ನವದೆಹಲಿ (ಮೇ. 11): ಕೋವಿಡ್ ಸೋಂಕಿನ ವಿರುದ್ಧ ರಕ್ಷಣೆಗಾಗಿ ಜನರು ಲಸಿಕೆಗಾಗಿ ಮುಗಿಬೀಳುತ್ತಿದ್ದು, ದೇಶದ ಎಲ್ಲಡೆ ಲಸಿಕೆ ಅಲಭ್ಯತೆ ಕಂಡು ಬಂದಿದೆ. ಇದೇ ಹಿನ್ನಲೆ ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಕಾರ್ಯ ಇನ್ನು ಆರಂಭಗೊಂಡಿಲ್ಲ. ಈ ಹಿನ್ನಲೆ ಕೇಂದ್ರಕ್ಕೆ ಸಲಹೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೇಶದಲ್ಲಿ ಪ್ರಸ್ತುತ ಸೆರಂ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಮಾತ್ರ ಈ ಕೋವಿಡ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಲಸಿಕೆ ಉತ್ಪಾದನೆಗೆ ಇನ್ನು ಹಲವು ಕಂಪನಿಗಳಿಗೆ ಅವಕಾಶ ನೀಡಿ. ಈ ಮೂಲಕ ಲಸಿಕೆ ಕೊರತೆಯನ್ನು ನೀಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸೆರಂ ಸಂಸ್ಥೆ ಕೋವಿಶೀಲ್ಡ್ ಉತ್ಪಾದನೆ ಮಾಡುತ್ತಿದ್ದು, ಭಾರತ್ ಬಯೋಟೆಕ್ ಕೋವಾಕ್ಸಿನ್ ಉತ್ಪಾದಿಸುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸುವಲ್ಲಿ ಎರಡು ಕಂಪನಿಗಳು ಹರಸಾಹಸ ನಡೆಸುತ್ತಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಪರೀಕ್ಷೆ ಪಾಸ್ ಮಾಡಿದ್ದರೂ ಅದು ದೇಶದಲ್ಲಿ ಸಿಗುವುದಕ್ಕೆ ಇನ್ನು ಹೆಚ್ಚಿನ ಸಮಯ ಬೇಕಾಗಿದೆ.
ಈ ಹಿನ್ನಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿ ಪತ್ರ ಬರೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಲಸಿಕೆ ತಯಾರಿಸಲು ಹೆಚ್ಚಿನ ಸಂಸ್ಥೆಗಳಿಗೆ ಅವಕಾಶ ನೀಡುವ ಮೂಲಕ ಪೂರೈಕೆಯನ್ನು ಹೆಚ್ಚಿಸಬಹುದು ಎಂದಿದ್ದಾರೆ.
ಲಸಿಕೆ ಉತ್ಪಾದನೆ ಮಾಡುತ್ತಿರುವ ಎರಡು ಕಂಪನಿಗಳು ಒಂದು ಕೋಟಿ ಲಸಿಕೆ ಉತ್ಪಾದನೆ ಮಾಡಲು ಆರರಿಂದ ಏಳು ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಈ ರೀತಿಯಾದರೆ ದೇಶದ ಪ್ರತಿಯೊಬ್ಬರಿಗೆ ಲಸಿಕೆ ನೀಡಲು ಇನ್ನು ಎರಡು ವರ್ಷ ಸಮಯ ಬೇಕಾಗುತ್ತದೆ. ಸೋಂಕಿನ ಮತ್ತಷ್ಟು ಅಲೆ ಎದುರಾಗಲಿದ್ದು, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.
ಇದನ್ನು ಓದಿ: ಕೊರೋನಾಗೆ ಹಸುವಿನ ಸಗಣಿ, ಗಂಜಲವೇ ರಾಮಬಾಣ ಎನ್ನುತ್ತಿವೆ ಆಶ್ರಮಗಳು; ವೈದ್ಯರಿಂದ ಎಚ್ಚರಿಕೆ
ಈ ಹಿನ್ನಲೆ ಸರ್ಕಾರ ಎರಡು ಕಂಪನಿಗಳಿಂದ ಲಸಿಕೆ ಸೂತ್ರವನ್ನು ಪಡೆದು ಇತರೆ ಕಂಪನಿಗೆ ನೀಡಬೇಕು. ಈ ಮೂಲಕ ಲಸಿಕೆಗಳನ್ನು ಸುರಕ್ಷಿತವಾಗಿ ಉತ್ಪಾದಿಸಬಹುದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಂಪನಿಗಳಿಂದ ಲಸಿಕೆ ಸೂತ್ರ ಪಡೆದು ಬೇರೆ ಕಂಪನಿಗಳಿಗೆ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಈ ಕುರಿತು ಕೇಂದ್ರ ಗಮನಹರಿಸಬೇಕು. ಈ ಮೂಲಕ ಪ್ರತಿಯೊಬ್ಬ ಭಾರೀಯನಿಗೂ ಲಸಿಕೆ ಸಿಗವಂತೆ ಆಗಬೇಕು. ಇದಕ್ಕಾಗಿ ನಾವು ಕೂಡ ಕಾರ್ಯನಿರ್ವಹಿಸಲು ಸಿದ್ಧವಿದ್ದೇವೆ ಎಂದಿದ್ದಾರೆ.
ದೆಹಲಿಯಲ್ಲಿ ಪ್ರತಿನಿತ್ಯ 1. 25 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿದೆ. ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕುತ್ತಿದ್ದೇವೆ. ರಾಜ್ಯದ ಎಲ್ಲರಿಗೂ ಮೂರು ತಿಂಗಳೊಳಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಆದರೆ, ಲಸಿಕೆ ಕೊರತೆ ನಮಗೆ ಎದುರಾಗಿದೆ ಎಂದಿದ್ದಾರೆ ಕೇಜ್ರಿವಾಲ್.
ಇದೇ ವೇಳೆ ದೆಹಲಿಯಲ್ಲಿ ಸೋಂಕಿನ ಇಳಿಕೆ ಬಗ್ಗೆ ಕೂಡ ಅವರು ಮಾತನಾಡಿದ್ದು, ಜನರ ಸಹಕಾರದಿಂದ ಲಾಕ್ಡೌನ್ ಯಶಸ್ವಿಯಾಗಿದೆ. ಆಕ್ಸಿಜನ್ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸದ್ಯ ಐಸಿಯು ಮತ್ತು ಆಕ್ಸಿಜನ್ ಬೆಡ್ ಕೊರತೆ ಇಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ