ಬೆಂಗಳೂರು(ಜುಲೈ.20): ಕೊವಿಡ್ ಸಂಕಷ್ಟದಲ್ಲಿ ಪಿಯುಸಿ ಪರೀಕ್ಷೆ ಆಯ್ತು. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಯಿತು. ಇದೀಗ ಕೊವಿಡ್ ಕೇಸ್ ಇನ್ನಷ್ಟು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿಯೇ ಸಿಇಟಿ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದುವರೆಸಲು ವಿದ್ಯಾರ್ಥಿಗಳು, ಪೋಷಕರ ಒತ್ತಾಯ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಎರಡು ಸಾವಿರ ಗಡಿ ದಾಟುತ್ತಿದೆ. ಕಳೆದೊಂದು ವಾರದಿಂದ ಇದೇ ಪರಿಸ್ಥಿತಿ ಮುಂದುವರೆಯುತ್ತಿದೆ. ಇನ್ನು ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ನಾಲ್ಕು ಸಾವಿರ ಗಡಿ ದಾಟುತ್ತಿದೆ. ಇದಕ್ಕಾಗಿಯೇ ಸರ್ಕಾರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಿದೆ. ಇಂಥ ಕೊರೋನಾ ಸಂಕಷ್ಟ ಸ್ಥಿತಿಯಲ್ಲಿ ಪಿಯುಸಿ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳಿಗೆ ಇದೀಗ ಸಿ ಇ ಟಿ ಅಗ್ನಿ ಪರೀಕ್ಷೆ ಎದುರಾಗಿದೆ.
ಕೊರೋನಾ ಹೆಚ್ಚಳ ಹಿನ್ನೆಲೆ ಸಿಇ ಟಿ ಪರೀಕ್ಷೆ ಭಯ ಶುರುವಾಗಿದೆ. ಪಿಯುಸಿ ಕೊನೆಯ ಪರೀಕ್ಷೆ ಕೊರೋನಾ ಸಂದಿಗ್ಧತೆಯಲ್ಲಿ ಬರೆದಿದ್ದಾಯ್ತು. ಇದೀಗ ಕೊರೋನಾ ಕೇಸ್ ನಾಲ್ಕು ಸಾವಿರ ಗಡಿ ದಾಟುತ್ತಿರುವ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ತಲೆ ಬಿಸಿ ಹೆಚ್ಚಾಗಿದೆ. ಕೊರೋನಾ ಕೇಸು ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜುಲೈ 30 ರಿಂದ ಕಾಮೆಡ್ ಕೆ ಸಿಇಟಿ ಪರೀಕ್ಷೆಗಳು ಎರಡು ದಿನಗಳ ಕಾಲ ಜರುಗಲಿವೆ. ಪಿಯುಸಿ ಫಲಿತಾಂಶ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮಹತ್ವ ಸಿಇಟಿ. ವೃತ್ತಿಪರ ಕೋರ್ಸ್ ಗಳ ಪರೀಕ್ಷೆಗೆ ಇದರ ಫಲಿತಾಂಶ ತುಂಬ ಸಹಕಾರಿ. ಸದ್ಯ ಕೊರೋನಾ ಕೇಸು ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಭಯಪಡುತ್ತಿದ್ದರೆ, ಪೋಷಕರು ತಮ್ಮ ಮಕ್ಕಳನ್ನು ಇಂಥ ಸ್ಥಿತಿಯಲ್ಲಿ ಹೇಗೆ ಪರೀಕ್ಷೆ ಬರೆಸಲು ಕಳುಹಿಸುವುದು ಎಂದು ಅತಂಕದಲ್ಲಿದ್ದಾರೆ.
ಈಗಾಗಲೇ ಸರ್ಕಾರ ಜುಲೈ 30ರಿಂದ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಘೋಷಣೆ ಮಾಡಿದೆ. ಅದರಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಪಿಯುಸಿ ಕೊನೆ ಪರೀಕ್ಷೆ, ಎಸ್ ಎಸ್ ಎಲ್ ಸಿ ಪರೀಕ್ಷೆ ಸಂದರ್ಭದಲ್ಲಿದ್ದ ಕೊರೋನಾ ಕೇಸ್ ಈಗ ಹೊರಬರುತ್ತಿರುವ ಕೇಸು ಸಂಖ್ಯೆ ನೋಡಿದರೆ ಬಹುತೇಕ ಡಬಲ್ ಇದೆ. ಮೇಲಾಗಿ ಸಮುದಾಯ ಸೋಂಕು ಹರಡುವುದು ಬಹುತೇಕ ಖಚಿತವಾಗುತ್ತಿದೆ. ಇದರಿಂದಾಗಿ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ಶಿಕ್ಷಣ ಸಚಿವರಿಗೆ ವೀಡಿಯೋ ಮಾಡಿ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಲಕ್ಷಣ ರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ವ್ಯವಸ್ಥೆ..!
ಪಿಯುಸಿಯಲ್ಲಿ ಬಾಕಿ ಉಳಿದಿದ್ದ ಇಂಗ್ಲಿಷ್ ವಿಷಯ ಪರೀಕ್ಷೆಯನ್ನು ಭಯದಲ್ಲಿಯೇ ಬರೆದಿದ್ದೇನೆ. ಆಗ ಕಂಟೈನ್ಮೆಂಟ್ ಝೋನ್ ನಲ್ಲಿಯೇ ಇದ್ದರೂ ಹಾಗೇ ಪರೀಕ್ಷೆ ಬರೆದಿದ್ದೆ. ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೇನೆ. ಇಂಜಿನಿಯರ್ ಆಗಬೇಕು ಎನ್ನುವ ಕನಸಿದೆ. ಆಗ ಕೊರೋನಾ ಕೇಸ್ ಕಡಿಮೆಯಿತು. ಆದರೆ, ಈಗ ಕೊರೋನಾ ಹೆಚ್ಚಾಗುತ್ತಿದೆ. ಇದರ ಕ್ರೈಸಿಸ್ ಹೆಚ್ಚಿರುವ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಭಯ ಆಗುತ್ತಿದೆ. ಕೇಸ್ಗಳು ಕಡಿಮೆಯಾದ ಮೇಲೆ ಪರೀಕ್ಷೆ ನಡೆಸಲಿ. ಸದ್ಯ ಸಿಇಟಿ ಪರೀಕ್ಷೆ ಮುಂದೂಡಿ, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತೆ. ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಗಮನಹರಿಸಿ ಪರೀಕ್ಷೆ ಮುಂದೂಡಲಿ ಎಂದು ಬೆಂಗಳೂರಿನ ವಿದ್ಯಾರ್ಥಿನಿ ದೃತಿ ಮನವಿ ಮಾಡಿಕೊಳ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ