ವಿಜಯಪುರ: ಪ್ರತಿನಿತ್ಯ ಮನೆಯ ಕಸ ಸಂಗ್ರಹಿಸುವ ವಾಹನಗಳು ಸ್ವಚ್ಛ ಭಾರತದ ಹಾಡುಗಳನ್ನು ಹಾಕಿಕೊಂಡು ಜನರಿಂದ ಕಸ ಸಂಗ್ರಹಿಸುತ್ತವೆ. ಸಾರ್ಜಜನಿಕರೂ ಅಷ್ಟೇ, ಪ್ರತಿನಿತ್ಯ ಈ ವಾಹನಗಳ ಹಾಡು ಕೇಳಿದರೆ ಸಾಕು ಮನೆಯಿಂದ ಹೊರ ಬಂದು ತಮ್ಮ ಮನೆಯ ಕಸವನ್ನು ಹಾಕುತ್ತಾರೆ. ಆದರೆ, ಬಸವನಾಡು ವಿಜಯಪುರ ಮಹಾನಗರದ ಜನತೆಗೆ ಇವತ್ತು ಬೇರೆಯದೆ ಧ್ವನಿ ಕೇಳಿಸಿತು. ಬೆಳ್ಳಂಬೆಳಿಗ್ಗೆ ಇದು ಯಾರಪ್ಪ ಹೀಗೆ ಧ್ವನಿ ವರ್ಧಕ ಬಳುಸುತ್ತಿದ್ದಾರೆ ಎಂದು ಹೊರಗೆ ಬಂದು ನೋಡಿದಾಗ ಅದೇ ಕಸ ಸಂಗ್ರಹಿಸುವ ವಾಹನ ಬಂದು ನಿಂತಿತ್ತು. ಆದರೆ, ಈ ವಾಹನದಲ್ಲಿ ಪ್ರಸಾರವಾಗುತ್ತಿದ್ದ ಧ್ವನಿ ಮತ್ತು ಸಂದೇಶ ಮಾತ್ರ ವಿಭಿನ್ನವಾಗಿತ್ತು.
ಇದು ಯಾಕೆ ಎಂಬುದನ್ನು ಪ್ರಶ್ನಿಸಿದಾಗ ಸಿಕ್ಕ ಮಾಹಿತಿ ಇಲ್ಲಿದೆ ನೋಡಿ. ರಾಜ್ಯಾದ್ಯಂತ ಕೊರೋನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಜಿಲ್ಲಾಡಳಿತ ವಿನೂತನ ಜಾಗೃತಿ ಕ್ರಮಕೈಗೊಂಡಿದೆ. ನಿನ್ನೆ ಸಿಎಂ ಬಿ. ಎಸ್. ಯಡಿಯೂರಪ್ಪ ಒಂದು ವಾರ ಕೊರೋನಾ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಏನೆಲ್ಲ ಬಂದ್ ಇರಲಿವೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಈ ಕುರಿತು ಆದೇಶ ಬಂದಿದ್ದೆ ತಡ, ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಸಂಜೆ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೇ, ಜನರಲ್ಲಿ ಯಾವ ಯಾವ ಮಾಧ್ಯಮಗಳ ಮೂಲಕ ಅರಿವು ಮೂಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಸೂಚನೆ ನೀಡಿದ್ದಾರೆ. ಅಲ್ಲದೇ, ತಾಲೂಕುವಾರು ವಿಶೇಷ ಅಧಿಕಾರಿಗಳನ್ನೂ ನೇಮಕ ಮಾಡಿದ್ದಾರೆ. ಅದರಂತೆ ಇಂದು ಬೆಳಿಗ್ಗೆಯಿಂದಲೇ ಈ ಕಸ ಸಂಗ್ರಹಿಸುವ ವಾಹನಗಳು ಜಾಗೃತಿ ಕಾರ್ಯ ಆರಂಭಿಸಿವೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಕೊರೋನಾ ಭೀತಿ; ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ಇಳಿಕೆ
ಪ್ರತಿನಿತ್ಯ ವಿಜಯಪುರ ಮಹಾನಗರ ವ್ಯಾಪ್ತಿಯ 35 ವಾರ್ಡುಗಳಲ್ಲಿ ಕಸ ಸಂಗ್ರಹಿಸುವ 80 ವಾಹನಗಳಲ್ಲಿ ಧ್ವನಿ ಸುರಳಿಯನ್ನು ಬಳಸಿ ಒಂದು ವಾರಗಳ ಕಾಲ ಎನೆಲ್ಲ ಬಂದ್ ಇರಲಿವೆ ಎಂಬುದರ ಕುರಿತು ಅರಿವು ಮೂಡಿಸುತ್ತಿವೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಈ ಜನರನ್ನು ತಲುಪಲು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಶೆಟ್ಟಿ ಮತ್ತು ಸಿಬ್ಬಂದಿ ಈ ವಿನೂತನ ಜಾಗೃತಿಕಾರ್ಯ ಆರಂಭಿಸಿದ್ದಾರೆ. ವಿಜಯಪುರ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ