ಬೆಂಗಳೂರು (ಜುಲೈ 06); ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಮತ್ತು ಸಾವಿರಾರು ಜನ ಸಾವಿಗೆ ಕಾರಣವಾಗಿದ್ದ ಕೊರೋನಾ ಎರಡನೇ ಅಲೆ ಪ್ರಸ್ತುತ ತಣ್ಣಗಾಗಿದೆ. ಪರಿಣಾಮ ರಾಜ್ಯದಲ್ಲಿ ಲಾಕ್ಡೌನ್ ಅನ್ನು ತೆರವು ಮಾಡಿರುವ ರಾಜ್ಯ ಸರ್ಕಾರ ಅನ್ಲಾಕ್ 3.0 ಘೋಷಿಸಿದೆ. ಅಲ್ಲದೆ, ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಇಷ್ಟು ದಿನ ಮುಚ್ಚಿದ್ದ ಜಿಮ್ ಮತ್ತು ದೇವಸ್ಥಾನಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ, ವೀಕೆಂಡ್ ಕರ್ಫ್ಯೂವನ್ನು ಸಹ ತೆರವು ಮಾಡಲಾಗಿದೆ. ಆದರೆ, ಚಿತ್ರಮಂದಿರಗಳನ್ನು ಮಾತ್ರ ತೆರೆಯಲು ಅವಕಾಶ ನೀಡಿಲ್ಲ. ಹೀಗಾಗಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡುವಂತೆ ಒತ್ತಾಯಿಸಿ ಇಂದು ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಮತ್ತು ಪದಾಧಿಕಾರಿಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಅನುಮತಿ ನೀಡುವಂತೆ ಹಾಗೂ ಒಳಾಂಗಣದಲ್ಲಿ ಚಿತ್ರೀಕರಣ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಜತೆಗೆ ವಿಶೇಷ ಥಿಯೇಟರ್ ಮೇಲಿನ ಆಸ್ತಿ ತೆರಿಗೆ ಕಡಿತ ಗೊಳಿಸಲು, ವಿದ್ಯುತ್ ಬಿಲ್ ಮಿನಿಮಮ್ ಮಾಡಲು ಸೇರಿದಂತೆ ವಿಶೇಷ ಪ್ಯಾಕೇಜ್ ಗಾಗಿಯೂ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಕಳೆದ ಲಾಕ್ಡೌನ್ ಸಮಯದಿಂದಲೂ ಸಿಎಂ ಹಾಗೂ ಡಿಸಿಎಂ ಅನ್ನು 3,4 ಬಾರಿ ಭೇಟಿಯಾಗಿರುವ ಚಿತ್ರರಂಗದ ನಿಯೋಗ ಇಂದು ಮತ್ತೆ ಭೇಟಿಯಾಗಲು ಸಮಯ ಕೇಳಿದ್ದಾರೆ. ಆದರೆ, ಸಿಎಂ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂಬುದನ್ನು ಕಾದುನೋಡಬೇಕಿದೆ.
ಕೊರೋನಾ ಕಾರಣಕ್ಕೆ ಚಿತ್ರಮಂದಿರಗಳನ್ನು ಮುಚ್ಚಿರುವುದಲ್ಲದೆ, ಕಳೆದ ಹಲವು ದಿನಗಳಿಂದ ಚಿತ್ರೀಕರಣ ಕೆಲಸಕ್ಕೂ ತಡೆ ಒಡ್ಡಲಾಗಿದೆ. ಹೀಗಾಗಿ ಅನೇಕ ತಂತ್ರಜ್ಞರು ಚಿತ್ರೋದ್ಯಮ ಕೆಲಸದವರು ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂದು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಲಿರುವ ನಿರ್ಧಾರ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಮಹತ್ವ ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ