ಡೆಹರಾಡೂನ್: ಕೊರೊನಾ 2ನೇ ಅಲೆಯಿಂದ ಭಾರತ ವಿಷಮಸ್ಥಿತಿಯನ್ನು ಎದುರಿಸುತ್ತಿದೆ. ಕೊರೋನಾ ವಿರುದ್ಧದ ಭಾರತದ ಯುದ್ಧದಲ್ಲಿ ಅನೇಕ ಸಂಸ್ಥೆಗಳು ಕೈ ಜೋಡಿಸಿವೆ. ದೇಶದ ದೈತ್ಯ ಸಂಸ್ಥೆ ರಿಯಲನ್ಸ್ ಇದರಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ವಿದೇಶಿ ತಂತ್ರಜ್ಞಾನ ಆಮದು, ತನ್ನ ಸಂಸ್ಥೆಯ ಎಲ್ಲಾ ನೌಕರರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಉಚಿತವಾಗಿ ಲಸಿಕೆ ನೀಡುವ ಸೇರಿದಂತೆ ಹಲವು ವಿಧಗಳಲ್ಲಿ ರಿಲಯನ್ಸ್ ನೆರವಾಗುತ್ತಿದೆ. ಈಗ ಉತ್ತರಾಖಂಡ್ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 5 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅನಂತ್ ಅಂಬಾನಿ ಮಾದರಿಯಾಗಿದೆ. ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಉತ್ತರಾಖಂಡ್ ವಿಪತ್ತು ನಿರ್ವಹಣಾ ನಿಗಮಕ್ಕೆ ರಿಲಯನ್ಸ್ 5 ಕೋಟಿ ರೂ. ದೇಣಿಗೆ ನೀಡಿದೆ.
ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತೀರ್ಥ ಸಿಂಗ್ ರಾವತ್ ಅವರಿಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ದೇಶದ ಜನರಿಗೆ ನೆರವಾಗಲು ರಿಲಯನ್ಸ್ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಕೋವಿಡ್ ಪರಿಸ್ಥಿತಿಯಲ್ಲಿ ತನ್ನ ರಾಜ್ಯ ಜನತೆಗೆ ಉತ್ತಾರಾಖಂಡ್ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸುತ್ತೇವೆ. ನಿಮ್ಮ ಈ ಕೊರೋನಾ ಹೋರಾಟಕ್ಕೆ ನಾವು ಕೈಜೋಡಿಸಲು ಇಚ್ಛಿಸುತ್ತೇವೆ. ಹೀಗಾಗಿ ಉತ್ತರಾಖಂಡ್ ರಾಜ್ಯ ವಿಪತ್ತು ನಿರ್ವಹಣಾ ನಿಗಮಕ್ಕೆ 5 ಕೋಟಿ ರೂ. ದೇಣಿಗೆ ನೀಡುತ್ತಿದ್ದೇವೆ. ನಾವೆಲ್ಲಾ ಒಗ್ಗಟ್ಟಿನಿಂದ ಕೊರೋನಾ ವಿರುದ್ಧ ಹೋರಾಡೋಣ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈವರೆಗೆ ರಿಲಯನ್ಸ್ ಸಂಸ್ಥೆ ಮೂಲಕ ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ನೆರವನ್ನು ನೀಡುತ್ತಿದ್ದರು. ಈಗ ಅವರ ಪುತ್ರ ಅನಂತ್ ಅಂಬಾನಿ ಸಹ ಕೈ ಜೋಡಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಮ್ಮ ಇಡೀ ಕುಟುಂಬ ಕೋವಿಡ್ ನೆರವಿಗೆ ನಿಂತಿದೆ ಎಂದು ನೀತಾ ಅಂಬಾನಿ ತಿಳಿಸಿದ್ದರು. ಕೋವಿಡ್ ಪರಿಸ್ಥಿತಿ ವೇಳೆ ರಿಲಯನ್ಸ್ ಸಂಸ್ಥೆ ನೆರವಾಗುತ್ತಿರುವ ರೀತಿಗೆ ಸುಪ್ರೀಂ ಕೋರ್ಟ್ನಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ರಿಲಯನ್ಸ್ ಸಂಸ್ಥೆ ಜೆಮ್ಶೆಡ್ಪುರದಲ್ಲಿ ನೂರಾರು ಆಕ್ಸಿಜನ್ ಬೆಡ್ಗಳಿರುವ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ದೇಶಾದ್ಯಂತ ತನ್ನ ಸಂಸ್ಥೆಯ ಎಲ್ಲಾ ನೌಕರರು ಹಾಗೂ ಅವರ ಕುಟುಂಬಸ್ಥದ ಎಲ್ಲಾ ಸದಸ್ಯರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ