news18-kannada Updated:March 13, 2020, 5:44 PM IST
ಕೊರೊನಾ ವೈರಸ್ ಪೀಡಿತರಿಗೆ ವೈದ್ಯರ ಚಿಕಿತ್ಸೆ
ಕಲಬುರ್ಗಿ(ಮಾ.13) : ಕಲಬುರ್ಗಿಯಲ್ಲಿ ಕೊರೋನಾ ಮಾರಿಗೆ ಓರ್ವ ವೃದ್ಧ ಬಲಿಯಾದ ನಂತರ ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ. ಮೃತ ವೃದ್ಧನ ಕುಟುಂಬದ ಸದಸ್ಯರ ಪೈಕಿ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ನಾಲ್ವರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮತ್ತೊಂದೆಡೆ ವೃದ್ಧ ವಾಸಿಸುತ್ತಿದ್ದ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ (ಸೂಕ್ಷ್ಮ ವಲಯ) ಎಂದು ಘೋಷಿಸಲಾಗಿದೆ.
ಸೋಂಕಿನಿಂದ ವೃದ್ಧ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆತ ವಾಸಿಸುತ್ತಿದ್ದ ಮೋಮಿನಪುರ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ವೃದ್ದನ ಸಾವಿನ ಹಿನ್ನೆಲೆಯಲ್ಲಿ ಮೋಮಿನಪುರ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮೋಮಿನಪುರಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಿದರು.
ಮೃತನು ವಾಸಿಸುತ್ತಿದ್ದ ವ್ಯಕ್ತಿಯ ಮನೆಯ ಪ್ರದೇಶವನ್ನು ಪ್ರತ್ಯೇಕ ಝೋನ್ ಆಗಿ ಪರಿಗಣನೆ ಮಾಡಲು ತೀರ್ಮಾನಿಸಲಾಗಿದ್ದು, ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆ ಮಾಡಲಾಗಿದೆ. ಇಲ್ಲಿಂದ ಬೇರೆ ಪ್ರದೇಶಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಂಟೋನ್ಮೆಂಟ್ ಝೋನ್ ಸುತ್ತಲಿನ 5 ಕಿ.ಮೀ ಪ್ರದೇಶ ಬಫರ್ ಝೋನ್ ಎಂದು ಗುರುತು ಮಾಡಲಾಗಿದೆ. ಬಫರ್ ಝೋನ್ ನಲ್ಲಿ ಸೋಂಕಿನ ಕುರಿತು ಅರಿವು ಮೂಡಿಸಲು ಸೂಚನೆ ನೀಡಲಾಗಿದೆ. ಪಾಲಿಕೆ ಮತ್ತು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶರತ್ ಬಿ. ಸೂಚನೆ ನೀಡಿದ್ದಾರೆ.
ಕೊರೋನ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇಎಸ್ಐ ಆಸ್ಪತ್ರೆಯಲ್ಲಿ 400 ಬೆಡ್ ಗಳ ವಾರ್ಡ್ ಸ್ಥಾಪನೆ ಮಾಡಲಾಗುತ್ತಿದೆ. ಗಡಿಗಡಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ, ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿ ಸ್ಕ್ರೀನ್ ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಗಳನ್ನು ಇ.ಎಸ್.ಐ. ಆಸ್ಪತ್ರೆಗೆ ಸೇರಿಸಲಾಗುವುದು. ಅವರ ಜೊತೆಗೆ ಸಂಪರ್ಕದಲ್ಲಿರೋರ ಮೇಲೂ ನಿಗಾ. ಪರೀಕ್ಷೆ ಹೊರತುಪಡಿಸಿ ಶಾಲಾ-ಕಾಲೇಜು ತರಗತಿಗಳಿಗೆ ಅವಕಾಶವಿಲ್ಲ.
ಇದನ್ನೂ ಓದಿ :
‘ಕಲಬುರಗಿಯ ವೃದ್ಧ ಕೊರೋನಾ ಸೋಂಕಿನಿಂದಲೇ ಮೃತಪಟ್ಟ‘: ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ
ಮೃತನ ಸಂಬಂಧಿಕರ ಮೇಲೆ ತೀವ್ರ ನಿಗಾ ಇಡಲಾಗುವುದು. 31 ಜನ ಹೈರಿಸ್ಕ್ ಮತ್ತು 15 ಜನ ಲೋ ರಿಸ್ಕ್ ಎಂದು ಗುರುತಿಸಲಾಗಿದೆ. ಹೈರಿಸ್ಕ್ ಇರುವವರಿಗೆ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗುವುದು ಮೃತ ವೃದ್ಧನ ಕುಟುಂಬದ ಸದಸ್ಯರ ಪೈಕಿ ನಾಲ್ವರ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ, ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ. ನಾಳೆ ವರದಿ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
First published:
March 13, 2020, 5:43 PM IST