• ಹೋಂ
  • »
  • ನ್ಯೂಸ್
  • »
  • Corona
  • »
  • Bangalore Coronavirus: ಬೆಂಗಳೂರಲ್ಲಿ ಐಸಿಯು ಬೆಡ್​ಗಳೇ ಸಿಗ್ತಿಲ್ಲ; ಚಿತಾಗಾರದಲ್ಲಿ ಶವ ಸುಡಲೂ ದಿನವಿಡೀ ಕಾಯಬೇಕು!

Bangalore Coronavirus: ಬೆಂಗಳೂರಲ್ಲಿ ಐಸಿಯು ಬೆಡ್​ಗಳೇ ಸಿಗ್ತಿಲ್ಲ; ಚಿತಾಗಾರದಲ್ಲಿ ಶವ ಸುಡಲೂ ದಿನವಿಡೀ ಕಾಯಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bangalore Coronavirus Updates: ಬೆಂಗಳೂರಿನಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಇರೋ ಐಸಿಯು ಬೆಡ್​ಗಳು ಭರ್ತಿಯಾಗಿವೆ. ಲಾಕ್ ಡೌನ್ ಬದಲಿಗೆ ವೀಕೆಂಡ್ ಲಾಕ್​ಡೌನ್​ಗೆ ಸರ್ಕಾರ ಆದೇಶಿಸುವ ಸಾಧ್ಯತೆಯಿದೆ.

  • Share this:

    ಬೆಂಗಳೂರು (ಏ. 19): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರು ಕೊರೋನಾ ಹಬ್ ಆಗಿ ಪರಿವರ್ತನೆಯಾಗಿದೆ. ನಗರದಲ್ಲಿ ದಿನನಿತ್ಯ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆ ಮಾಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ಗಳು ಕೂಡ ಸಿಗುತ್ತಿಲ್ಲ, ಆ್ಯಂಬುಲೆನ್ಸ್​ ಸೇವೆಯೂ ದೊರಕದಂತಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರೂ ಸೋಂಕು ಹರಡುವಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಅನಗತ್ಯವಾಗಿ ಹೊರಗೆ ಸಂಚಾರ ಮಾಡುವುದನ್ನು, ಗುಂಪಾಗಿ ಸೇರುವುದನ್ನು ಕಡಿಮೆ ಮಾಡದಿದ್ದರೆ ಆಪತ್ತು ಖಂಡಿತ!


    ಬೆಂಗಳೂರಿನಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಇರೋ ಐಸಿಯು ಬೆಡ್​ಗಳು ಭರ್ತಿಯಾಗಿವೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ,‌ ಮೆಡಿಕಲ್ ಕಾಲೇಜುಗಳಲ್ಲಿ 323 ಐಸಿಯು ಬೆಡ್, 265 ವೆಂಟಿಲೇಟರ್ ಇರೋ ಐಸಿಯು ಬೆಡ್ ಗಳಿವೆ. ಈ ಪೈಕಿ 316 ಐಸಿಯು ಬೆಡ್ ಗಳು ಫುಲ್, 260 ವೆಂಟಿಲೇಟರ್ ಇರೋ ಐಸಿಯು ಬೆಡ್​ಗಳು ಭರ್ತಿಯಾಗಿವೆ. ನಿನ್ನೆ ರಾತ್ರಿ ಕೇವಲ 7 ಐಸಿಯು ಬೆಡ್ ಗಳು ಖಾಲಿ ಇದ್ದವು. 5 ವೆಂಟಿಲೇಟರ್ ಇರೋ ಐಸಿಯು ಬೆಡ್ ಗಳು ಖಾಲಿ ಇದ್ದವು. ಇದೀಗ ಖಾಲಿ ಇದ್ದ ಐಸಿಯು, ವೆಂಟಿಲೇಟರ್ ಬೆಡ್​ಗಳು ಭರ್ತಿ ಆಗಿವೆ.


    ಬಿಬಿಎಂಪಿ ಅಧಿಕಾರಿಗಳು ನಿನ್ನೆ ಐಸಿಯು ಬೆಡ್ ಗಾಗಿ ಪರದಾಡಿದರು. ಐಸಿಯು ಬೆಡ್ ಗಳು ಫುಲ್ ಆಗಿರುವ ಕಾರಣ ಸೋಂಕಿತರನ್ನು ಶಿಫ್ಟ್ ಮಾಡಲು ಅಧಿಕಾರಿಗಳು ಪರದಾಡ ಬೇಕಾಯಿತು. ಐಸಿಯು ಹಾಸಿಗೆಗಳು ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ಐಸಿಯು ಹಾಸಿಗೆ ವ್ಯವಸ್ಥೆ ಮಾಡಲು ಸರ್ಕಾರ ವಿಶೇಷ ತಂಡ ರಚನೆ ಮಾಡಿತ್ತು. ಐಎಎಸ್ ಹಾಗೂ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಆರೋಗ್ಯ ಇಲಾಖೆ ರಚನೆ ಮಾಡಿತ್ತು.


    ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಬೆಂಗಳೂರಿನ ಸುಮನಹಳ್ಳಿ ಚಿತಾಗಾರದಲ್ಲಿ 31 ಕೋವಿಡ್ ಮೃತದೇಹಗಳ ದಹನ ಮಾಡಲಾಗಿದೆ. ಬೆಳಗ್ಗೆಯಿಂದಲೂ ತಡರಾತ್ರಿವರೆಗೂ ಸಿಬ್ಬಂದಿಗಳು ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಇಂದು ಬೆಳಗಿನ ಜಾವ 4.30ವರೆಗೂ ಮೃತದೇಹ ದಹನ ಮಾಡಲಾಗಿದೆ. ಮತ್ತೆ ಇಂದು 9 ಗಂಟೆಯಿಂದ ದಹನ ಪ್ರಕ್ರಿಯೆ ಶುರುವಾಗಿದೆ.


    ಕೊರೋನಾ ಎರಡನೇ ಅಲೆಗೆ ಬೆಂಗಳೂರು ದಂಗಾಗಿದ್ದು, ಬೆಂಗಳೂರಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ, ಮತ್ತಷ್ಟು ದಿನಗಳ ಕಾಲ ನೈಟ್ ಕರ್ಫ್ಯೂ ಮುಂದುವರೆಸುವ ಸಾಧ್ಯತೆಯಿದೆ. ಮಾರ್ಕೆಟ್ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸುವ ಸಾಧ್ಯತೆಯಿದೆ. ಲಾಕ್ ಡೌನ್ ಬದಲಿಗೆ ವೀಕೆಂಡ್ ಲಾಕ್​ಡೌನ್​ಗೆ ಸರ್ಕಾರ ಆದೇಶಿಸುವ ಸಾಧ್ಯತೆಯಿದೆ.

    Published by:Sushma Chakre
    First published: