ಹಾವೇರಿ(ಏ.28): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಆರ್ಥಿಕ ನೆರವಿಗೆ ರಾಜ್ಯ ಸರ್ಕಾರ ಪರಿಹಾರ ನಿಧಿ ಮೂಲಕ ಮನವಿ ಮಾಡಿದ್ದರು. ಹಾವೇರಿಯ ಪುಟಾಣಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿದ್ದಾರೆ.
ಕೊರೋನಾ ವೈರಸ್ ಮಹಾಮಾರಿ ಹರಡುವುದನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಸರ್ಕಾರ ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವಿಗೆ ಕೋರಿದ್ದು, ಈ ಕೋರಿಕೆಗೆ ಹಲವು ಉದ್ಯಮಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು ತಮ್ಮ ನೆರವನ್ನು ನೀಡಿದ್ದಾರೆ. ಹಾಗೆಯೇ ಹಾವೇರಿ ನಗರದ ಮೂವರು ಪುಟಾಣಿಗಳು ತಾವು ಪಾಕೆಟ್ ಮನಿ ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾವೇರಿ ಬಸವೇಶ್ವರ ನಗರ ನಿವಾಸಿ ಬಸವರಾಜ ಎಸ್.ಬಳ್ಳಾರಿ ಹಾಗೂ ಪಲ್ಲವಿ ಬಳ್ಳಾರಿ ದಂಪತಿಗಳ ಮಕ್ಕಳಾದ ಸನ್ನಿಧಿ ಹಾಗೂ ಅವನಿ ಹಾಗೂ ಸಂಜೀವ್ ನಿರಲಗಿ ಪಾಟೀಲ್ ಮತ್ತು ಆಶಾ ಸಂಜೀವ್ ಪಾಟೀಲ್ ದಂಪತಿಗಳ ಮಗಳು ದೀಪ್ತಿ ಪಾಟೀಲ್ ಪರಿಹಾರ ನೀಡಿದ ಪುಟಾಣಿಗಳು. ತಾವು ಹುಂಡಿಯಲ್ಲಿ ಸಂಗ್ರಹಿಸಿದ್ದ ಹಣವನ್ನು ಇಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೆಯವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ ಡಿಡಿಯನ್ನು ನೀಡಿದ್ದಾರೆ.
ಇನ್ನೂ ಈ ಪುಟಾಣಿಗಳ ಸಹಾಯವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿಯರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಓದಿ :
ರಾಯಚೂರಿನಲ್ಲಿ ಬಿಗಿ ಕ್ರಮಕ್ಕೆ ಬಗ್ಗದೆ, ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ, ಕಳ್ಳಬಟ್ಟಿ ದಂಧೆ
ಇದೇ ರೀತಿಯಲ್ಲಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ 7 ವರ್ಷದ ಬಾಲಕಿ ಶ್ರೇಯಾ ದುದಗಿ ಪಾಕೆಟ್ ಮನಿ ಎಂದು ಪೋಷಕರು ನೀಡಿದ್ದ ಹಣವನ್ನೆಲ್ಲ ಪಿಎಂ ನಿಧಿಗೆ ನೀಡಿದ್ದಾಳೆ. ಭತಗುಣಕಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಗೆ ತೆರಳಿ ಒಂದು ವರ್ಷದಿಂದ ಕೂಡಿಟ್ಟಿದ್ದ 1435 ರೂಪಾಯಿ ಹಣವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ