ಬೆಂಗಳೂರು (ಮಾ.05): ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ಸೋಂಕು ಭಾರತೀಯರ ನಿದ್ದೆಗೆಡಿಸಿದೆ. ಇದುವರೆಗೂ ದೇಶದಲ್ಲಿ 30 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಸೋಂಕು ದೃಢಪಟ್ಟಿದ್ದ ತೆಲಂಗಾಣ ಟೆಕ್ಕಿ ಬೆಂಗಳೂರಿನಲ್ಲಿದ್ದು ಹೋಗಿದ್ದ ಹಿನ್ನೆಲೆ ರಾಜ್ಯದಲ್ಲಿ ಈ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ.
ಕೊರೋನಾ ಸೋಂಕು ಶಂಕೆ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಐವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಿಗೆ ಯಾವುದೇ ಸೊಂಕು ಇಲ್ಲ ಎಂಬ ಕುರಿತು ವರದಿಯಾಗಿದೆ. ಈ ಹಿನ್ನೆಲೆ ವಿಶೇಷ ವಾರ್ಡ್ನಿಂದ ಶಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ಶಂಕಿತರನ್ನು ಪ್ರತ್ಯೇಕವಾಗಿ ಸುದೀರ್ಘ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರಲ್ಲಿ ಯಾವುದೇ ರೋಗದ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಇದರಲ್ಲಿ ಇಬ್ಬರು ಇತ್ತೀಚೆಗಷ್ಟೇ ಸೌದಿ ಅರೇಬಿಯಾ ಹಾಗೂ ಜಪಾನ್ನಿಂದ ರಾಜ್ಯಕ್ಕೆ ಮರಳಿದ್ದರು.
ಇನ್ನು ನಿನ್ನೆ ಒಂದೇ ದಿನಕ್ಕೆ ಸುಮಾರು 153 ಜನರ ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಈ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಕೊರೋನಾ ವೈರಸ್ ತಡೆಯಲು ಫೇಸ್ ಮಾಸ್ಕ್ ಬಳಸಿದರೆ ಸೋಂಕು ಹೆಚ್ಚುವ ಸಾಧ್ಯತೆ: ವರದಿ
ತೆಲಂಗಾಣ ಮತ್ತು ದೆಹಲಿ ಸೋಂಕಿತರನ್ನು ನಿರಂತರ ತಪಾಣೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಟಲಿಯ 14 ಪ್ರವಾಸಿಗರು ಸೇರಿದಂತೆ ಆರು ಭಾರತೀಯರಲ್ಲಿ ಈ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಇಂದು ಕೂಡ ಪೇಟಿಎಂ ಉದ್ಯೋಗಿಯೊಬ್ಬರು ಈ ಸೋಂಕಿಗೆ ತುತ್ತಾಗಿದ್ದು, ಈ ಸಂಖ್ಯೆ 30ಕ್ಕೆ ಏರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ