ರಾಯಚೂರು: ಇವರೆಲ್ಲ ಅಂದು ದುಡಿದು ಅಂದೇ ಊಟ ಮಾಡುವಂಥ ಕಡುಬಡವರು. ಕೊರೋನಾ ವೈರಸ್ ಹಬ್ಬದಂತೆ ತಡೆಯಲು ಲಾಕ್ ಡೌನ್ ಮಾಡಿರುವುದು ದುಡಿಯುವ ಕೈಗಳ ಕೆಲಸ ಕಸಿದುಕೊಂಡಿದೆ. ಇದರೊಂದಿಗೆ ಅವರ ಊಟವನ್ನು ಸಹ ಕಸಿದುಕೊಂಡಿದೆ, ಇದಕ್ಕೆ ಸ್ಪಷ್ಠ ಉದಾಹರಣೆ ರಾಯಚೂರು ಎಪಿಎಂಸಿ( ರಾಜೇಂದ್ರ ಗಂಜ್ ) ನಲ್ಲಿ ದುಡಿಯುವ ಹಮಾಲರು.
ಎಪಿಎಂಸಿಯಲ್ಲಿ ಒಟ್ಟು 1000ಕ್ಕೂ ಅಧಿಕ ಹಮಾಲರಿದ್ದಾರೆ, ಅದರಲ್ಲಿ 400 ಮಹಿಳೆಯರು ಇದ್ದಾರೆ. ಮಾರುಕಟ್ಟೆಗೆ ಬರುವ ಧಾನ್ಯವನ್ನು ಇಳಿಸುವುದು, ಸ್ವಚ್ಛ ಮಾಡುವುದು, ತೂಕ ಮಾಡುವುದು ಸೇರಿದಂತೆ ನಾನಾ ಕೆಲಸ ಮಾಡಿ ದಿನದ ದುಡಿಮೆ ಮಾಡಿಕೊಳ್ಳುತ್ತಿದ್ದರು, ಇಲ್ಲಿ ದುಡಿಯುವ ಹಮಾಲರು. ದಿನಕ್ಕೆ ಕನಿಷ್ಠ ರೂ. 300ರಿಂದ ರೂ. 500 ರೂಪಾಯಿಯವರೆಗೂ ದುಡಿಯುತ್ತಿದ್ದರು. ಆದರೆ ಕೊರೋನಾ ಲಾಕ್ ಡೌನ್ ಮಾಡಿದ್ದರಿಂದ ಇವರ ದುಡಿಮೆ ನಿಂತಿದೆ, ಆರ್ಥಿಕ ಚಟುವಟಿಕೆಗಳು ನಡೆಯಲಿ ಎಂಬ ಕಾರಣಕ್ಕೆ ಎಪಿಎಂಸಿಗಳಲ್ಲಿ ರೈತರು ಫಸಲು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಆದರೆ ಗ್ರೀನ್ ಝೋನಿನಲ್ಲಿರುವ ರಾಯಚೂರು ಸುತ್ತಲು ರೆಡ್ ಝೋನ್ ಪ್ರದೇಶಗಳಿವೆ. ಎಪಿಎಂಸಿಗೆ ಬಹುತೇಕ ಗದ್ವಾಲ, ಕರ್ನೂಲ್ ಹಾಗೂ ಮೆಹಬೂಬನಗರ ಜಿಲ್ಲೆಯಿಂದ ರೈತರು ಬರುತ್ತಾರೆ, ಈ ಜಿಲ್ಲೆಗಳಲ್ಲಿ ಅಧಿಕ ಕೊರೊನಾ ಪಾಸಿಟಿವ್ ಇರುವ ಹಿನ್ನಲೆ ಎಪಿಎಂಸಿಗೆ ಬರುವದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಕರಗಿದ ಕನ್ನಡಿಗರ ಕಷ್ಟ: ನಾಳೆ ಇಂಗ್ಲೆಂಡ್ನಿಂದ ಬೆಂಗಳೂರಿಗೆ, ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮನ
ಈ ಮಧ್ಯೆ ಭತ್ತ ಸೇರಿದಂತೆ ವಿವಿಧ ಧಾನ್ಯವನ್ನು ಎಪಿಎಂಸಿಯೊಳಗೆ ತಾರದೆ ನೇರವಾಗಿ ಮಿಲ್ಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಎಪಿಎಂಸಿ ಪ್ರಾಂಗಣದಲ್ಲಿ ದುಡಿವ 1000 ಹಮಾಲರಿಗೆ ಕೆಲಸವಿಲ್ಲದಂತಾಗಿದೆ. ಇನ್ನೂ ಕೆಲವು ಪುರುಷ ಹಮಾಲರು ಬೇರೆ ಕಡೆ ಹಮಾಲಿ ಕೆಲಸಕ್ಕೆ ಹೋಗುತ್ತಿದ್ದಾರೆ, ಆದರೆ ೪೦೦ ಜನ ಮಹಿಳಾ ಹಮಾಲರಿಗೆ ಉದ್ಯೋಗವಿಲ್ಲದಂತಾಗಿದೆ. ಉದ್ಯೋಗವಿಲ್ಲದೆ ಇರುವದರಿಂದ ಇವರ ಕುಟುಂಬಗಳು ಸಂಕಷ್ಟದಲ್ಲಿವೆ, ಸರಕಾರ ನಮಗೆ ಕೆಲಸ ನೀಡಿ ಇಲ್ಲವೇ ಪರಿಹಾರ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ