ಇಟಾನಗರ: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಅರುಣಾಚಲಪ್ರದೇಶದ ಲೋಹಿತ್ ಜಿಲ್ಲೆಯ 31 ವರ್ಷದ ವ್ಯಕ್ತಿಯೊಬ್ಬರಲ್ಲಿ ಗುರುವಾರ ಕೋವಿಡ್ ಸೋಂಕು ದೃಢವಾಗಿದೆ. ಇದು ಅರುಣಾಚಲ ಪ್ರದೇಶದಲ್ಲಿ ಕೊರೋನಾ ವೈರಸ್ ನ ಮೊದಲ ಪ್ರಕರಣವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಮೆಡೋ ಪ್ರದೇಶದ ಈ ವ್ಯಕ್ತಿಯ ಸ್ವ್ಯಾಬ್ ಮಾದರಿಯನ್ನು ಅಸ್ಸಾಂನ ದಿಬ್ರುಘರ್ದಲ್ಲಿರುವ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ (ಆರ್ಎಂಆರ್ಸಿ) ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ವ್ಯಕ್ತಿಗೆ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಕಾರ್ಯದರ್ಶಿ ಪಿ ಪ್ರತಿಬಾನ್ ತಿಳಿಸಿದ್ದಾರೆ.
ಈ ವ್ಯಕ್ತಿ ಮಾರ್ಚ್ 13 ರಂದು ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಪ್ರಾಧಿಕಾರವು ರೋಗಿಯನ್ನು ತೇಜು ಜೋನೆಲ್ ಆಸ್ಪತ್ರೆಯ ವಿಶೇಷ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದೆ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರನ್ನು ಸಹ ಐಸೋಲೇಶನ್ನಲ್ಲಿ ಇರಿಸಿದ್ದು, ಎಲ್ಲರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ಸಭೆಗೆ ಹಾಜರಾದ ಇನ್ನೂ ಆರು ಮಂದಿ ನಮ್ಸಾಯಿ ಜಿಲ್ಲೆಯಲ್ಲಿದ್ದಾರೆ ಮತ್ತು ಅವರಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ರಾಜ್ಯ ವಿಚಕ್ಷಣ ಅಧಿಕಾರಿ ಎಲ್ ಜಂಪಾ ತಿಳಿಸಿದ್ದಾರೆ.
ಸಭೆಗೆ ಹಾಜರಾದ ನಂತರ ಮಾರ್ಚ್ 18 ರಂದು ರೋಗಿಯು ಮೆಡೊ ತಲುಪಿದ್ದಾರೆ. ಅವರು ಮಾರ್ಚ್ 16 ರಂದು ನಿಜಾಮುದ್ದೀನ್ ನಿಂದ ಹೊರಟಿದ್ದರು ಮತ್ತು ಮಾರ್ಚ್ 24 ರಿಂದ ಅವರನ್ನು ಮನೆಯಲ್ಲಿ ಐಸೋಲೇಶನ್ ನಲ್ಲಿ ಇಡಲಾಗಿತ್ತು. ಆದರೆ 16 ದಿನಗಳ ನಂತರವೂ ಸಹ ಕೊರೋನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಅವರಲ್ಲಿ ಕಾಣಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಪ್ರಧಾನಿಯೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್; ಕಟ್ಟುನಿಟ್ಟಾಗಿ ಲಾಕ್ಡೌನ್ ಪಾಲಿಸುವುದು ಸೇರಿ ಸೂಚನೆ ನೀಡಿದ ಪಿಎಂ
ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ ಎಂದು ಲೋಹಿತ್ ಜಿಲ್ಲಾ ಎಸ್ಪಿ ವಾಂಗ್ಡಿ ತುಂಗನ್ ಹೇಳಿದ್ದಾರೆ.
ರಾಜ್ಯದಿಂದ ಒಟ್ಟು 58 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರದವರೆಗೆ 38 ವರದಿಗಳು ಬಂದಿದ್ದು, ಅದರಲ್ಲಿ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ಜಂಪಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ