news18-kannada Updated:May 10, 2020, 5:31 PM IST
ಭಟ್ಕಳ ನಗರ
ಕಾರವಾರ(ಮೇ . 10) : ಕಳೆದ 21 ದಿನಗಳ ಕಾಲ ಕೊರೋನಾದಿಂದ ಶಾಂತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಈಗ ಮೂರು ದಿನದಲ್ಲಿ ಬಂದ 28 ಪಾಸಿಟಿವ್ ಪ್ರಕರಣಗಳು ಅಧಿಕಾರಿಗಳನ್ನ ಹೈರಾಣಾಗಿಸಿವೆ. ಜತೆಗೆ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ಈಗ ಮುಂದಿನ ಭವಿಷ್ಯದ ದಿನ ಕೊರೋನಾ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎನ್ನುವ ಆತಂಕ ಶುರುವಾಗಿದೆ.
ಕೊರೋನಾ ಸೋಂಕಿತೆ 659ರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಈಗ ಸೋಂಕಿತರ ಸಂಖ್ಯೆ ಭಟ್ಕಳದಲ್ಲಿ ಹೆಚ್ಚುತ್ತಲೆ ಇದೆ. ಮಲ್ಲಿಗೆ ನಗರಿಯ ಸುವಾಸನೆಯನ್ನ ಕೊರೋನಾ ಮಹಾಮಾರಿ ಕೆಡಿಸಿಸುತ್ತಿದೆ. ಇಷ್ಟು ದಿನ ಸಂಬಂಧಿಯೊಳಗೆ ವ್ಯಾಪಿಸಿಕೊಂಡಿದ್ದ ಕೊರೋನಾ ಈಗ ಸಮೂದಾಯ ಹರಡಿಕೊಳ್ಳುವ ಆತಂಕ ಎದುರಾಗಿದೆ.
ಇಂದು ಬೆಳಕಿಗೆ ಬಂದ ಪ್ರಕರಣದಲ್ಲಿ ಸೋಂಕಿತೆ 659ಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ 42 ವರ್ಷದ ಆಟೋ ಚಾಲಕನಿಗೆ ಇವತ್ತು ಸೋಂಕು ಪತ್ತೆ ಆಗಿದ್ದು, ಈತನ ಸಂಪರ್ಕದಲ್ಲಿ ಇದ್ದ ನೂರಾರು ಜನರನ್ನ ಹುಡುಕಾಟ ನಡೆಸಿ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ಆಟೋ ಚಾಲಕನ ಟ್ರಾವೆಲ್ ಹಿಸ್ಟರಿ ನೋಡುತ್ತಾ ಹೋದರೆ ಇವತ್ತು ನಾಳೆ ಭಟ್ಕಳದಲ್ಲಿ ಕೊರೋನಾ ಹಾವಳಿ ಮುಗಿಯಲ್ಲ ಎನ್ನುವುದು ಅಧಿಕಾರಿ ಮೂಲದಿಂದ ತಿಳಿದು ಬಂದಿದೆ.
ಇನ್ನು, ಭಟ್ಕಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾರವಾರದ ಜನ ಕಂಗಾಲಾಗಿ ಆತಂಕದಿಂದ ಮನೆಗೆ ಜಾರುತ್ತಿದ್ದಾರೆ. ಭಟ್ಕಳದ ಎಲ್ಲ ಸೋಂಕಿತರನ್ನ ಕಾರವಾರ ಕಿಮ್ಸ್ ಗೆ ಚಿಕಿತ್ಸೆಗಾಗಿ ಸ್ಥಳಾಂತರಿಸುತ್ತಿದ್ದು, ಕಿಮ್ಸ್ ಸುತ್ತಮುತ್ತ ಜನವಸತಿ ಪ್ರದೇಶದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ನೆನ್ನೆಯಿಂದ ಕಾರವಾರದಲ್ಲಿ ಈ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಮತ್ತೆ ಮತ್ತೆ ಸೋಂಕಿತರ ಸಂಖ್ಯೆ ಭಟ್ಕಳ ವ್ಯಾಪಿಸಿಕೊಳ್ಳುವುದು ಖಾತ್ರಿಯಾಗಿದೆ. ಈ ನಡುವೆ ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾರವಾರ ಜನರ ನಿದ್ದೆ ಹಾಳಾಗುತ್ತಿದೆ. ಆದರೂ ಅಧಿಕಾರಿವರ್ಗ ಕಾರವಾರದ ಜನರಿಗೆ ಧೈರ್ಯ ಹೇಳಿದೆ.
ಇದನ್ನೂ ಓದಿ :
ಸೀಲ್ ಡೌನ್ ಬ್ಯಾರಿಕೇಡ್ ತೆರವಿಗೆ ಬಂದ ಎಂಪಿ ಜಾಧವ್ : ಶೇಮ್ ಶೇಮ್ ಎಂದ ಪುರಸಭಾ ಸದಸ್ಯರು
ಒಟ್ಟಾರೆ ಭಟ್ಕಳದಲ್ಲಿ ಈಗ ಕೊರೋನಾ ಸಮೂದಾಯವನ್ನ ಹರಡುವ ಹೊಸ್ತಿಲಲ್ಲಿದೆ, ಭಟ್ಕಳ ದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಜನರನ್ನ ಕುಗ್ಗಿಸುತ್ತಿದ್ದು, ಮುಂದೇನಾಗುತ್ತೆ ಎನ್ನುವುದು ಈಗ ಪ್ರಶ್ನೆಯಾಗಿದೆ.
First published:
May 10, 2020, 5:21 PM IST