ಬೆಂಗಳೂರು: ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ವಿಚಾರ ಸರ್ಕಾರದ ಗಮನಕ್ಕೆ ತಂದರೆ ಅದಕ್ಕೆ ನಮ್ಮ ತಕರಾರಿಲ್ಲ. ಆರೋಪದಲ್ಲಿ ಸದುದ್ದೇಶ ಇರಬೇಕು. ಆದರೆ ಅವರು ದುರುದ್ದೇಶ ಹೊಂದಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬೇಕಾದವರಿಗೆ ಬೆಡ್ ಕೊಡಿಸ್ತಾ ಇದ್ರು. ಇದನ್ನು ಅಧಿಕಾರಿ ಯಶವಂತ ತಡೆ ಹಿಡಿದರು. ಅದಕ್ಕೆ ಸತೀಶ್ ರೆಡ್ಡಿ ಬೆಂಬಲಿಗರು ಅವರ ಮೇಲೆ ಹಲ್ಲೆ ಮಾಡಲು ಹೋಗಿದ್ರು. ಅದನ್ನು ಮರೆ ಮಾಚಲು ಈ ಕೆಲಸ ಮಾಡಿದ್ದಾರೆ. ಕೋಮು ವೈರಸ್ ಇವರಲ್ಲಿ ಸೇರಿ ಬಿಟ್ಟಿದೆ. ಕೇವಲ ಮುಸ್ಲಿಮರ ಹೆಸರೇ ಏಕೆ ಓದಬೇಕು. 205 ಮಂದಿಯಲ್ಲಿ ಅವರ ಹೆಸರೇ ಏಕೆ ಓದಬೇಕು. ಇದರಲ್ಲಿ ಕೋಮು ಉದ್ದೇಶ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಜಮೀರ್ ಅಹಮದ್ ಅವರು ತಮ್ಮ ಕ್ಷೇತ್ರದ ವೈದ್ಯಕೀಯ ಕಾರ್ಯಕರ್ತರಿಗೆ ಫುಡ್ ಕಿಟ್ ಹಾಗೂ 5 ಸಾವಿರ ಗೌರವ ಧನ ನೀಡ್ತಾ ಇದ್ದಾರೆ. ಈ ಕೆಲಸ ಸ್ವಾಗತಾರ್ಹ ಎಂದ ಅವರು, ರಾಜ್ಯದಲ್ಲಿ ಲಸಿಕೆ ಕೊರತೆ ಇದೆ. ಇಲ್ಲಿಯವರೆಗೆ 60 ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕ್ತಿನಿ ಅಂದರು. ಆದರೆ, ಈಗ ಅವರಿಗೆ ಎರಡನೇ ಡೋಸ್ ಲಸಿಕೆ ಸಿಗ್ತಾ ಇಲ್ಲ. ಕೋ ವ್ಯಾಕ್ಸಿನ್ ಸಿಗ್ತಾ ಇಲ್ಲ. ಕೊವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಎರಡನೇ ಲಸಿಕೆ ಕೊಡುವುದು ಸರ್ಕಾರದ ಜವಾಬ್ದಾರಿ. ಆರು ವಾರದ ಮೇಲೆ ಕೊಟ್ರೆ ಅದು ವೇಸ್ಟ್ ಎಂದು ಹೇಳಿದರು.
18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ಸಿಎಂ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಲಸಿಕೆ ಇಲ್ಲದೇ ಉದ್ಘಾಟನೆ ಮಾಡಿ ಬಿಟ್ರು. ಉದ್ಘಾಟಿಸಿ 10 ದಿನ ಕಳೆದರೂ ಲಸಿಕೆ ಇಲ್ಲ. ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸ ಮಾಡಬಾರದು. ಇದು ಸರ್ಕಾರದ ಬೇಜಾವಾಬ್ದಾರಿ ವರ್ತನೆ. ಎಲ್ಲರಿಗೂ ಲಸಿಕೆ ಸಿಗುತ್ತೆ ಅಂತಾ ಯಡಿಯೂರಪ್ಪ ಸುಳ್ಳು ಹೇಳುತ್ತಾ ಇದ್ದಾರೆ. ಎಲ್ಲರಿಗೂ ಲಸಿಕೆ ಕೊಡಲು ಎಲ್ಲಿದೆ ಲಸಿಕೆ ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿ: Karnataka Lockdown: ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸುವ ಚಿಂತನೆ ಇಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಲಾಕ್ ಡೌನ್ ಮಾಡಿದ ಮೇಲೆ ಕಾರ್ಮಿಕರು, ಆಟೋ ಬೀದಿ ವ್ಯಾಪಾರಿಗಳು, ಕ್ಷೌರಿಕ ಮಡಿವಾಳ ಅಕ್ಕಸಾಲಿಗರು ಇವರೆಲ್ಲ ಎಲ್ಲಿಗೆ ಹೋಗಬೇಕು. ಅವರೇನು ಉಳಿತಾಯ ಇಟ್ಟುಕೊಂಡಿರುತ್ತಾರಾ? ಹೀಗಾಗಿ ಆರ್ಥಿಕ ಪ್ಯಾಕೇಜ್ ಕೊಡಿ ಎಂದಿದ್ದೇನೆ. ನಾನು ಟೀಕೆ ಮಾಡಿಲ್ಲ. ಸಲಹೆ ನೀಡಿದ್ದೇನೆ. ಇದು ಅವರ ಬಡವರ ವಿರೋಧಿತನ ತೋರಿಸುತ್ತದೆ. ಖಜಾನೆ ಖಾಲಿಯಾಗಿದ್ದರೆ, ಸಾಲ ಮಾಡಿ ಕೊಡಿ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ