Coronavirus: ಕೇವಲ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಇದ್ದ ಕೋವಿಡ್ ನೆಗೆಟಿವ್ ರಿಪೋರ್ಟ್ (Covid Negative Report) ನಿಯಮ ಈಗ ತಮಿಳುನಾಡಿಗೂ ಅನ್ವಯವಾಗಿದೆ. ನೆರೆಯ ರಾಜ್ಯ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಯಾವುದೇ ಪ್ರಯಾಣಿಕರು ತಮ್ಮೊಂದಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ. ಕರ್ನಾಟಕದ ಗಡಿಯನ್ನು ಪ್ರವೇಶಿಸುವ 72 ಗಂಟೆಗಳ ಮುಂಚೆ ಪರೀಕ್ಷೆ ಮಾಡಿಸಿ ಪಡೆದ ರಿಪೋರ್ಟ್ನ್ನು ನೀಡುವುದು ಕಡ್ಡಾಯ ಎಂದು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ. ತಮಿಳುನಾಡಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿರುವುದೇ ಈ ಎಚ್ಚರದ ನಿಯಮಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಕರ್ನಾಟಕ ರಾಜ್ಯವನ್ನು ಸುತ್ತುವರಿದಿರುವ ಮೂರು ಪ್ರಮುಖ ರಾಜ್ಯಗಳಿಂದ ಪ್ರಯಾಣಿಸುವವರು ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಕಡ್ಡಾಯವಾಗಿದೆ.
ಈ ಹೊಸಾ ನಿಯಮ ಭಾನುವಾರದಿಂದ ಜಾರಿಯಾಗಲಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿರುವ ಪುನಜನೂರ್ ಚೆಕ್ ಪೋಸ್ಟ್, ನಾಲ್ ರಸ್ತೆ, ಅರ್ಧಾನಿಪುರ, ಪಾಲಾರ್ ಮುಂತಾದವು ಚಾಮರಾಜನಗರ ಜಿಲ್ಲೆಗೆ ಸೇರುತ್ತವೆ. ಈ ಸ್ಥಳಗಳಲ್ಲಿ ತಮಿಳುನಾಡಿನಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗ್ತಿದೆ.
ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ತರುವ ನಿಯಮ ತಮಿಳುನಾಡಿನಿಂದ ಬರುವ ಎಲ್ಲಾ ಪ್ರಯಾಣಕರಿಗೂ ಅನ್ವಯಿಸಲಿದೆ. ಹಣ್ಣು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ಟ್ರಕ್ಗಳಲ್ಲಿ ತೆಗೆದುಕೊಂಡು ಬರುವ ಟ್ರಕ್ ಚಾಲಕರಿಗೂ ಇದು ಅನ್ವಯವಾಗಲಿದೆ. ಒಂದು ವೇಳೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದಿದ್ದರೆ ಅಂಥವರನ್ನು ಮುಲಾಜಿಲ್ಲದೇ ವಾಪಸ್ ಕಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Breakfast Ideas: ಬೆಳಗ್ಗಿನ ತಿಂಡಿಗೆ ಈ ಪ್ರೋಟೀನ್ಯುಕ್ತ ಆಹಾರ ಟ್ರೈ ಮಾಡಿ !
ಆದರೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಲಸಿಕೆ ಪಡೆದವರು ವ್ಯಾಕ್ಸಿನ್ ಸರ್ಟಿಫಿಕೇಟ್ ಮಾತ್ರ ತೋರಿಸಿದರೆ ಸಾಕಾಗುತ್ತದೆ. ಕೇವಲ ವ್ಯಾಪಾರ ವಹಿವಾಟು ಮಾತ್ರವಲ್ಲದೆ ದೇವಸ್ಥಾನಗಳಿಗೆ ತೆರಳುವವರು ಅದರಲ್ಲೂ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವವರು ಅಥವಾ ವಾಟರ್ ಫಾಲ್ಸ್ ಮತ್ತಿತರ ಪ್ರವಾಸಿ ತಾಣಗಳಿಗೆ ಟ್ರಿಪ್ ಹೋಗಲು ಬರುವವರು ಹೆಚ್ಚಾಗಿ ತಮಿಳುನಾಡಿನಿಂದ ಕರ್ನಾಟಕದ ಕಡೆ ಬರುತ್ತಿದ್ದಾರೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ ಮಾಡಲಾಗಿದೆ.
ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಂ ಸಿ ರವಿ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ನೆರೆಹೊರೆಯ ರಾಜ್ಯಗಳಲ್ಲಿ ಕೋವಿಡ್ ನಿಯಂತ್ರಣ ತಪ್ಪುತ್ತಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಮೊದಲಿನ ಎರಡೂ ಅಲೆಗಳ ಸಂದರ್ಭದಲ್ಲಿ ಜನ ಸಾಕಷ್ಟು ಸಾವು ನೋವುಗಳನ್ನು ಅನುಭವಿಸಿದ್ದೇವೆ. ಆದ್ದರಿಂದ ಮೂರನೇ ಅಲೆಯ ಆಗಮನದ ಮುನ್ನ ಅತೀ ಹೆಚ್ಚು ಮುತುವರ್ಜಿ ವಹಿಸಲೇಬೇಕಾಗಿದೆ. ಚಾಮರಾಜನಗರ ಜಿಲ್ಲೆ ಗಡಿ ಭಾಗದಲ್ಲಿ ಇರುವುದರಿಂದ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲೂ ಯಾವುದೇ ರೀತಿಯ ಲೋಪವಾಗದಂತೆ ಮುನ್ನೆಚ್ಚರಿಕೆ ಜೊತೆಗೆ ಎಲ್ಲಾ ನಿಯಮಗಳ ಕಡ್ಡಾಯ ಪಾಲನೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಸೊಂಕು ಹರಡದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ತಮ್ಮ ಮೇಲಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ