ಬೆಂಗಳೂರು(ಏ.23): ದೇಶಾದ್ಯಂತ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಇಂದು ಕರಾಳ ದಿನಾಚರಣೆ ಮಾಡಲಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ವೈದ್ಯರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಇಡೀ ದಿನ ಕೆಲಸ ಮಾಡಲಿದ್ದಾರೆ.
ನಿನ್ನೆಯಷ್ಟೇ ಏ.22ರಂದು ತಮ್ಮ ಮೇಲಿನ ಹಲ್ಲೆ ವಿರೋಧಿಸಿ ವೈದ್ಯರು ರಾತ್ರಿ 9 ಗಂಟೆಗೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಕಿಡಿಗೇಡಿಗಳ ವಿರುದ್ಧ ವೈದ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಬೆನ್ನಲ್ಲೀಗ ಇಂದು ಕರಾಳ ದಿನಾಚರಣೆ ಮಾಡಲಾಗುತ್ತಿದೆ.
ಇತ್ತೀಚೆಗೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಕೊರೋನಾ ಸೋಂಕು ಪೀಡಿತನ್ನು ಪರೀಕ್ಷೆಗೊಳಪಡಿಸಲು ಮುಂದಾದಾಗ ವೈದ್ಯರ ಮೇಲೆ ಸ್ಥಳೀಯರು, ಸಾರ್ವಜನಿಕರು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದನ್ನು ಖಂಡಿಸುವ ಹಿನ್ನೆಲೆಯಲ್ಲಿ ಈ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘವೂ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಕೊರೋನಾ ವಿರುದ್ಧ ಭಾರತ ಹೋರಾಟ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಹೊಗಳಿದ ಬಿಲ್ ಗೇಟ್ಸ್
ಮಧ್ಯಪ್ರದೇಶ, ಹೈದರಾಬಾದ್, ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ವೈದ್ಯರ ಮೇಲೆ ಕಲ್ಲು ತೂರಾಟ, ಎಂಜಲು ಉಗುಳುವುದು, ಬಾಯಿಗೆ ಬಂದತೆ ಬೈಯ್ಯುವ ಪ್ರಕರಣಗಳು ಕಂಡು ಬಂದಿದ್ದವು. ನಮ್ಮನ್ನು ಉಳಿಸಲು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರವೂ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ತಕ್ಷಣವೇ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯದ ಯಾವುದೇ ಆಸ್ಪತ್ರೆಯ ವೈದ್ಯರಾಗಲಿ, ವೈದ್ಯ ಸಿಬ್ಬಂದಿಗಳ ಮೇಲೆ ಯಾವುದೇ ವ್ಯಕ್ತಿ ಹಲ್ಲೆ ನಡೆಸಬಾರದು ಎಂದು ಆದೇಶಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ