ಉತ್ತರಪ್ರದೇಶ (ಮೇ 16);
ವಲಸೆ ಕಾರ್ಮಿಕರನ್ನು ಹೊತ್ತು ರಾಜಸ್ತಾನದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಟ್ರಕ್ ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದಿರುವ ಪರಿಣಾಮ 23 ಜನ ವಲಸೆ ಕಾರ್ಮಿಕರು ಮೃತಪಟ್ಟು ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಆರುಯಾ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಕ್ಡೌನ್ನಿಂದಾಗಿ ದೇಶದಾದ್ಯಂತ ವಲಸೆ ಕಾರ್ಮಿಕರ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಹಿಂದೆ ಔರಂಗಾಬಾದ್ 16 ಜನ ವಲಸೆ ಕಾರ್ಮಿಕರು ರೈಲಿಗೆ ಬಲಿಯಾದದ್ದನ್ನು ಇಲ್ಲಿ ಸ್ಮರಿಸಬಹುದು.
ದೇಶದಲ್ಲಿ ಲಾಕ್ಡೌನ್ ಜಾರಿಯಾದ ನಂತರ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಮತ್ತು ಇರುವ ಸ್ಥಳದಲ್ಲೂ ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ವಲಸೆ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹಲವರು ತಮ್ಮ ತವರು ರಾಜ್ಯಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದರೆ, ಇನ್ನೂ ಹಲವರು ಇತರೆ ವಾಹನಗಳಲ್ಲಿ ತಮ್ಮ ಊರಿಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇದು ನಿರಂತರವಾಗಿ ನಡೆಯುತ್ತಲೇ ಇದೆ.
ಇಂತಹ ಸಂದರ್ಭದಲ್ಲಿ ನಿರ್ಜಲೀಕರಣಕ್ಕೆ ಒಳಗಾಗಿ ಅಥವಾ ಅಪಘಾತಕ್ಕೆ ಈಡಾಗಿ ಸಾವನ್ನಪ್ಪುತ್ತಿರುವ ಕಾರ್ಮಿಕರ ಸಂಖ್ಯೆ ದಿನನಿತ್ಯ ಏರುತ್ತಲೇ ಇದೆ. ಈ ವರೆಗೆ ಕೊರೋನಾ ಸೋಂಕು ತಗುಲದೆ ಇಂತಹ ಅಪಘಾತ ಅಥವಾ ಇನ್ನಿತರ ಕಾರಣಗಳಿಂದಾಗಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಸಂಖ್ಯೆ ಕನಿಷ್ಟ 350 ಧಾಟಿದೆ ಎನ್ನಲಾಗುತ್ತಿದೆ.
ಇಂತಹ ಧಾರುಣ ಸಾವುಗಳನ್ನು ತಡೆಯುವ ಸಲುವಾಗಿಯೇ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು. ಅಲ್ಲದೆ, ಈ ಅರ್ಜಿಯಲ್ಲಿ ಎಲ್ಲಾ ರಾಜ್ಯಗಳು ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ಮತ್ತು ಆಶ್ರಯ ನೀಡುವಂತೆ ಕೋರಲಾಗಿತ್ತು.
ಆದರೆ, ಈ ಅರ್ಜಿಯನ್ನು ತಳ್ಳಿಹಾಕಿದ್ದ ಸುಪ್ರೀಂ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ನಡೆಯಲು ಬಯಸುವ ಜನರನ್ನು ನೀವು ಹೇಗೆ ತಡೆಯುತ್ತೀರಿ? ಯಾರಾದರೂ ಹೋಗಿ ಅವರನ್ನು ತಡೆಯಬಹುದೇ? ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಸಂಜಯ್ ಕೌಲ್ ಮತ್ತು ಬಿ.ಆರ್ ಗವಾಯಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಪ್ರಶ್ನೆ ಮಾಡಿತ್ತು. ಅಲ್ಲದೆ, ವಲಸೆ ಕಾರ್ಮಿಕರಿಗೆ ಆಶ್ರಯ ಮತ್ತು ಉಚಿತ ಸಾರಿಗೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ನಿರಾಕರಿಸಿತ್ತು.
ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕೆಲವೇ ದಿನದಲ್ಲಿ ಮತ್ತೊಂದು ಅಪಘಾತ ಜರುಗಿದ್ದು, ಸುಮಾರು 23 ಜನ ಸಾವನ್ನಪ್ಪಿರುವುದು ದುರಂತವೇ ಸರಿ.
ಇದನ್ನೂ ಓದಿ : ಔರಂಗಾಬಾದ್ ರೈಲು ದುರಂತದ ಬಳಿಕ ಎಚ್ಚೆತ್ತ ಕೇಂದ್ರ ಗೃಹ ಇಲಾಖೆ; ವಲಸೆ ಕಾರ್ಮಿಕರ ಸಾರಿಗೆ ವ್ಯವಸ್ಥೆಗೆ ಸೂಚನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ