾಗಿವೆ. ಭಾನುವಾರ ಒಂದೇ ದಿನ 320 ಜನ ಕೊರೋನಾಗೆ ಬಲಿಯಾಗಿದ್ದಾರೆ. 25,659 ಮಂದಿ ನಿನ್ನೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 2,944 ಕೊರೋನಾ ಕೇಸ್ ಪತ್ತೆಯಾಗಿದೆ. 187 ಮಂದಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು, 10,224 ಜನರು ಡಿಸ್ಚಾರ್ಜ್ ಆಗಿದ್ದಾರೆ.

top videos
    First published: