ಬೆಂಗಳೂರು(ಮಾ. 24): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಈ ವಾರ ದಿಢೀರ್ ಹೆಚ್ಚಳವಾಗಿದೆ. ಕೊರೋನಾ ಸೋಂಕು ಹರಡುವುದು ಮೂರನೇ ಹಂತಕ್ಕೆ ಈಗಾಗಲೇ ಕಾಲಿಟ್ಟಿರಬಹುದು ಎಂದು ಅನೇಕರು ಸಂಶಯಿಸಿದ್ದಾರೆ. ಆದರೆ, ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾದಿಕಾರಿ ಡಾ. ಬಿ.ಜಿ. ಪ್ರಕಾಶ್ ಕುಮಾರ್ ಕೆಲ ಕುತೂಹಲಕಾರಿ ಮಾಹಿತಿ ತೆರೆದಿಟ್ಟಿದ್ದಾರೆ. ಅವರ ಪ್ರಕಾರ, ಈ ವಾರ ವಿದೇಶಗಳಿಂದ ಭಾರತಕ್ಕೆ ವಾಪಸ್ ಬಂದಿರುವ ಅನೇಕ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ, ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ಧಾರೆ.
ಮಾರ್ಚ್ 13ರಿಂದೀಚೆ ಕೊರೋನಾ ಪೀಡಿತ ಐದು ವಿದೇಶಗಳಿಂದ 4,028 ಭಾರತೀಯರು ವಾಪಸ್ಸಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕೊರೋನಾ ಸೋಂಕಿತರೇ ಆಗಿದ್ದಾರೆ. ಇಟಲಿ, ಚೀನಾ, ಜರ್ಮನಿ, ಜಪಾನ್ ಮತ್ತು ದುಬೈನಿಂದ ಬಂದಿರುವ ಭಾರತೀಯರಲ್ಲೇ ಹೆಚ್ಚಾಗಿ ಕೊರೋನಾ ಸೋಂಕಿದೆ. ಸಿಂಗಾಪುರ್ ಮೂಲಕ ಬಂದವರಿಗೆ ಕೊರೋನಾ ಸೋಂಕು ಇರುವುದು ಕಡಿಮೆ ಇದೆ ಎಂದು ಆರೋಗ್ಯ ಇಲಾಖೆ ಸಹ ನಿರ್ದೇಶಕ ಡಾ. ಪ್ರಕಾಶ್ ಹೇಳಿದ್ಧಾರೆ.
ಇದನ್ನೂ ಓದಿ: ಸಿಡುಬು, ಪೋಲಿಯೋದಂಥ ಪಿಡುಗನ್ನೇ ಹತ್ತಿಕ್ಕಿದ ಭಾರತ ಕೊರೋನಾ ಎದುರಿಸಲು ಸಮರ್ಥ: ವಿಶ್ವ ಆರೋಗ್ಯ ಸಂಸ್ಥೆ
ದುಬೈ ಮೂಲಕ ಬಂದವರಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದು ಕಂಡುಬಂದಿದೆ. ಅಮೆರಿಕ, ಲಂಡನ್, ಇಟಲಿ, ಜರ್ಮನಿಯಲ್ಲಿದ್ದ ಭಾರತೀಯರು ದುಬೈ ಮೂಲಕ ಭಾರತಕ್ಕೆ ಬಂದಿದ್ದರೆ ಅವರಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ದುಬೈ ವಿಮಾನ ನಿಲ್ದಾಣದಲ್ಲಿ 6-7 ಗಂಟೆ ಕಾಯುವುದರಿಂದ ಸೋಂಕು ಹರಡುತ್ತಿದೆ. ಹೀಗಾಗಿ, ದುಬೈ ಮೂಲಕ ಯಾರಾದರೂ ಭಾರತಕ್ಕೆ ಬಂದಿದ್ದರೆ 104 ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹಿರಿಯ ವೈದ್ಯಾಧಿಕಾರಿಗಳು ಕರೆ ನೀಡಿದ್ದಾರೆ.
ಡಾ. ಪ್ರಕಾಶ್ ಅವರ ಮಾಹಿತಿ ಕೇಳಿದಾಗ, ದುಬೈ ವಿಮಾನ ನಿಲ್ದಾಣವೇ ಕೊರೋನಾ ಸೋಂಕಿಗೆ ಮೂಲ ಸ್ಥಾನವಾಗಿ ರೂಪುಗೊಂಡಿದೆಯಾ ಎಂಬ ದಟ್ಟ ಅನುಮಾನ ಮೂಡುತ್ತಿದೆ.
ಕರ್ನಾಟಕ ಸರ್ಕಾರದ ಸೂಚನೆಯಂತೆ ಕೊರೋನಾ ಸೋಂಕಿತರನ್ನು ಪತ್ತೆ ಮಾಡಲು ಹಲವು ತಂಡಗಳನ್ನು ರಚಿಸಲಾಗಿದೆ. ವಿದೇಶಗಳಿಂದ ಬಂದವರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದವರು ಹೀಗೆ ದೊಡ್ಡ ಪಟ್ಟಿ ಮಾಡಿ ಎಲ್ಲರನ್ನೂ ಭೇಟಿ ನೀಡಲಾಗುತ್ತಿದೆ. ಅವರೆಲ್ಲರನ್ನೂ ಎ. ಬಿ. ಸಿ ಕೆಟಗರಿಯಂತೆ ವಿಂಗಡಿಸಿ ಕ್ವಾರಂಟೈನ್, ಐಸೋಲೇಶನ್ ಇತ್ಯಾದಿ ಕ್ರಮಗಳಿಗೆ ಸೂಚಿಸಲಾಗುತ್ತಿದೆ. ಇತ್ತೀಚೆಗೆ 500ಕ್ಕೂ ಹೆಚ್ಚು ತಂಡಗಳು ಬೆಂಗಳೂರಿನಾದ್ಯಂತ ವಿವಿಧ ಸ್ಥಳಗಳಿಗೆ ತೆರಳಿ ಕೊರೋನಾ ಶಂಕಿತರನ್ನು ಭೇಟಿ ಮಾಡಿ ತಪಾಸಿಸಿದ್ಧಾರೆ. ಕ್ವಾರಂಟೈನ್ಗೆ ಒಳಪಟ್ಟ ಜನರಿಗೆ ಅವರಿರುವ ಅಪಾರ್ಟ್ಮೆಂಟ್ ಮಾಲೀಕರು, ಸಹನಿವಾಸಿಗಳಿಗೆ ನಿಗಾ ಇರಿಸುವ ಜವಾಬ್ದಾರಿ ಕೊಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಇದೆ; ಡಿಸಿಎಂ ಅಶ್ವತ್ಥ ನಾರಾಯಣ
ಇದೇ ವೇಳೆ, ವಿದೇಶಗಳಿಂದ ಬಂದವರು ಕೊರೋನಾ ಸೋಂಕು ಹರಡುವ ಭಯದಿಂದ ತಮ್ಮ ಮನೆಗಳಿಗೆ ವಾಪಸ್ ತೆರಳಲು ಭಯ ಬೀಳುತ್ತಿದ್ಧಾರೆ. ಅಂಥ ಹಲವರು ನಗರದಲ್ಲಿ ಹೋಟೆಲ್ ರೂಮುಗಳನ್ನ ಬುಕ್ ಮಾಡಿ ಅಲ್ಲಿಯೇ ನಿರ್ದಿಷ್ಟ ದಿನ ತಂಗುತ್ತಿದ್ಧಾರೆ. ಆದರೆ, ಕೊರೋನಾ ಸೋಂಕಿನ ಭಯದಿಂದ ಹೋಟೆಲ್ ಮಾಲೀಕರು ಆ ವ್ಯಕ್ತಿಗಳಿಗೆ ಖಾಲಿ ಮಾಡುವಂತೆ ಸೂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಹೋಟೆಲ್ ಮಾಲೀಕರಿಗೆ ಬುದ್ಧಿಹೇಳುವ ಕೆಲಸ ಮಾಡಿದೆ.
ಇಂಥ ಕೊರೋನಾ ಸೋಂಕಿತರು ಅಥವಾ ಶಂಕಿತರನ್ನು ಹೋಟೆಲ್ನಲ್ಲೇ ಇರಿಸಿಕೊಳ್ಳಬೇಕು. ಅವರು ಹೊರ ಹೋದರೆ ಅಪಾಯ ಇರುತ್ತದೆ. ಜನರು ತಾವಾಗೇ ಬಂದು ಹೋಟೆಲ್ನಲ್ಲಿ ಇರಬೇಕೆಂದು ಬಯಸಿದರೆ ರೂಮು ಕೊಡಿ ಎಂದು ಎಲ್ಲಾ ಹೋಟೆಲ್ ಮಾಲೀಕರಿಗೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನು, ಕೊರೋನಾ ಪತ್ತೆ ಪರೀಕ್ಷೆ ಇರುವ ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಮತ್ತು ಆನಂದ್ ಲ್ಯಾಬ್ ಹಾಗೂ ಕಲಬುರ್ಗಿಯ ಜಿಮ್ಸ್ನಲ್ಲಿ ಪ್ರಯೋಗಾಲಯಗಳಿಗೆ ಅನುಮತಿ ನೀಡಲಾಗಿದೆ. ಇದರೊಂದಿಗೆ ಒಂದು ಖಾಸಗಿ ಲ್ಯಾಬ್ ಸೇರಿದಂತೆ ರಾಜ್ಯದಲ್ಲಿ ಒಟ್ಟು 7 ಪ್ರಯೋಗಾಲಯಗಳು ಕೊರೋನಾ ಪತ್ತೆ ಪರೀಕ್ಷೆ ಮಾಡಲು ಅನುಮತಿ ಹೊಂದಿದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ