ಶಿವಮೊಗ್ಗ(ಏ.16): ದೇಶದೆಲ್ಲೆಡೆ ಕೊರೋನಾ ವೈರಸ್ ಸೋಂಕು ಭೀತಿಯಿಂದಾಗಿ ಜನರು ಪರಿತಪಿಸುತ್ತಿದ್ದಾರೆ. ಸರ್ಕಾರ ಜನರಿಗೇನೋ ಆಹಾರದ ವ್ಯವಸ್ಥೆ ಮಾಡುತ್ತಿದೆ. ಬಡವರಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಂಡಿದೆ. ಸರ್ಕಾರ ಮತ್ತು ಸ್ಥಳಿಯರು, ಸಂಘ-ಸಂಸ್ಥೆಗಳು ಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳು ಪೂರೈಕೆ ಮಾಡುತ್ತಿದ್ದಾರೆ. ಅದರೆ ಬೀದಿ ಬದಿಯ ಶ್ವಾನಗಳಿಗೆ ಮತ್ತು ಪ್ರಾಣಿಗಳಿಗೆ ಆಹಾರ ಸಿಗದೇ ಅವುಗಳು ನಿತ್ಯವೂ ನರಕ ಯಾತನೆ ಪಡುವಂತ ಸ್ಥಿತಿ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತಿದೆ.
ಕೊರೋನಾ ಹೊಡೆತ ಕೇವಲ ಮನುಷ್ಯನ ಹೊಟ್ಟೆ ಮೇಲೆ ಹೊಡೆದಿಲ್ಲ, ಪ್ರಾಣಿಗಳ ಆಹಾರಕ್ಕೂ ಸಂಚಕಾರ ತಂದಿದೆ. ಪ್ರಾಣಿಗಗಳಿಗೆ ಆಹಾರದ ಸ್ಥಳಗಳಾಗಿದ್ದ ಹೊಟೇಲ್, ಬೀದಿ ಬದಿಯ ತಿಂಡಿ ಗಾಡಿಗಳು ಇಲ್ಲದೇ, ಇವುಗಳಿಗೆ ಆಹಾರ ಸಿಗದೇ, ತೊಂದರೆಯಾಗಿದೆ. ಈ ಮೂಕ ಪ್ರಾಣಿಗಳ ಮಾತುಗಳನ್ನು ಆಲಿಸುವ ಪ್ರಾಣಿ ಪ್ರಿಯರಿಗೆ ಇವುಗಳ ತೊಂದರೆ ಅರ್ಥವಾಗಿದ್ದು, ಇವುಗಳಿಗೆ ನಿತ್ಯವೂ ಆಹಾರ ನೀಡುವ ಕಾಯಕ ಮಾಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಪ್ರಾಣಿಗಳ ರಕ್ಷಣಾ ಕ್ಲಬ್ ನ ಸದಸ್ಯರು, ನಿತ್ಯವೂ ಶ್ವಾನ ಸೇರಿದಂತೆ, ಬೀದಿಯಲ್ಲಿರುವ ಹಸು, ಕುದುರೆ ಸೇರಿದಂತೆ, ಇತರೇ ಎಲ್ಲಾ ಪ್ರಾಣಿಗಳಿಗೆ ಆಹಾರ ಪೂರೈಸುತ್ತಿದ್ದಾರೆ. ಅನ್ನ, ಚಿಕನ್, ಹಸಿ ತರಕಾರಿಗಳು, ಹಾಲು, ಮೊಟ್ಟೆ ಸೇರಿದಂತೆ ಇನ್ನಿತರೇ ಆರೋಗ್ಯಕರ ಆಹಾರವನ್ನು ಮಿಶ್ರಣ ಮಾಡಿ, ಹಸಿದ ಮೂಕ ಪ್ರಾಣಿಗಳ ಹೊಟ್ಟೆಗೆ ತುತ್ತು ಅನ್ನ ನೀಡುವ ಪುಣ್ಯದ ಕಾರ್ಯದಲ್ಲಿ ನಿರತರಾಗಿದ್ದಾರೆ.
![]()
ಶ್ವಾನಗಳು
ಸಂಸ್ಥೆಯ 25 ಜನ ಸದಸ್ಯರು ನಗರದೆಲ್ಲೆಡೆ ಟೀಮ್ ಗಳನ್ನಾಗಿ ಮಾಡಿಕೊಂಡು, ಸುತ್ತಾಡಿ ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ಯುವಕ-ಯುವತಿಯರು ಕಳೆದ 10 ದಿನಗಳಿಂದ ನಗರದ ಬೀದಿ ಬೀದಿ ಸುತ್ತಾಡಿ ಪ್ರಾಣಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ನಾಯಿಗಳಿಗೆ ಮೊಟ್ಟೆ, ಅನ್ನ, ಹಾಲು ಮಿಶ್ರಣ ಮಾಡಿ ನೀಡುತ್ತಿದ್ದಾರೆ. ನಗರದ ಚಿಕನ್ ಸ್ಟಾಲ್ ಒಂದರ ಮಾಲೀಕರು, ಪ್ರತಿನಿತ್ಯ 6 ಕೆ.ಜಿ ಚಿಕನ್ ನ್ನು ಈ ಸಂಸ್ಥೆಗೆ ನೀಡುವುದರ ಮೂಲಕ ಔದಾರ್ಯತೆ ಮೆರೆದಿದ್ದಾರೆ.
ಇದನ್ನೂ ಓದಿ :
ಏ.17ಕ್ಕೆ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್ -ರೇವತಿ ಸರಳ ವಿವಾಹ : ಕುಮಾರಸ್ವಾಮಿ
ಅಲ್ಲದೇ, ಹಸು-ಕರು ಮತ್ತು ಕುದುರೆ-ಕತ್ತೆಗಳಿಗೆ ಹೂಕೋಸು. ಎಲೆ ಕೋಸು. ಸೋರೆಕಾಯಿ. ಸೌತೆಕಾಯಿ. ಬದನೆಕಾಯಿ, ಬಾಳೆಹಣ್ಣು ಮುಂತಾದ ತರಕಾರಿ ಮಿಶ್ರಿತ ಆಹಾರವನ್ನು ತರಕಾರಿ ಮಂಡಿಯವರು ಸಹ ಇವರಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಆಹಾರದ ಅಭಾವದಿಂದ ಬಳಲಿದ ನೂರಾರು ನಾಯಿಗಳು ಸೇರಿದಂತೆ ಪ್ರಾಣಿಗಳಿಗೆ ಈ ಸಂಸ್ಥೆ ಆಹಾರ ಒದಗಿಸುವ ಪುಣ್ಯದ ಕಾರ್ಯ ಮಾಡುತ್ತಿದೆ. ಈ ಯುವ ಮನಸ್ಸುಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಕೇಳಿ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ