ನವದೆಹಲಿ(ಮಾ. 30): ದೇಶಾದ್ಯಂತ 21 ದಿನ ಲಾಕ್ಡೌನ್ ಇದ್ದರೂ ಭಾರೀ ಪ್ರಮಾಣದಲ್ಲಿ ವಲಸಿಗ ಕಾರ್ಮಿಕರು ಸಂಚರಿಸುತ್ತಿರುವುದು ರಾಷ್ಟ್ರಕ್ಕೆ ಅಪಾಯ ತಂದೊಡ್ಡಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದರು.
ಟ್ವಿಟ್ಟರ್ನಲ್ಲಿ ಬಂದಿದ್ದ ಸುದ್ದಿಯೊಂದಕ್ಕೆ ಹಿಂದಿಯಲ್ಲಿ ಪ್ರತಿಕ್ರಿಯಿಸಿದ ಸಿಸೋಡಿಯಾ, “ಪಂಜಾಬ್ ಮತ್ತು ಹರಿಯಾಣದಿಂದ ವಲಸೆ ಕಾರ್ಮಿಕರು ಗುಳೆ ಹೋಗುವುದು ಈಗಲೂ ಮುಂದುವರೆದಿದೆ. ಇದು ಇಡೀ ದೇಶವನ್ನು ಅಪಾಯಕ್ಕೆ ದೂಡುತ್ತಿದೆ” ಎಂದು ಹೇಳಿದರು.
ವಲಸೆ ಕಾರ್ಮಿಕರ ಸಂಚಾರವನ್ನು ತಡೆಯಲು ರಾಜ್ಯ ಮತ್ತು ಜಿಲ್ಲಾ ಗಡಿಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತದ ಪ್ರದೇಶಗಳಿಗೆ ಸೂಚಿಸಲಾಗಿದೆ. ಅಲ್ಲದೇ ಲಾಕ್ಡೌನ್ ನಿಯಮ ಉಲ್ಲಂಘಿಸುವ ವಲಸಿಗರಿಗೆ 14 ದಿನಗಳ ಕಾಲ ಐಸೋಲೇಶನ್ ಒಳಪಡಿಸಲು ತಿಳಿಸಲಾಗಿದೆ.
ಇದನ್ನೂ ಓದಿ: ಲಾಕ್ ಡೌನ್ ವೇಳೆ ಅಗತ್ಯ ವಸ್ತು ಸಾಗಿಸುತ್ತಿರುವವರನ್ನು ತಡೆಯದಿರಿ: ನೋಯ್ಡಾ ಪೊಲೀಸರಿಗೆ ಸೂಚನೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ವಲಸೆ ಕಾರ್ಮಿಕರಿಗೆ ದೇಶದ ಹಿತದೃಷ್ಟಿಯಿಂದ ತಮ್ಮ ಸ್ಥಳಗಳಿಗೆ ಹೋಗದಂತೆ ಮನವಿ ಮಾಡಿದ್ದಾರೆ. ಗುಂಪಿನಲ್ಲಿ ಇರುವುದರಿಂದ ತಮಗೂ ಸೋಂಕು ತಗುಲಬಹುದು ಎಂದು ಈ ಕಾರ್ಮಿಕರಿಗೆ ದೆಹಲಿ ಸಿಎಂ ಎಚ್ಚರಿಸಿದ್ಧಾರೆ.
ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 72 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಸೋಮವಾರ ಕೋವಿಡ್-19 ಪ್ರಕರಣಗಳ ಸಂಖ್ಯೆ 1,071 ಕ್ಕೆ ಏರಿದರೆ, ಸಾವಿನ ಸಂಖ್ಯೆ 32 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
- ಸಂಧ್ಯಾ ಎಂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ