ಬೆಂಗಳೂರು (ಮೇ 16): ಕೊರೊನಾ ಹೊಡೆತದಿಂದಲೇ ಇನ್ನೂ ಜನ ಚೇತರಿಸಿಕೊಂಡಿಲ್ಲ. ಆಗಲೇ ಬ್ಲಾಕ್ ಫಂಗಸ್ ಕಾಟ ವಿಪರೀತ ಎನ್ನುವಷ್ಟಾಗುತ್ತಿದೆ. ಅನೇಕರು ಬ್ಲಾಕ್ ಫಂಗಸ್ ಸೋಂಕಿನಿಂದ ಜೀವ ಕಳೆದುಕೊಳ್ತಿದ್ದಾರೆ. ದೇಶದಲ್ಲಿ ಸದ್ಯ ಬ್ಲಾಕ್ ಫಂಗಸ್ ಔಷಧಿಯ ಕೊರತೆ ಕೂಡಾ ಬಹಳಷ್ಟಿದೆ. ಇದನ್ನು ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 20 ಸಾವಿರ ವಯಲ್ಗಳಷ್ಟು ಬ್ಲಾಕ್ ಫಂಗಸ್ ಔಷಧ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಸದಾನಂದಗೌಡರ ಜೊತೆ ಸಂಪರ್ಕದಲ್ಲಿ ಇದ್ದೇನೆ, ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡ್ತೀವಿ, ಯಾರು ಆತಂಕ ಪಡೋ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಇದುವರಗೆ ಎಷ್ಟು ಜನ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದಾರೆ, ಅವರಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಆರೋಗ್ಯ ಸಚಿವರ ಬಳಿಯೇ ಅಂಕಿ ಅಂಶಗಳು ಇಲ್ಲವಂತೆ. ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ ಅನ್ನೋ ಮಾಹಿತಿ ಇಲ್ಲ, ಎಷ್ಟು ಸಾವಾಗಿದೆ ಅಂತ ನಿಖರವಾದ ಮಾಹಿತಿ ಇಲ್ಲ. ಖಾಸಗಿಯಾಗಿ ಅನೇಕರು ದಾಖಲಾಗಿದ್ದಾರೆ, ಹೀಗಾಗಿ ಮಾಹಿತಿ ಲಭ್ಯವಿಲ್ಲ. ಇದಕ್ಕಾಗಿ ನಾವು ತಜ್ಞರ ಸಮಿತಿ ರಚನೆ ಮಾಡ್ತಿದ್ದೇವೆ. ಅಂಕಿ ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ನೀಡುತ್ತೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ