ಮೈಸೂರು: ಮೈಸೂರಿನಲ್ಲಿ ಇಂದು ಮತ್ತೆ 12 ಮಂದಿಗೆ ಕೊರೋನಾ ಪಾಸಿಟಿವ್ ಧೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ 12 ಕೇಸ್ನಲ್ಲಿ, 11 ಮಂದಿಯೂ ಜುಬಿಲೆಂಟ್ಸ್ ಕಾರ್ಖಾನೆ ನೌಕರರಾಗಿದ್ದು, P-52 ಸೋಂಕಿತನಿಂದ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಓರ್ವ ಮಹಿಳೆಗೆ P-273 ಸೋಂಕಿತನಿಂದ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ಈವರೆಗೆ 60 ಮಂದಿಗೆ ಸೋಂಕು ದೃಢವಾಗಿದೆ. ಶುಕ್ರವಾರ ಸಂಜೆ ವೇಳೆಗೆ ಓರ್ವ ಡಿಸ್ವಾರ್ಜ್ ಆಗಿದ್ದು ಮೈಸೂರಿನಲ್ಲಿ 13 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಒಟ್ಟು 60ಕ್ಕೇರಿದ ಆಕ್ಟಿವ್ ಪಾಸಿಟಿವ್ ಪ್ರಕರಣಗಳಿಂದ ಇಂದಿನ ಕೇಸ್ಗಳು ಮೈಸೂರಿಗೆ ಮರ್ಮಾಘಾತ ನೀಡುತ್ತಿವೆ.
ಕಾರ್ಖಾನೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ
ಇತ್ತ ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದ್ದು, ಕಾರ್ಖಾನೆಯಿಂದ ಎರಡು ವಿಚಾರಗಳ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಕಾರ್ಖಾನೆಗೆ ಚೈನಾದಿಂದ ಬಂದಿದ್ದ ಕಂಟೈನರ್ನಿಂದ ಸೋಂಕು ಹರಡಿಲ್ಲ ಎಂದು ಜುಬಿಲೆಂಟ್ಸ್ ಕಾರ್ಖಾನೆ ಸ್ಪಷ್ಟನೆ ನೀಡಿದೆ.
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ನೆಗೆಟಿವ್ ವರದಿ ಬಂದಿದ್ದು, ಚೈನಾದಿಂದ ತರಿಸಲಾಗಿದ್ದ ಕಚ್ಚಾವಸ್ತುವಿನಿಂದ ಸೋಂಕು ಹರಡಿಲ್ಲ ಎಂಬುದು ಧೃಢವಾಗಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಜೊತೆಗೆ ಕಾರ್ಖಾನೆಯ ಸಿಬ್ಬಂದಿ ವಿದೇಶ ಪ್ರವಾಸ ಕೈಗೊಂಡ ವಿಚಾರವಾಗಿ, ಕಾರ್ಖಾನೆಯ ಮೊದಲ ಸೋಂಕಿತ P-52 ಕಳೆದ ಆರು ತಿಂಗಳಿನಿಂದ ವಿದೇಶ ಪ್ರವಾಸ ಕೈಗೊಂಡಿಲ್ಲ. ನಮ್ಮ ಕಾರ್ಖಾನೆಯಲ್ಲಿ ಸೋಂಕಿತರಾಗಿರುವ ಯಾರೋಬ್ಬರು ವಿದೇಶ ಪ್ರವಾಸ ಕೈಗೊಂಡಿಲ್ಲ. ಅಲ್ಲದೆ, ನಮ್ಮ ಕಾರ್ಖಾನೆಯ ಪಾಸಿಟಿವ್ ಸೋಂಕಿತರಲ್ಲಿ ಯಾರೊಬ್ಬರು ಕಳೆದ ಆರು ತಿಂಗಳಲ್ಲಿ ಪ್ರವಾಸವನ್ನೇ ಮಾಡಿಲ್ಲ ಎಂದು ಎರಡು ವಿಚಾರಗಳ ಬಗ್ಗೆ ಸ್ಪಷ್ಟೀಕರಣ ನೀಡಿದ ಜುಬಿಲೆಂಟ್ಸ್ ಕಾರ್ಖಾನೆ ಕಂಟೈನರ್ ಬಗ್ಗೆ ಇದ್ದ ಅನುಮಾನವನ್ನು ಬಗೆಹರಿಸಿದೆ.
ಇಂದಿನ ಕೊರೋನಾ ಮಾಹಿತಿ ಹೀಗಿದೆ
- ಜಿಲ್ಲೆಯಲ್ಲಿ ಒಟ್ಟು ಕೊರೋನಾ ನಿಗಾ ಪ್ರಕರಣಗಳು - 4486
- ಒಟ್ಟು ಸ್ಯಾಂಪಲ್ ಟೆಸ್ಟ್ ಪ್ರಕರಣ -1815
- ಮೈಸೂರಿನಲ್ಲಿ ಒಟ್ಟು ನೆಗೆಟಿವ್ ಬಂದಿರುವ ಪ್ರಕರಣಗಳು - 1742
- ಮೈಸೂರಿನಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು -73
- ಮೈಸೂರಿನಲ್ಲಿ ಒಟ್ಟು ಆಕ್ಟಿವ್ ಪಾಸಿಟಿವ್ ಪ್ರಕರಣ - 61
- ಸದ್ಯ ಆಸ್ಪತ್ರೆಯಲ್ಲಿ ದಾಖಲಿರುವವರ ಸಂಖ್ಯೆ -60
- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ - 13
- ಇನ್ನೂ ವರದಿ ಬರಲು ಬಾಕಿಯಿರುವ ಪ್ರಕರಣಗಳು – 0
- ಮೈಸೂರಿನಲ್ಲಿ ಸ್ಯಾಂಪಲ್ ರಿಜೆಕ್ಟ್ – 1
- ಕೊರೋನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ - 0
- ವಿದೇಶದಿಂದ ಬಂದು ಮನೆಯಲ್ಲೇ ನಿಗಾದಲ್ಲಿ ಇರುವವರ ಸಂಖ್ಯೆ - 2131
- 14 ದಿನಗಳ ನಿಗಾ ಮುಗಿಸಿದವರು - 2295
ಇವೆಲ್ಲದರ ನಡುವೆ ಮೈಸೂರಿನಲ್ಲಿ 72 ವರ್ಷದ ವೃದ್ಧನಿಗೆ ಸೋಂಕು ತಗುಲಿರುವ ವಿಚಾರವಾಗಿ, ಸೋಂಕಿತ ವೃದ್ದನ ಕುಟುಂಬಸ್ಥರು ಕ್ವಾರಂಟೈನ್ ಆಗಿದ್ದಾರೆ. ಸೋಂಕಿತನ ಪತ್ನಿ, ಮಗ ಹಾಗೂ ಸೊಸೆ ಕ್ವಾರಂಟೈನ್ ಆಗಿದ್ದು, ಮೂವರ ಮಾದರಿ ಕಲೆಯಾಕಿ ಟೆಸ್ಟ್ ಗೆ ಕಳುಹಿಸಿದ ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿತ್ತು. ಅದರಲ್ಲಿ ಓರ್ವ ಮಹಿಳೆಗೆ ಸೋಂಕು ಧೃಢವಾಗಿದ್ದು, ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇದನ್ನು ಓದಿ: ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ತಜ್ಞರು, ಅಧಿಕಾರಿಗಳೊಂದಿಗೆ ಸಿಎಂ ನಡೆಸಿದ ಸಭೆಯ ಪ್ರಮುಖಾಂಶಗಳು
ಇನ್ನು ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಸಹಕಾರಿ ಬ್ಯಾಂಕ್ಗೆ ಭೇಟಿ ನೀಡಿದ್ದ ವೃದ್ಧ,ಅಶೋಕ ರಸ್ತೆಯಲ್ಲಿರುವ ಮೈಸೂರು ಚಾಮರಾಜನಗರ ಸಹಕಾರ ಬ್ಯಾಂಕ್ನಲ್ಲಿ ವ್ಯವಹರಿಸಿದ್ದ ಎಂದು ಮಾಹಿತಿ ತಿಳಿದುಬಂದಿದೆ. ಹೀಗಾಗಿ ಅಲ್ಲಿದ್ದ ಪ್ರಾಥಮಿಕ ಸಂಪರ್ಕಿತ ಬ್ಯಾಂಕ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಕ್ವಾರಂಟೈನ್ ಮಾಡಿದ್ದು, ಆತನ ಮತ್ತಷ್ಟು ಟ್ರಾವೆಲ್ ಹಿಸ್ಟರಿ ಕಲೆಯಾಕುತ್ತಿರುವ ಜಿಲ್ಲಾಡಳಿತ, ಮಹದೇಶ್ವರ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಿದೆ. ನರ್ಸಿಂಗ್ ಹೋಂ ಬಂದಿದ್ದ ರೋಗಿಗಳಿಗೆ ಕರೆ ಮಾಡಿ ತಿಳಿಸಿರುವ ಅಧಿಕಾರಿಗಳು. ರೋಗ ಲಕ್ಷಣಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಈ ಕೇಸ್ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ